ಕೋಲಾರ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಮಾರಿಯಮ್ಮ ದೇವಾಲಯದಲ್ಲಿ ನಡೆದಿದೆ.
ಪ್ರದೀಪ್ ರಾಜ್ 28 ಕೊಲೆಯಾದ ದುರ್ದೈವಿ. ಭಾನುವಾರ ಬಡಾವಣೆಯ ಮಾರಿಯಮ್ಮ ದೇವಾಲಯದಲ್ಲಿ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸ್ಥಳೀಯರೊಂದಿಗೆ ಕುಡಿದು ಪ್ರದೀಪ್ ಗಲಾಟೆ ಮಾಡಿಕೊಂಡಿದ್ದನು ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಆತನನ್ನು ಕಿಡಿಗೇಡಿಗಳು ಕೊಲೆ ಮಾಡಿ ನಂತರ ಶವವನ್ನು ದೇವಾಲಯದ ಬಳಿ ತಂದು ಬಿಸಾಡಿದ್ದಾರೆ ಎಂದು ಆರೋಪಿಸಿಲಾಗಿದೆ. ಇಂದು ಮುಂಜಾನೆ ಶವವಾಗಿ ಪ್ರದೀಪ್ ರಾಜ್ ಪತ್ತೆಯಾಗಿದ್ದು, ಕೊಲೆ ಮಾಡಿ ದೇವಾಲಯ ಬಳಿ ಬಿಸಾಡಿ ಹೋಗಿದ್ದಾರೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.
ಕೊಲೆಯಾದ ಪ್ರದೀಪ್ ರಾಜ್ ಮುಖ ಹಾಗೂ ತಲೆಯ ಭಾಗದಲ್ಲಿ ಗಾಯಗಳಾಗಿದ್ದು, ಘಟನಾ ಸ್ಥಳಕ್ಕೆ ಕೆಜಿಎಫ್ ಎಸ್ಪಿ ಮೊಹ್ಮದ್ ಸುಜೀತ ಸೇರಿದಂತೆ ಶ್ವಾನ ದಳದ ಸಿಬ್ಬಂದಿ ಭೇಟಿ ನೀಡಿದ್ದಾರೆ. ಈ ಸಂಬಂಧ ಅಂಡರ್ ಸನ್ ಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.