ಬಾಗಲಕೋಟೆ: ಮದ್ಯ ಸೇವಿಸಿ ಮನೆಗೆ ಬಂದು ದಿನಪ್ರತಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ತಂದೆಯನ್ನು ಮಗ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮುಧೋಳ ನಗರದ ಬಂಡಿವಡ್ಡರ್ ಕಾಲೋನಿಯಲ್ಲಿ ನಡೆದಿದೆ.
ಶೆಟ್ಟೆಪ್ಪ ಬಂಡಿವಡ್ಡರ್ (45) ಕೊಲೆಯಾದ ವ್ಯಕ್ತಿಯಾಗಿದ್ದು, 19 ವರ್ಷದ ಮಂಜು ಬಂಡಿವಡ್ಡರ್ ತಂದೆಯನ್ನೇ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ನಿತ್ಯ ಕುಡಿದು ಮನೆಗೆ ಬರುತ್ತಿದ್ದ ತಂದೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದರು. ಅಲ್ಲದೇ ಮದ್ಯ ಸೇವಿಸಿದ ಮತ್ತಿನಲ್ಲಿ ಪತ್ನಿಯ ಮೇಲೆ ಹಲ್ಲೆ ಕೂಡ ನಡೆಸುತ್ತಿದ್ದ.ನಿನ್ನೆ ತಡರಾತ್ರಿ ಕೂಡ ಶೆಟ್ಟೆಪ್ಪ ಪತ್ನಿಯ ಮೇಲೆ ಹಲ್ಲೆ ನಡೆಸಿ ಜಗಳ ನಡೆಸಿದ್ದು, ಈ ವೇಳೆ ಪುತ್ರ ಮಂಜು ಜಗಳ ಬಿಡಸಲು ಮುಂದಾಗಿದ್ದ. ಆದರೆ ವಿಕೋಪಕ್ಕೆ ತಿರುಗಿದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಕಟ್ಟಿಗೆಯಿಂದ ಮಂಜು ತಂದೆಯ ತಲೆಗೆ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿದ್ದರು.
ಘಟನೆಯ ಕುರಿತು ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.