ಬೆಳಗಾವಿ: ದೋಸ್ತಿ ಸರ್ಕಾರದ ಕಾಂಗ್ರೆಸ್ ಪಕ್ಷದಿಂದ ಬಂಡಾಯದ ಬಾವುಟ ಹಾರಿಸಿ ಮುಂಬೈ ತೆರಳಿದ್ದ ಶಾಸಕರ ಹೋಟೆಲ್ ಕೊಠಡಿಯ ಮುಂದೇ ಡು ನಾಟ್ ಡಿಸ್ಟ್ರಬ್ ಬೋರ್ಡ್ ನೇತು ಹಾಕಲಾಗಿದ್ದು, ಶಾಸಕರು ಬೆಂಗಳೂರಿಗೆ ಆಗಮಿಸಿದ್ದರಾ? ಎಂಬ ಅನುಮಾನ ವ್ಯಕ್ತವಾಗಿದೆ.
ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಗೂ ಹಾಜರಾಗದೆ ಸಮ್ಮಿಶ್ರ ಸರ್ಕಾರಕ್ಕೆ ಮುಜಗುರ ಉಂಟಾಗುವಂತೆ ಮಾಡಿದ್ದರು. ಸದ್ಯ ಅವರ ಕೊಠಡಿಯ ಬಾಗಿಲಿಗೆ ಬೋರ್ಡ್ ನೇತು ಹಾಕಿರುವ ಹಿನ್ನೆಲೆಯಲ್ಲಿ ಹೋಟೆಲಿನಲ್ಲಿದ್ದ ಗೋಕಾಕ್ ಶಾಸಕ ಹಾಗೂ ಆಥಣಿ ಶಾಸಕರಾದ ಮಹೇಶ್ ಕುಮಟಳ್ಳಿ ಅವರೊಂದಿಗೆ ಇದ್ದ ಪಕ್ಷೇತರ ಶಾಸಕರು ಮುಂಬೈನಿಂದ ವಾಪಸ್ ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ. ನಾಳೆ ನಡೆಯಲಿರುವ ಸದನದಲ್ಲಿ ಭಾಗವಹಿಸುವ ಮೂಲಕ ಆಪರೇಷನ್ ಕಮಲ ಪ್ರಸಂಗಕ್ಕೆ ತೆರೆ ಎಳೆಯುತ್ತರಾ ಎಂಬ ಪ್ರಶ್ನೆ ಉದ್ಭವಿಸಿದೆ.
ಈಗಾಗಲೇ ಬೆಂಗಳೂರಿನಲ್ಲಿರುವ ಶಾಸಕ ನಾಗೇಂದ್ರ ಮತ್ತು ಉಮೇಶ್ ಜಾದವ್ ಅವರ ನಡೆ ಮತ್ತಷ್ಟು ಕುತೂಹಲ ಮೂಡಿಸಿದೆ. ಆದರೆ ಬಂಡಾಯ ಶಾಸಕರ ವಿರುದ್ಧ ಅನರ್ಹತೆ ಅಸ್ತ್ರ ಬಳಸಲು ಮುಂದಾಗಿರುವ ಕಾಂಗ್ರೆಸ್ ಕೊನೆಯ ಗಳಿಗೆಯವರೆಗೂ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ ಎನ್ನಲಾಗಿದೆ. ಸೋಮವಾರದ ಸದನದಲ್ಲಿ ಅನರ್ಹತೆಗೆ ಶಿಫಾರಸ್ಸು ಮಾಡದೆ ಒಂದೆರಡು ದಿನ ಕಾದು ನೋಡಲು ಕೈ ಪಾಳಯ ನಿರ್ಧರಿಸಿದೆ ಎಂಬ ಮಾಹಿತಿ ಲಭಿಸಿದೆ. ಇತ್ತ ಬಂಡಾಯ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಯ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv