ಬೆಳಗಾವಿ: ಸರ್ಕಾರ ಅಭದ್ರವಾಗಿದೆ ಅನ್ನೋದಕ್ಕಿಂತ ಭದ್ರವಾಗಿದೆ ಅನ್ನೋದೆ ಹೆಚ್ಚಿಸಲಿ. ಸ್ವಾಭಾವಿಕವಾಗಿ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸುವಂತಹ ಯಾವುದೇ ಪ್ರಕ್ರಿಯೆಗಳಲ್ಲಿ ಪಾಲ್ಗೊಂಡಿಲ್ಲ. ಪಾಲ್ಗೊಳ್ಳುವುದೂ ಇಲ್ಲ. ಆದ್ರೆ ಅಸ್ಥಿರಗೊಂಡಂತಹ ಸರ್ಕಾರವೊಂದು ತಾನಾಗಿಯೇ ಉರುಳಿ ಬಿದ್ರೆ ಅದಕ್ಕೆ ಬಿಜೆಪಿ ಜವಾಬ್ದಾರಿ ಅಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಇಲ್ಲಿಯವರೆಗೆ ಭದ್ರವಾಗಿರಲಿಲ್ಲ. ಅಭದ್ರತೆಯಲ್ಲಿ ಇತ್ತು. ಅವರ ಆಂತರಿಕ ವಿವಾದಗಳು ಒಂದಷ್ಟು ಪರಾಕಷ್ಟೆಗೇರಿ, ಬಹುತೇಕವಾಗಿ ಸರ್ಕಾರ ತನ್ನ ಕುಸಿತವನ್ನು ಕಾಣಲು ಇಂದಿನ ಅಧಿವೇಶನದ ಸಂದರ್ಭದಲ್ಲಿ ದಟ್ಟವಾಗಿ ಕಂಡುಬಂತು ಅಂತ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ರಮೇಶ್ ಜಾರಕಿಹೊಳಿಯವರು ಮಾನಸಿಕವಾಗಿ ಸರ್ಕಾರದಿಂದ ದೂರ ಉಳಿದು ಬಹಳ ಸಮಯವಾಗಿದೆ. ಈ ವಿಚಾರ ಸಾಮಾನ್ಯವಾಗಿ ಇಡೀ ರಾಜ್ಯದ ಜನತೆಗೆ ಗೊತ್ತಾಗಿರೋ ವಿಚಾರವಾಗಿದೆ. ಆದ್ರೆ ಅಧಿಕೃತವಾಗಿ ಇನ್ನಷ್ಟೇ ಆಗಬೇಕಾಗಿದೆ. ಇದೇ ವೇಳೆ ಸಚಿವ ಡಿಕೆ ಶಿವಕುಮಾರ್ ಹಾಗೂ ರಮೇಶ್ ಜಾರಕಿಹೊಳಿ ನಡುವಿನ ಗಲಾಟೆ ಸರ್ಕಾರದ ಮೇಲೆ ಪರಿಣಾಮ ಬೀರುತ್ತದಾ ಎನ್ನುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕುಂದಾ ನಾಡಿಗೆ ಸಕ್ಕರೆ ನಾಡಿನ ನಾಯಕ ಬಂದಿದ್ದೇ ಅಪರಾಧವಾಗಿದೆ. ಯಾಕಂದ್ರೆ ಇಲ್ಲಿ ಬಹಳ ವರ್ಷಗಳ ಕಾಲ ರಾಜಕಾರಣ ಮಾಡಿದವರ ಮೇಲೆ ಇದು ಪರಿಣಾಮ ಬೀರಿದೆ. ಈ ಕುರಿತು ರಮೇಶ್ ಜಾರಕಿಹೊಳಿ ಏನು ಹೇಳಿದ್ದಾರೆ ಅದಷ್ಟೇ ಮುಂದಿರುವಂತಹ ವಿಚಾರವಾಗಿದೆ. ಆದ್ರೆ ಈ ವಿಚಾರದಲ್ಲಿ ಬಿಜೆಪಿ ಸ್ಪಷ್ಟವಾದ ನಿಲುವನ್ನು ಹೊಂದಿದೆ ಅಂದ್ರು.
ಇಂದಿನ ಸಂದಿಗ್ಧ ಸ್ಥಿತಿಯಲ್ಲಿ ಪಕ್ಷಕ್ಕೆ 10 ಮಂದಿ ಶಾಸಕರು ಬಂದ್ರೂ ಬೆಂಬಲ ಕೊಡುವುದಾಗಿ ಈಗಾಗಲೇ ರಾಜ್ಯಾಧ್ಯಕ್ಷರು ಹಾಗೂ ಬಿಜೆಪಿಯ ಎಲ್ಲಾ ನಾಯಕರು ಸ್ಪಷ್ಟವಾಗಿ ಹೇಳಿದ್ದೇವೆ. ಅಲ್ಲದೇ ಸರ್ಕಾರ ರಚನೆ ಮಾಡುತ್ತೇವೆ. ರಾಜ್ಯದ ಜನರ ಭಾವನೆ ಅವರು ಬಿಜೆಪಿಯೇ ಅಧಿಕಾರಕ್ಕೆ ಬರಬೇಕು ಅನ್ನೊದು ಇದೆ. ಇದೇ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿಯವರು ಬಿಜೆಪಿಯವರ ಸಂಪರ್ಕದಲ್ಲಿದ್ದಾರೆ ಅನ್ನೋ ಗುಮಾನಿಯ ಕುರಿತು ಮಾತನಾಡಿದ ಶ್ರೀನಿವಾಸ ಪೂಜಾರಿ, ಸ್ವಾಭಾವಿಕವಾಗಿ ಎಲ್ಲಿ ತೃಪ್ತಿಯಾಗುತ್ತದೋ ಆ ಕಡೆ ಅವರು ಗಮನವನ್ನು ಕೊಡುತ್ತಿದ್ದಾರೆ. ಹಾಗೆಯೇ ಅವರು ಪಕ್ಷಕ್ಕೆ ಬರಬೇಕು ಅನ್ನುವ ಆಸೆಯಿದೆ. ಅವರು ಬರುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ. ಒಟ್ಟಿನಲ್ಲಿ ರಮೇಶ್ ಜಾರಕಿಹೊಳಿಯವರು ಪಕ್ಷಕ್ಕೆ ಬಂದ್ರೆ ಸ್ವಾಗತಿಸುವುದಾಗಿ ಅವರು ತಿಳಿಸಿದ್ರು.
ಉತ್ತರ ಕನ್ನಡ ಶಾಶ್ವತವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಲ್ಲಿಯ ಜನ ಜೀವನ, ಮೂಲಭೂತ ಸೌಕರ್ಯ, ನೀರಾವರಿ, ಆರೋಗ್ಯ ಹಾಗೂ ಶಿಕ್ಷಣದಲ್ಲಿ ಕನಿಷ್ಠ ಪ್ರಗತಿಯಲ್ಲಿದೆ ಅನ್ನುವ ಸದ್ಯದ ಅಂಕಿ-ಅಂಶ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಕಡೆ ವಿಶೇಷವಾದ ಗಮನಕೊಡಬೇಕು ಅನ್ನೋ ಒತ್ತಾಯವನ್ನು ನಾವು ಸದನದಲ್ಲಿ ಮಾಡಿದ್ದೇವೆ. ಬರೀ ಮಾತುಗಳಲ್ಲಿ ಹೇಳಿದ್ರೆ ಸಾಲದು. ಸರ್ಕಾರ ಈ ಬಗ್ಗೆ ದಟ್ಟವಾದ ನಿಲುವು ತೆಗೆದುಕೊಳ್ಳಬೇಕು. ಈ ಮೂಲಕ ಉತ್ತರ ಕರ್ನಾಟಕ ಅಭಿವೃದ್ಧಿಗೆ ಕೆಲಸ ಮಾಡಬೇಕು ಅಂದ್ರು.
ಒಟ್ಟಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಈ ಹಿಂದೆಯೂ ಬಡವರ ಪರ ಕೆಲಸ ಮಾಡಿದೆ. ಮುಂದೆಯೂ ಬಡವರ ಪರ ಕೆಲಸ ಮಾಡಲಿದೆ ಅಂತ ಅವರು ತಿಳಿಸಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv