ಕೊನೆಯಲ್ಲಿ ಸಂಪರ್ಕ‌ ಕಡಿತ – ಇಸ್ರೋ ವಿಜ್ಞಾನಿಗಳಿಗೆ ಧೈರ್ಯ ತುಂಬಿದ ಮೋದಿ

Public TV
1 Min Read
MODI A

ಬೆಂಗಳೂರು: ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ ಕೈಗೊಂಡಿರುವ ಚಂದ್ರಯಾನ-2 ಯೋಜನೆ ಬಹುತೇಕ ಯಶಸ್ವಿಯಾಗಿ ನಡೆದಿದ್ದು, ಆದರೆ ಅಂತಿಮ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್ ನಿಂದ ಸಿಗ್ನಲ್ ಸಂಪರ್ಕ ಕಡಿತಗೊಂಡಿದೆ.

ವಿಕ್ರಮ್ ಲ್ಯಾಂಡ್ ಆಗುವ ಪ್ರಕ್ರಿಯೆ ಸರಿಯಾಗಿ ಆರಂಭಗೊಂಡಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುವ ಸೂಚನೆಯೂ ಲಭಿಸಿತು. ಆದರೆ ಲ್ಯಾಂಡರಿನಿಂದ ಪಥ ಬದಲಾದ ಕಾರಣ ಇಸ್ರೋ ಕೇಂದ್ರಕ್ಕೆ ಬರಬೇಕಾದ ಸಂದೇಶ ತಡವಾಗಿತ್ತು. ಚಂದ್ರನನ್ನು ತಲುಪಲು 2.1ಕಿಮೀ ದೂರ ಇದ್ದ ಸಂದರ್ಭದಲ್ಲಿ ಲ್ಯಾಂಡರಿನಿಂದ ಸಿಗ್ನಲ್ ಲಭಿಸಲಿಲ್ಲ. ಪರಿಣಾಮ ಇಸ್ರೋ ಅಧಿಕಾರಿಗಳ ಮುಖದಲ್ಲಿ ಆತಂಕ ಟೆನ್ಷನ್ ಕಂಡು ಬಂದಿತ್ತು.

ಲ್ಯಾಂಡ್ ಆಗದ ಕಾರಣ ವಿಜ್ಞಾನಿಗಳು ಆತಂಕದಲ್ಲಿದ್ದರು. ಈ ವೇಳೆ ವಿಜ್ಞಾನಿಗಳಿಗೆ ಧೈರ್ಯ ತುಂಬಿದ ಪ್ರಧಾನಿ ಮೋದಿ, ಇದು ನಿಮ್ಮ ಕಡಿಮೆ ಸಾಧನೆ ಅಲ್ಲ ಎಂದು ಧೈರ್ಯಗೇಡ ಬೇಡಿ ಎಂದು ಬೆನ್ನುತ್ತಟ್ಟಿದರು. ಅಲ್ಲದೇ ದೇಶ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಸಾಧನೆಯ ಹಾದಿಯಲ್ಲಿ ಏರಿಳಿತ ಇದ್ದೇ ಇರುತ್ತದೆ. ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಹೇಳಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಕೆಲ ಸಮಯ ಮಾತನಾಡಿ ಇಸ್ರೋ ಕೇಂದ್ರದಿಂದ ನಿರ್ಗಮಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರು, 2.1 ಕಿ.ಮೀ ಅಂತರದಲ್ಲಿ ಸಿಗ್ನಲ್ ಕಡಿತಗೊಂಡಿದೆ. ಲ್ಯಾಂಡರ್ ಸಿಗ್ನಲ್ ಪಡೆಯಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಬಹುಬೇಗ ನಿಮ್ಮೊಂದಿಗೆ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *