ರಾಯಚೂರು: ಸುಮಲತಾ ಅವರ ಬಗ್ಗೆ ರೇವಣ್ಣ ಅವರು ನೀಡಿರುವ ಹೇಳಿಕೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ರಾಜ್ಯ ಸರ್ಕಾರದ ಪ್ರಮುಖ ಮಂತ್ರಿ ಬಾಯಲ್ಲಿ ಈ ರೀತಿಯ ಮಾತು ಹೇಳಬಾರದಿತ್ತು. ಅದ್ದರಿಂದ ಜೆಡಿಎಸ್ ಪಕ್ಷದ ರಾಜ್ಯಾಧಕ್ಷನಾಗಿ ರೇವಣ್ಣನ ಮಾತಿಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಮಲತಾ ಕುರಿತು ರೇವಣ್ಣ ಹಾಗೇ ಮಾತನಾಡಬಾರದಿತ್ತು. ಜೆಡಿಎಸ್ ಪಕ್ಷ ಮಹಿಳೆಯರಿಗೆ ಗೌರವ ಕೊಡುವ ಪಕ್ಷ. ನಾಲಿಗೆ ತಪ್ಪಿ ಮಾತನಾಡಿದ್ದಾರೆ. ಅವರ ಮಾತಿಗೆ ನಾನು ಕ್ಷಮೆ ಕೇಳುತ್ತೇನೆ. ಇದಕ್ಕಿಂತ ಹೆಚ್ಚಿಗೆ ಏನು ಹೇಳಲಿ ಎಂದರು.
ಅಲ್ಲದೇ ಎಲ್ಲಾ ಪಕ್ಷದಲ್ಲೂ ಕುಟುಂಬ ರಾಜಕಾರಣವಿದೆ. ಸಿದ್ದರಾಮಯ್ಯನ ಮನೆಯಲ್ಲಿಲ್ವಾ? ಯಡಿಯೂರಪ್ಪನವರ ಮನೆಯಲ್ಲಿಲ್ವಾ ಎಲ್ಲೆಡೆಯಿದೆ. ಕುಟುಂಬ ರಾಜಕಾರಣ ಎನ್ನುವ ಪ್ರಶ್ನೆ ದೇಶದಲ್ಲಿ ಈಗ ಉಳಿದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯನ್ನು ಸಮರ್ಥಿಸಿಕೊಂಡರು.
ರಫೇಲ್ ಕಡತಗಳು ಕಳ್ಳತನವಾಗಿರುವುದಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದವರನ್ನ ಕಳ್ಳರು ಎಂದು ಹೇಳುತ್ತಾ ಮೋದಿ ಏನಾಗಿದ್ದಾರೆ? ದೇಶದ ರಕ್ಷಣಾ ವ್ಯವಸ್ಥೆಯ ರಫೇಲ್ ಕಡತ ಕಳ್ಳತನವಾಗಿದ್ದು, ವಿಶ್ವದಲ್ಲಿ ಇದು ದೇಶಕ್ಕೆ ಆದ ಅವಮಾನ. ಇಲ್ಲಿ ಚೌಕಿದಾರ್ ನೇ ಕಳ್ಳ ಆಗಿಬಿಟ್ಟನಾ? ಮೋದಿ ತಾವು ಮಾಡಿದ ಆರ್ಥಿಕ ಅಪರಾಧ ಮುಚ್ಚಿಕೊಳ್ಳಲು ಕಳ್ಳತನವಾಗಿದೆ ಎಂದು ಹೇಳುತ್ತಿದ್ದಾರೆ. ಇಂತಹವರು ದೇಶದ ಜನರನ್ನ ಹೇಗೆ ರಕ್ಷಿಸುತ್ತಾರೆ ಎಂದು ಪ್ರಶ್ನಿಸಿದರು.
ಪಾಕಿಸ್ತಾನದ ವಿರುದ್ಧದ ದಾಳಿಯನ್ನ ಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು 22 ಸೀಟ್ ಗೆದ್ದುಬಿಡುತ್ತೇವೆ ಎಂದು ತಮ್ಮ ಸತ್ಯ ಹೇಳಿದ್ದಾರೆ. ಈ ಹಿಂದೆ ಮೋದಿಯನ್ನ ಜನರು ನಂಬಿದ್ದರು ಈಗ ನಂಬಲು ಸಿದ್ಧರಿಲ್ಲ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv