ನವದೆಹಲಿ: ಈ ಬಾರಿ ವಿಶ್ವಕಪ್ ಕ್ರಿಕೆಟ್ನ ಸೆಮಿಫೈನಲ್ ಹಂತದಲ್ಲಿ ಟೀಂ ಇಂಡಿಯಾ ಎಡವಿತ್ತು. ಭಾರತಕ್ಕೆ ಹಿಂದಿರುಗಿರುವ ಟೀಂ ಇಂಡಿಯಾ ಆಟಗಾರರು ಸೇರಿದಂತೆ ತಂಡದ ನಾಯಕ ವಿರಾಟ್ ಕೊಹ್ಲಿ ಸೋಲಿನ ಬಗ್ಗೆ ಮಾತನಾಡಿರಲಿಲ್ಲ. ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಮೊದಲ ಬಾರಿಗೆ ವಿಶ್ವಕಪ್ ಸೋಲಿನ ಬಗ್ಗೆ ಮಾತನಾಡಿದ್ದಾರೆ.
ವಿಶ್ವಕಪ್ ಪಂದ್ಯದಿಂದ ಹೊರಗೆ ಬಂದಾಗ ಜನರು ಅಷ್ಟು ಬೇಗ ನಮ್ಮನ್ನು ಸ್ವೀಕಾರ ಮಾಡಲ್ಲ. ನಾವು ಮಲಗಿ ಎದ್ದ ಮೇಲೆಯೂ ಕೆಲವೊಮ್ಮೆ ಸೋಲಿನ ಬಗ್ಗೆ ಚಿಂತಿಸುತ್ತೇವೆ. ನಾವು ಹೆಚ್ಚು ತಪ್ಪು ಮಾಡಿಲ್ಲವಾದ್ರೂ ವಿಶ್ವಕಪ್ ಪಂದ್ಯದಿಂದ ಹೊರ ಬರಬೇಕಾಯಿತು ಎಂದು ವಿರಾಟ್ ಕೊಹ್ಲಿ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ನಿಮ್ಮ ಮೇಲೆ ನಿಮಗೆ ವಿಶ್ವಾಸವಿದ್ರೆ, ಎಲ್ಲ ಆಟಗಾರರು ಚೆನ್ನಾಗಿ ಆಡುತ್ತಿರುತ್ತಾರೆ. ಕೆಲವೊಮ್ಮೆ ನೀವೇ ಚೆನ್ನಾಗಿ ಆಡುತ್ತಿಲ್ಲ ಎಂಬ ವಿಷಯ ಅರಿವಾದಾಗ ಎಲ್ಲರಿಗೂ ನಿರ್ದೇಶನ ನೀಡುವುದು ಕಷ್ಟವಾಗುತ್ತದೆ. ಈ ಬಾರಿ ನಾವು ಹೆಚ್ಚು ತಪ್ಪುಗಳನ್ನು ಮಾಡದಿದ್ದರೂ, ಕೊನೆಯ ಕ್ಷಣದಲ್ಲಿ ಟೂರ್ನಿಯಿಂದ ಹೊರ ಬರಬೇಕಾಯಿತು ಎಂದರು.
ಒಂದು ವೇಳೆ ನೀವು ತಪ್ಪು ಮಾಡುತ್ತಿದ್ದರೆ, ಅದರ ಹೊಣೆಯನ್ನು ನಾನು ತೆಗೆದುಕೊಳ್ಳಲು ಸಿದ್ಧನಿರುತ್ತೇನೆ. ಆದರೆ ಗೆಲುವು ಕಂಡಾಗ ಅದರ ಯಶಸ್ಸು ಕೀರ್ತಿಯನ್ನು ನಾನೊಬ್ಬನೇ ಪಡೆಯುವುದು ಅಷ್ಟು ಸುಲಭವಲ್ಲ. 2019ರ ವಿಶ್ವಕಪ್ ನಲ್ಲಿ ಲೀಗ್ ಹಂತದಿಂದಲೂ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಾ ಬಂದಿತ್ತು. ಸೆಮಿಫೈನಲಿನಲ್ಲಿ ಕೆಲ ತಪ್ಪುಗಳಿಂದ ವಿಶ್ವಕಪ್ ಗೆ ಮುತ್ತಿಕ್ಕುವ ಅವಕಾಶದಿಂದ ವಂಚಿತರಾದೆವು ಎಂದು ಬೇಸರ ವ್ಯಕ್ತಪಡಿಸಿದರು.
ನಾನು ದೊಡ್ಡವನಾಗುವರೆಗೂ ಹಲವು ತಪ್ಪುಗಳು ನನ್ನಿಂದ ಆಗಿವೆ. ಕೆಲವು ಸಂದರ್ಭಗಳಲ್ಲಿ ವಿಚಲಿತನಾಗಿ ನನ್ನ ಸ್ಥಿಮಿತವನ್ನ ಕಳೆದುಕೊಳ್ಳುತ್ತೇನೆ. ಹಾಗಾಗಿ ಮೊದಲು ನನ್ನನ್ನು ನಾನು ತಯಾರು ಮಾಡಿಕೊಂಡೆ. ಪತ್ನಿ ಮತ್ತು ಕುಟುಂಬ ಪಾಲನೆ-ಪೋಷಣೆಯೇ ನನ್ನ ಜೀವನದ ಮೊದಲ ಅದ್ಯತೆ. ಕುಟುಂಬವೇ ನಮ್ಮ ಜೀವನದ ಕೊನೆಯವರೆಗೂ ಬರುತ್ತೆ. ಉಳಿದಂತೆ ಎಲ್ಲವೂ ಒಂದು ದಿನ ಕೊನೆಗೊಳ್ಳುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ ಎಂದರು.