ಚಿಕ್ಕೋಡಿ: ಆರಂಭದಲ್ಲೇ ದೋಸ್ತಿ ಸರ್ಕಾರದ ವಿರುದ್ಧ ಬಂಡಾಯ ಸಾರಿ ರಾಜೀನಾಮೆ ನೀಡಿರುವ ಶಾಸಕ ರಮೇಶ್ ಜಾರಕಿಹೊಳಿ ಸದ್ಯ ಮುಂಬೈನಲ್ಲಿದ್ದುಕೊಂಡೆ ಉಪಚುನಾವಣೆಗೆ ತಯಾರಿ ನಡೆಸಿದ್ದಾರೆ.
ಗೋಕಾಕ್ ಸಾಹುಕಾರ ನಡೆ ಯಾವ ಕಡೆ ಎಂಬುದರ ಕುರಿತು ಅಳಿಯ ಅಂಬಿರಾವ್ ಪಾಟೀಲ್ ಮಾವನ ಸಂದೇಶವನ್ನು ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಬೆಂಬಲಿಗರು ಮತ್ತು ಕಾರ್ಯಕರ್ತರ ಸಭೆಯ ಮೂಲಕ ಅಂಬಿರಾವ್ ತಮ್ಮ ಮಾವ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಸೇರುವ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಭಾನುವಾರ ಕರೆ ಮಾಡಿ ಕಾರ್ಯಕರ್ತರ ಸಭೆ ನಡೆಸುವಂತೆ ರಮೇಶ್ ಜಾರಕಿಹೊಳಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅಳಿಯ ಅಂಬಿರಾವ್ ಸಭೆ ನಡೆಸಿ ಕಾರ್ಯಕರ್ತರಿಗೆ ಈ ಕುರಿತು ವಿವರಿಸಿದ್ದಾರೆ.
ಇಂದು ಬೆಳಗಾವಿ ಜಿಲ್ಲೆಯ ಗೋಕಾಕ್ನ ಸ್ವಗೃಹದಲ್ಲಿ ಅವರ ಅಳಿಯ ಅಂಬಿರಾವ್ ಪಾಟೀಲ್ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಸಲಾಯಿತು. ಸಭೆಯಲ್ಲಿ ಗೋಕಾಕ್ ಮತಕ್ಷೇತ್ರದ ಕಾರ್ಯಕರ್ತರು ಮತ್ತು ಜಿಲ್ಲಾ, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಸೇರಿದ್ದರು. ಅಂಬಿರಾವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ, ಮತ್ತು ಜೆಡಿಎಸ್ ಎಂದು ನೋಡದೇ ಪಕ್ಷಾತೀತವಾಗಿ ರಮೇಶ್ ಜಾರಕಿಹೊಳಿ ಎಲ್ಲಿರುತ್ತಾರೊ ಅವರನ್ನು ಬೆಂಬಲಿಸಿ ಅವರನ್ನು ಆಶೀರ್ವಾದಿಸಿ ಎಂದು ಮುಖಂಡರು ಹಾಗೂ ಕಾರ್ಯಕರ್ತರಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡರು, ರಮೇಶ್ ಜಾರಕಿಹೊಳಿ ಎಲ್ಲೇ ಇದ್ದರು ಯಾವುದೇ ಪಕ್ಷಕ್ಕೆ ಹೋದರು ಅವರನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಸಾಹುಕಾರ ಅಳಿಯ ಅಂಬಿರಾವ್ ಪಾಟೀಲ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಒಂದು ಕಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ತಮ್ಮ ಸರ್ಕಾರ ಉಳಿಸಿಕೊಳ್ಳಲು ರಾಜಕೀಯ ತಂತ್ರಗಳನ್ನು ರೂಪಿಸುತ್ತಿದ್ದರೆ, ಇತ್ತ ಸೈಲೆಂಟ್ ಆಗಿ ರಮೇಶ್ ಜಾರಕಿಹೊಳಿ ತಮ್ಮ ಅಳಿಯನ ಮೂಲಕ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ.