ಬೆಂಗಳೂರು: ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಮುಖ್ಯಮಂತ್ರಿ ಹುದ್ದೆ ಯಾಕೆ ತಪ್ಪಿಸಲಾಯಿತು ಎನ್ನುವ ಪ್ರಶ್ನೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಳಿಯೇ ಕೇಳಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿ ಮತ್ತೊಮ್ಮೆ ಕಾಲೆಳೆದಿದ್ದಾರೆ.
ಎಚ್.ವಿಶ್ವನಾಥ್ ಅವರು ಇಂದು ಎಚ್.ಡಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ಸಚಿವ ಎಚ್.ಡಿ.ರೇವಣ್ಣ ಸೇರಿ ಹಲವು ಜೆಡಿಎಸ್ನಲ್ಲಿ ಸಿಎಂ ಅರ್ಹತೆಯ ನಾಯಕರಿದ್ದಾರೆ ಎಂದು ಮಾಜಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಆದರೆ ಅವರ ಟ್ವೀಟ್ ಬಗ್ಗೆ ನನ್ನನ್ನು ಯಾಕೆ ಕೇಳುತ್ತೀರಿ? ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನ ತಪ್ಪಿದ್ದು ಯಾಕೆ ಅಂತ ಅವರನ್ನೇ ವಿಚಾರಿಸಿ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆಯವರ ಜೊತೆ ಯಾರನ್ನೂ ಹೋಲಿಸಬೇಡಿ. ಈ ರಾಜ್ಯಕ್ಕೆ ಅವರ ಕೊಡುಗೆ ಅಪಾರ. ಮಲ್ಲಿಕಾರ್ಜುನ ಖರ್ಗೆಯವರದ್ದು ಮುಖ್ಯಮಂತ್ರಿ ಸ್ಥಾನಕ್ಕಿಂತಲೂ ಮಿಗಿಲಾದ ವ್ಯಕ್ತಿತ್ವ. ಅವರ ಹೆಸರಿಗೆ ಬೇರೆ ಯಾರದ್ದೇ ಹೆಸರನ್ನು ಥಳುಕು ಹಾಕಬೇಡಿ ಎಂದು ತಿಳಿಸಿದರು.