ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮೇ 23ರ ನಂತರ ಮಹತ್ವದ ಬೆಳಣಿಗೆಗಳು ನಡೆಯಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ, ಸಿಎಂ ಸ್ಥಾನದ ಚರ್ಚೆ ಮಹತ್ವ ಪಡೆದುಕೊಂಡಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಹೇಳುವ ಮೂಲಕ “ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಲಿ” ಎಂಬ ಆಪ್ತರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೇ ಆಪ್ತ ಶಾಸಕರು ತಮ್ಮ ಕನಸ್ಸನ್ನು ಕೈ ಬಿಟ್ಟಿದ್ದಾರೆ ಎನ್ನಲಾಗಿದ್ದು, ಲೋಕ ಫಲಿತಾಂಶದ ಬಳಿಕ ಸಿಎಂ ಸ್ಥಾನ ಬದಲಾಗುವುದಿಲ್ಲ. ಆದರೆ ಸಿಎಂ ಸ್ಥಾನ ಬೇಡ ಎಂದು ಮೈತ್ರಿ ಮುಂದೆ 9 ಷರತ್ತುಗಳನ್ನು ಸಿದ್ದರಾಮಯ್ಯ ಅವರು ಇಟ್ಟಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ದೋಸ್ತಿ ಸರ್ಕಾರವನ್ನ ಉಳಿಸಿಕೊಳ್ಳುವ ಸಲುವಾಗಿ ಹಾಗೂ 37 ಜೆಡಿಎಸ್ ಶಾಸಕರಿಗೆ ಇರುವ ಲಾಭ ತಪ್ಪಿಸಲು ಷರತ್ತುಗಳನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ. ಇದರಲ್ಲಿ ಸರ್ಕಾರದಲ್ಲಿ 2 ಡಿಸಿಎಂ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷಕ್ಕೆ 26 ಸಚಿವ ಸ್ಥಾನ ನೀಡುವುದು ಪ್ರಮುಖ ಬೇಡಿಕೆಗಳಾಗಿದೆ. ಜೆಡಿಎಸ್ ಪಕ್ಷಕ್ಕೆ ಸದ್ಯ ನೀಡಿರುವ 12 ಸಚಿವ ಸ್ಥಾನದ ಬದಲಾಗಿ 5 ಸ್ಥಾನ ನೀಡುವುದು ಹಾಗೂ ಪ್ರಮುಖ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ಗೆ ನೀಡುವುದು ಷರತ್ತುಗಳ ಪಟ್ಟಿಯಲ್ಲಿ ಸೇರಿದೆ.
ದೋಸ್ತಿ ಸರ್ಕಾರದ ಆಡಳಿತ ಕಾರ್ಯದಲ್ಲೂ ಕೆಲ ಷರತ್ತುಗಳನ್ನು ವಿಧಿಸಿದ್ದು, ಪ್ರತಿ ಸಂಪುಟ ಸಭೆಗೂ ಮುನ್ನ ಸಮನ್ವಯ ಸಮಿತಿ ಸಭೆ ಕಡ್ಡಾಯ ಸೇರಿದಂತೆ ಪ್ರಮುಖ ನೀತಿ ನಿರ್ಧಾರಗಳು ಜಂಟಿ ಘೋಷಣೆ ಮಾಡಬೇಕೆಂಬ ಬೇಡಿಕೆ ಇದೆ. ಸರ್ಕಾರದ ಆಡಳಿತದಲ್ಲಿ ಆಯಾ ಸಚಿವರು ತಮ್ಮ ಇಲಾಖೆಯಲ್ಲಿನ ಕಾರ್ಯಗಳನ್ನೇ ನಿರ್ವಹಿಸಿ ಬೇಕೆ ವಿನಃ ಇತರೇ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಗೃಹ ಇಲಾಖೆ ವಿಚಾರದಲ್ಲಿ ಮಾತ್ರ ಸ್ವತಂತ್ರವಾಗಿ ಇರಬೇಕು ಎಂಬುದು ಬೇಡಿಕೆಗಳ ಪಟ್ಟಿಯಲ್ಲಿದೆ. ಅಂತಿಮವಾಗಿ ಯಾವುದೇ ಇಲಾಖೆಗಳಲ್ಲಿ ಅಧಿಕಾರಿಗಳ ವರ್ಗಾವಣೆ ನಡೆಯಬೇಕಾದರೆ ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಆ ಬಳಿಕ ವರ್ಗಾವಣೆ ಮಾಡಬೇಕೆಂಬ ಷರತ್ತಗಳನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ.