ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕನ್ನಡಿಗರ ಮೇಲೆ ಅನ್ಯಭಾಷಿಗರ ದರ್ಬಾರ್ ನಡೆದಿದೆ. ದರ್ಬಾರ್ ಮಾಡಿದವರಿಂದಲೇ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಕೈ ಮುಗಿಸಿ ಕ್ಷಮೆ ಕೇಳಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೈಸೂರಿನ ಮೃಗಾಲಯ ಸಮೀಪದಲ್ಲಿರುವ ಶರವಣ ಭವನ ಹೋಟೆಲ್ನ ಬೋರ್ಡ್ ಗಳಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಭಾಷೆ ಮಾತ್ರ ಇತ್ತು. ಕನ್ನಡದ ನಾಮಫಲಕ ಇರಲಿಲ್ಲ. ಇದನ್ನು ಕನ್ನಡಿಗ ಗ್ರಾಹಕರೊಬ್ಬರು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪ್ರಶ್ನಿಸಿದ ಗ್ರಾಹಕನಿಗೆ ಹೋಟೆಲ್ ಮ್ಯಾನೇಜರ್ ಅವಾಜ್ ಹಾಕಿ, ತಾಕತ್ತಿದ್ದರೆ ಬೋರ್ಡ್ ಬದಲಿಸು ಎಂದಿದ್ದ. ಮ್ಯಾನೇಜರ್ ದರ್ಪವನ್ನು ಆ ಗ್ರಾಹಕ ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದರು. ವಿಡಿಯೋ ಗಮನಿಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹೊಟೇಲ್ಗೆ ಮುತ್ತಿಗೆ ಹಾಕಿದ್ದಾರೆ.
ಕನ್ನಡಪರ ಸಂಘಟನೆಗಳ ಪ್ರತಿಭಟನೆಗೆ ಬೆಚ್ಚಿದ ಹೊಟೇಲ್ ಮ್ಯಾನೇಜರ್, ಕೊನೆಗೆ ತಾನಾಗಿಯೇ ಹಿಂದಿ ನಾಮಫಲಕ ತೆರವುಗೊಳಿಸಿ ಕೈ ಮುಗಿದು ಕ್ಷಮೆಯಾಚಿಸಿದ್ದಾನೆ. ಜೊತೆಗೆ ಶೀಘ್ರದಲ್ಲೇ ಕನ್ನಡ ನಾಮಫಲಕ ಹಾಕುವುದಾಗಿ ಹೇಳಿದ್ದಾನೆ.