ಚಿಕ್ಕಮಗಳೂರು: ಕಾಫಿನಾಡಿನ ಪಿಎಸ್ಐ ಹಾಗೂ ಪೇದೆ ಮಧ್ಯದ ಶೀತಲ ಸಮರಕ್ಕೆ ತೆರೆ ಬಿದ್ದಿದ್ದು ಇಬ್ಬರ ಮೇಲೂ ಎಫ್ಐಆರ್ ದಾಖಲಾಗಿದೆ.
ಪಿಎಸ್ಐ ರಫೀಕ್ ಹಾಗೂ ಪೇದೆ ಶಿವಣ್ಣ ಅವರ ವಿರುದ್ಧ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಕೆಲವು ದಿನಗಳಿಂದ ಈ ಇಬ್ಬರ ಸಿಬ್ಬಂದಿ ಜಗಳ ಜಿಲ್ಲಾಮಟ್ಟದ ಪೊಲೀಸ್ ಅಧಿಕಾರಿಗಳಿಗೆ ತಲೆನೋವಾಗಿತ್ತು. ಹೀಗಾಗಿ ಈ ಕುರಿತು ತನಿಖೆ ನಡೆಸುವಂತೆ ಜಿಲ್ಲಾ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಕೊಪ್ಪ ಡಿವೈಎಸ್ಪಿ ರವಿಂದ್ರನಾಥ್ ಎಸ್ ಜಾಗೀರ್ದಾರ್ ಅವರಿಗೆ ಆದೇಶ ನೀಡಿದ್ದರು. ಎಸ್ಪಿ ಆದೇಶದ ಮೇರೆಗೆ ರವೀಂದ್ರನಾಥ್ ತನಿಖೆ ನಡೆಸಿ, ವರದಿಯನ್ನು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್ಪಿ ಹರೀಶ್ ಪಾಂಡೆ ಇಬ್ಬರ ವಿರುದ್ಧವೂ ಎಫ್ಐಆರ್ ದಾಖಲಿಸಿದ್ದಾರೆ.
ಏನಿದು ಪ್ರಕರಣ?:
ಆರೋಪಿಗಳಾದ ಪೇದೆ ಶಿವಣ್ಣ ಹಾಗೂ ಪಿಎಸ್ಐ ರಫೀಕ್ ಇಬ್ಬರೂ ಬೇರೆ ಬೇರೆ ಠಾಣೆಯವರು. ಅಜ್ಜಂಪುರದ ಬಕ್ಕನಕಟ್ಟೆ ಜಾತ್ರೆಯ ನಿಮಿತ್ತ ನವಂಬರ್ 20ರಂದು ಲಕ್ಕವಳ್ಳಿ ಠಾಣೆಯಿಂದ ಶಿವಣ್ಣ ಅವರನ್ನು ನಿಯೋಜನೆ ಮಾಡಲಾಗಿತ್ತು. ಅಂದು ಶಿವಣ್ಣನ ಮೇಲೆ ಅಜ್ಜಂಪುರದ ಪಿಎಸ್ಐ ರಫೀಕ್ ಸಾರ್ವಜನಿಕ ಪ್ರದೇಶದಲ್ಲಿ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದರು. ಇದರಿಂದಾಗಿ ಶಿವಣ್ಣ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಪತಿಗೆ ಆಗಿರುವ ಅನ್ಯಾಯ ಪ್ರಶ್ನಿಸಿ ಶಿವಣ್ಣರ ಪತ್ನಿ ಆಶಾ ಅಜ್ಜಂಪುರದ ಠಾಣೆಯಲ್ಲಿ ರಫೀಕ್ ವಿರುದ್ಧ ದೂರು ನೀಡಿದ್ದರೂ, ಕೇಸ್ ದಾಖಲಿಸಿಕೊಂಡಿರಲಿಲ್ಲ. ಇದರಿಂದಾಗಿ ಆಶಾ ಹಾಗೂ ಅತ್ತೆ ರಾತ್ರಿ 12.30ರವರೆಗೂ ಠಾಣೆ ಬಾಗಿಲಲ್ಲಿಯೇ ಕುಳಿತಿದ್ದರು. ಆದರೂ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ. ಬಳಿಕ ಬೇಸತ್ತ ಆಶಾ ಅತ್ತೆಯ ಜೊತೆಗೆ ಎಸ್ಪಿ ಕಚೇರಿಗೆ ಬಂದು, ಧರಣಿ ನಡೆಸಿದ್ದರು. ಈ ಬೆಳವಣಿಗೆ ಗಮನಕ್ಕೆ ಬರುತ್ತಿದ್ದಂತೆ ಈ ಕುರಿತು ತನಿಖೆ ನಡೆಸುವಂತೆ ಜಿಲ್ಲಾ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಕೊಪ್ಪ ಡಿವೈಎಸ್ಪಿ ರವಿಂದ್ರನಾಥ್ ಎಸ್ ಜಾಗೀರ್ದಾರ್ ಅವರಿಗೆ ಶನಿವಾರ ಆದೇಶ ನೀಡಿದ್ದರು.
ಬಕ್ಕನಕಟ್ಟೆ ಜಾತ್ರೆಯಗೆ ನಿಯೋಜಿಸಿದ್ದ ಶಿವಣ್ಣ ಕೆಲಸ ನಿರ್ವಹಿಸದೆ ಮಹಿಳೆಯ ಜೊತೆಗೆ ಹೋಗಿದ್ದರು. ಊಟ ಮಾಡಿ, ತಿರುಗಾಡಿ ಕಾಲ ಕಳೆಯುತ್ತಿದ್ದರು. ಇದರಿಂದಾಗಿ ಕರೆದು ಎಚ್ಚರಿಕೆ ನೀಡಿರುವೆ ಅಷ್ಟೇ ಎಂದು ರಫೀಕ್ ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv