ಬೆಂಗಳೂರು: ಕೃಷ್ಣ ರಾಜಸಾಗರದ ಅಣೆಕಟ್ಟಿನಲ್ಲಿ(ಕೆಆರ್ಎಸ್) 80 ಅಡಿ ನೀರು ಇದೆ. ಹೀಗಾಗಿ ಇನ್ನು ಒಂದು ತಿಂಗಳು ಮಾತ್ರ ಬೆಂಗಳೂರಿಗೆ ಕುಡಿಯವ ನೀರು ಕೊಡುವ ಸಾಧ್ಯತೆ ಇದೆ. ಒಂದು ವೇಳೆ ಮಳೆ ಬರದೇ ಇದ್ದಲ್ಲಿ ಅಥವಾ ಒಳ ಹರಿವು ಬರದೇ ಹೋದಲ್ಲಿ ಬೆಂಗಳೂರಿಗೆ ನೀರು ಕೊಡಲು ಸಾಧ್ಯವಿಲ್ಲ. ಇಂತಹ ಪರಿಸ್ಥಿಗೆ ನಾವು ಬಂದಿದ್ದೇವೆ ಎಂದು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2, 3 ದಿನಗಳಿಂದ ಎಲ್ಲಾ ಕಡೆ ಮಳೆ ಹಾಗೂ ಮೋಡವಾಗುತ್ತಿದೆ. ಹೀಗಾಗಿ ಮಾನ್ಸೂನ್ ಈಗ ಪ್ರಾರಂಭವಾಗುತ್ತಿದೆ ಎಂದು ಅನಿಸುತ್ತಿದೆ. ಮಳೆ ಚೆನ್ನಾಗಿ ಆದರೆ ಕಾವೇರಿ ಕೊಳ್ಳ ಪ್ರದೇಶ ಭಾಗಮಂಡಲ ಭಾಗದಲ್ಲಿ ಹೆಚ್ಚು ಮಳೆಯಾಗಿ ಒಳ ಹರಿವು ಜಾಸ್ತಿಯಾಗಿ ಕೆಆರ್ಎಸ್ ತುಂಬಿಕೊಂಡರೆ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಒಂದು ವೇಳೆ ಮಳೆ ತಡವಾದರೆ ಅಥವಾ ಮಳೆ ಕಡಿಮೆಯಾಯ್ತು ಅಂತಾದ್ರೆ ನಮ್ಮ ಸಮಸ್ಯೆ ಪ್ರಾರಂಭವಾಗುತ್ತದೆ. ಮಳೆ ಅಲ್ಲದೇ ಪರ್ಯಾಯ ಇಲ್ಲ. ಸಮುದ್ರದಿಂದ ನೀರು ತಂದು ಕುಡಿಯಲು ಆಗೋದಿಲ್ಲ ಎಂದು ಡಿಸಿಎಂ ವಿವರಿಸಿದರು.
ಲಿಂನಮಕ್ಕಿಯಿಂದ ನೀರು ಬೆಂಗಳೂರಿಗೆ ತರಬೇಕೆಂದು ಅಂದಾಜು ಮಾಡುತ್ತಿದ್ದೇವೆ. ಅದರ ಸಾಧಕ-ಬಾಧಕಗಳನ್ನು ನೋಡೋದಕ್ಕೆ ಸೂಚನೆ ಕೊಟ್ಟಿದ್ದೇವೆ. ಲಿಂಗನ ಮಕ್ಕಿಯಿಂದ ನೀರನ್ನು ಯಾವ ಕಡೆಯಿಂದ ನೀರು ತರಬಹುದು. ಶಿವಮೊಗ್ಗ- ಚಿತ್ರದುರ್ಗ- ವಾಣಿ ವಿಲಾಸ- ಹೆಸರಘಟ್ಟ ದ ಮೂಲಕ ನೀರು ತರುವ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ. ಒಂದು ವೇಳೆ ಇದು ಸಾಧ್ಯತೆ ಇದ್ದರೆ ಆ ಬಳಿಕ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಸದಾಶಿವ ವರದಿ ಆಯೋಗ ಜಾರಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ವರದಿ ಜಾರಿ ಬಗ್ಗೆ ಸರ್ಕಾರ ಗಮನ ಹರಿಸಿದೆ. ಆದಷ್ಟು ಬೇಗ ಈ ಬಗ್ಗೆ ತೀರ್ಮಾನ ಮಾಡ್ತೀವಿ. ವರದಿ ಜಾರಿಗೆ ಸರ್ಕಾರ ಗಭೀರವಾಗಿದೆ ಎಂದರು.
ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಂ 33 ನೇ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿರುವ ಬಾಬು ಜಗಜೀವನ್ ರಾಂ ಪುತ್ಥಳಿಗೆ ಡಿಸಿಎಂ ಮಾಲಾರ್ಪಣೆ ಮಾಡಿದರು. ಈ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಸಚಿವ ಪಿಯಾಂಕ್ ಖರ್ಗೆ, ತಿಮ್ಮಾಪುರ ಸೇರಿ ಹಲವರು ಭಾಗಿಯಾಗಿದ್ದರು.