– ಕಿಟಕಿ ಗಾಜುಗಳು ಪುಡಿ ಪುಡಿ; ಆತಂಕಗೊಂಡ ಪ್ರಯಾಣಿಕರು
ಪಟ್ನಾ: ಬಿಹಾರದ (Bihar) ಮುಜಫ್ಫರ್ಪುರ್ನಲ್ಲಿ ಸೋಮವಾರ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ಸೇರಿದಂತೆ ಮೂರು ರೈಲುಗಳ ಮೇಲೆ ದುಷ್ಕರ್ಮಿಗಳು ಕಲ್ಲೆಸೆದ ಘಟನೆ ನಡೆದಿದೆ. ಇದರಿಂದಾಗಿ ಹಲವು ಕೋಚ್ಗಳ ಕಿಟಕಿ ಗಾಜುಗಳು ಹಾನಿಗೊಳಗಾಗಿ ಪ್ರಯಾಣಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಪಾಟ್ಲಿಪುತ್ರ-ಗೋರಖ್ಪುರ್ ವಂದೇ ಭಾರತ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ 26501) ಮಜೌಲಿಯ ಮತ್ತು ಖಬ್ರಾ ಪ್ರದೇಶಗಳ ಸಮೀಪ ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ವಂದೇ ಭಾರತ್ನ ಮೂರು ಕೋಚ್ಗಳ ಕಿಟಕಿ ಗಾಜುಗಳು ಭಾಗಶಃ ಹಾನಿಗೊಳಗಾಗಿವೆ. ಪ್ರಯಾಣಿಕರು ತಕ್ಷಣ ರೈಲ್ವೇ ಅಧಿಕಾರಿಗಳು ಮತ್ತು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್)ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಬರಲಿದೆ ಹೈಸ್ಪೀಡ್ ಬುಲೆಟ್ ರೈಲು
ಈ ಘಟನೆಯ ಸ್ವಲ್ಪ ಸಮಯದ ನಂತರ ಇದೇ ರೈಲು ಮಾರ್ಗದಲ್ಲಿ ಸಂಚರಿಸುತ್ತಿದ್ದ ಇನ್ನೂ ಎರಡು ರೈಲುಗಳಾದ ಪಾಟ್ನಾ-ಜಯನಗರ್ ಇಂಟರ್ಸಿಟಿ ಎಕ್ಸ್ಪ್ರೆಸ್ (15550) ಮತ್ತು ಲಿಚ್ಛವಿ ಎಕ್ಸ್ಪ್ರೆಸ್ (14006) ಮೇಲೂ ಕಲ್ಲು ಎಸೆತ ನಡೆದಿದೆ. ಈ ಎರಡು ರೈಲುಗಳ ಹಲವು ಕೋಚ್ಗಳ ಕಿಟಕಿ ಗಾಜುಗಳು ಹಾನಿಗೊಳಗಾಗಿವೆ. ಘಟನೆಗೆ ಸಂಬಂಧಿಸಿದಂತೆ ರೈಲ್ವೇ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ದುಷ್ಕೃತ್ಯಕ್ಕೆ ಸಂಬಂಧಪಟ್ಟವರನ್ನು ಪತ್ತೆಹಚ್ಚುವ ಪ್ರಯತ್ನ ನಡೆಸುತ್ತಿದ್ದಾರೆ.
ಈ ನಡುವೆ ಸಸಾರಾಂ ರೈಲು ನಿಲ್ದಾಣದಲ್ಲಿ ಸಸಾರಾಂನಿಂದ ಪಟ್ನಾಗೆ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲಿನ ಒಂದು ಕೋಚ್ಗೆ ಬೆಂಕಿ ಬಿದ್ದಿದೆ. ಪ್ರಯಾಣಿಕರು ಮತ್ತು ಪ್ಲ್ಯಾಟ್ಫಾರ್ಮ್ನಲ್ಲಿದ್ದವರು ಭಯಭೀತರಾಗಿ ಓಡಾಡಿದ್ದರು. ಘಟನೆಯಲ್ಲಿ ಒಂದು ಕೋಚ್ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಅದನ್ನು ರೈಲಿನಿಂದ ಬೇರ್ಪಡಿಸಲಾಗಿದೆ. ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಎನ್ನಲಾಗಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ. ಇದನ್ನೂ ಓದಿ: ಪ.ಬಂಗಾಳದಲ್ಲಿ ಜೂ.1ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮಾಸಿಕ 3,000 ರೂ. ನೆರವು

