ಬಳ್ಳಾರಿ: ದೇಶದಲ್ಲಿ ಮೋದಿ ಗಾಳಿ ಇಲ್ಲ ಸುನಾಮಿನೇ ಇದೆ. ಮಹಾಘಟ್ಬಂಧನ್ ಕೊಚ್ಚಿ ಹೋಗುತ್ತದೆ. ಅದರ ಜೊತೆಗೆ ರಾಜ್ಯದಲ್ಲಿನ ಮೈತ್ರಿ ಕೂಡ ಕೊಚ್ಚಿ ಹೋಗುತ್ತದೆ. ಲೋಕಸಭಾ ಚುನಾವಣೆಯ ನಂತರ ರಾಜ್ಯದ ಮೈತ್ರಿ ಸರ್ಕಾರ ಉಳಿಯಲ್ಲ. ಬಿಎಸ್ವೈ ಮತ್ತೆ ಸಿಎಂ ಆಗ್ತಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.
ಬಳ್ಳಾರಿಯ ಸಂಗನಕಲ್ಲ ಗ್ರಾಮದಲ್ಲಿಂದು ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಪರವಾಗಿ ಪ್ರಚಾರ ನಡೆಸಿ ಮಾತನಾಡಿದ ಅವರು, ಮೈಸೂರು-ಹಾಸನ-ಮಂಡ್ಯದಲ್ಲಿ ಮೈತ್ರಿ ಮಾಡಿಕೊಂಡವರ ಮಧ್ಯೆ ಹೊಂದಾಣಿಕೆ ಇಲ್ಲ. ಕಾಂಗ್ರೆಸ್ ಕಾರ್ಯಕರ್ತರೇ ಮೋದಿಗೆ ವೋಟ್ ಹಾಕಿ ಎಂದು ಘೋಷಣೆ ಕೂಗುತ್ತಿದ್ದಾರೆ ಎಂದರು.
ಮಂಡ್ಯದಲ್ಲಿ ಸುಮಲತಾ ಪರ ಅಲೆ ಇದೆ. ಮೈಸೂರಿನಲ್ಲಿ ಕಾಂಗ್ರೆಸ್ ಸೋತರೆ ನಾವು ಜವಾಬ್ದಾರಿ ಅಲ್ಲ ಎಂದು ಜಿ.ಟಿ ದೇವೆಗೌಡ ಹೇಳುತ್ತಿದ್ದಾರೆ. ಹೀಗಾಗಿ ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಲೇವಡಿ ಮಾಡಿದರು.
ಬಿಜೆಪಿ ಅಭ್ಯರ್ಥಿ ದೇವೆಂದ್ರಪ್ಪಗೆ ಬಳ್ಳಾರಿ ಜನರ ನಾಡಿಮಿಡಿತ ಗೊತ್ತಿದೆ. ಅವರಿಗೆ ಡಿಗ್ರಿ, ರ್ಯಾಂಕ್ ಬೇಕಾಗಿಲ್ಲ. ಜನರ ಸಮಸ್ಯೆ ಆಲಿಸಲು ಮನಸ್ಸಿದ್ದರೆ ಸಾಕು. ಉಗ್ರಪ್ಪಗೆ ಬಳ್ಳಾರಿಯ ABCD ಗೊತ್ತಿಲ್ಲ. ಸಿಎಂ ಕುಮಾರಸ್ವಾಮಿ ಏನು ಓದಿದ್ದಾರೆ. ರೇವಣ್ಣ 8ನೇ ಕ್ಲಾಸ್ ಓದಿದ್ದು, ಈಗ PWD ಮಿನಿಸ್ಟರ್ ಆಗಿಲ್ವಾ ಎಂದು ದೇವೇಂದ್ರಪ್ಪ ಓದಿನ ಬಗ್ಗೆ ಪ್ರಶ್ನೆ ಮಾಡೋರಿಗೆ ಚಾಟಿ ಬೀಸಿದರು.
ಇದರ ಜೊತೆಗೆ ಸಿಎಂ ಕುಮಾರಸ್ವಾಮಿ ಅವರಿಗೆ ಪುಲ್ವಾಮ ದಾಳಿಯ ಬಗ್ಗೆ ಗೊತ್ತಿದರೂ ಯಾಕೆ ಹೇಳಿಲ್ಲ. ಅವರ ಮೇಲೆ ದೇಶದ್ರೋಹದ ಕೇಸ್ ಹಾಕಬೇಕು ಎಂದು ಜಗದೀಶ್ ಶೆಟ್ಟರ್ ಆಗ್ರಹಿಸಿದರು.