ಶಿವಮೊಗ್ಗ: ಕಿಡಿಗೇಡಿಗಳ ಬೆದರಿಕೆಗೆ ಹೆದರಿ ವಿಷ ಸೇವಿಸಿದ್ದ ಪ್ರೇಮಿಗಳ ಪೈಕಿ ಗಂಭೀರ ಸ್ಥಿತಿಯಲ್ಲಿದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾಳೆ.
ಆಪ್ರಾಪ್ತೆ ಕೀರ್ತನಾ (17) ಮೃತಪಟ್ಟ ದುರ್ದೈವಿ. ಕಿಡಿಗೇಡಿಗಳ ಬೆದರಿಕೆಗೆ ಹೆದರಿ ತನ್ನ ಪ್ರಿಯಕರ ಸಂಜಯ್ ನೊಂದಿಗೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ.
ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಹಿಡಿಯುವಲ್ಲಿ ಕುಂಸಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದ ಗಂಭೀರತೆ ಹಿನ್ನೆಲೆಯಲ್ಲಿ ಆಯನೂರು ಹಾಗೂ ಮಂಡಘಟ್ಟ ಗ್ರಾಮದಲ್ಲಿ ಪೊಲೀಸ್ ಭದ್ರತೆ ಹಾಕಲಾಗಿದೆ.
ಏನಿದು ಪ್ರಕರಣ?
ಹೊಸೂರು ಮಟ್ಟಿಯ ನಿವಾಸಿ ಸಂಜಯ್ ಕಳೆದ ಒಂದು ವರ್ಷದಿಂದ ರಾಗಿಹೊಸಹಳ್ಳಿಯ ಯುವತಿ ಕೀರ್ತನಾ ಪ್ರೀತಿಸುತ್ತಿದ್ದರು. ಪ್ರೇಮಿಗಳಿಬ್ಬರು ಏಕಾಂತದಲ್ಲಿದ್ದಾಗ ಆಯನೂರು ಗ್ರಾಮದ ಕೆಲ ಯುವಕರು ಅವರ ವಿಡಿಯೋ ಮಾಡಿದ್ದರು. ನಂತರ ಸಂಜಯ್ಗೆ ಪದೇ ಪದೇ ಕರೆ ಮಾಡಿ, ಐದು ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಒಂದು ವೇಳೆ ಹಣ ನೀಡಲು ನಿರಾಕರಿಸಿದರೇ, ವಿಡಿಯೋವನ್ನು ವಾಟ್ಸಪ್, ಫೆಸ್ಬುಕ್ ಗಳಲ್ಲಿ ಹಾಕುತ್ತೇವೆಂದು ಬೆದರಿಸಿದ್ದರು.
ಬೆದರಿಕೆಯಿಂದ ಬೇಸತ್ತಿದ್ದ ಪ್ರೇಮಿಗಳಿಬ್ಬರು ಸೋಮವಾರ ಕುಂಸಿ ಸಮೀಪದ ಮಂಡಘಟ್ಟದ ಹೊಲದಲ್ಲಿ ಒಟ್ಟಿಗೆ ವಿಷ ಸೇವಿಸಿದ್ದರು. ಇದನ್ನು ನೋಡಿದ ಸ್ಥಳೀಯರು ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಂಜಯ್ ಮೃತಪಟ್ಟಿದ್ದನು. ಘಟನೆ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv