ಹೇಳಿಕೆಯ ವೇಳೆ ಗುಪ್ತಚರ ಇಲಾಖೆ ಉಲ್ಲೇಖ: ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ

Public TV
2 Min Read
NIKIL 1

ಬೆಂಗಳೂರು: ರೈತರ ಪ್ರತಿಭಟನೆಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವಾಗ ಗುಪ್ತಚರ ಇಲಾಖೆ ಮಾಹಿತಿಯನ್ನು ಉಲ್ಲೇಖಿಸಿದ್ದ ನಿಖಿಲ್ ಕುಮಾರಸ್ವಾಮಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ಪಬ್ಲಿಕ್ ಟಿವಿಗೆ ನೀಡಿದ ಪ್ರತಿಕ್ರಿಯೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಚರ್ಚೆ ಆಗುತ್ತಿದ್ದಂತೆ ನಿಖಿಲ್ ಕುಮಾರಸ್ವಾಮಿ ಫೇಸ್‍ಬುಕ್ ನಲ್ಲಿ ಪೋಸ್ಟ್ ಪ್ರಕಟಿಸಿ ಸ್ಪಷ್ಟನೆ ನೀಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ಇತ್ತೀಚೆಗೆ ನಾನು ನೀಡಿದ ಒಂದು ಹೇಳಿಕೆಯನ್ನು ವಿರೋಧ ಪಕ್ಷದವರು ತಪ್ಪಾಗಿ ಬಿಂಬಿಸಿದ್ದಾರೆ. ನಾನು ಸನ್ಮಾನ್ಯ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಮಗನಾಗಿ ಈ ಹೇಳಿಕೆಯನ್ನು ನೀಡಿಲ್ಲ. ನಾನು ಜೆಡಿಎಸ್ ಪಕ್ಷದ ಸಕ್ರಿಯ ಕಾರ್ಯಕರ್ತ ಎನ್ನುವುದು ವಿರೋಧ ಪಕ್ಷದವರು ಮರೆಯುತ್ತಿದ್ದಾರೆ. ವಿರೋಧ ಪಕ್ಷದವರು ನಮ್ಮ ಸರ್ಕಾರವನ್ನು ಹಾಳು ಮಾಡಲು ಈ ರೀತಿ ಪಿತೂರಿಗಳು ನಡೆಸುತ್ತಿರುವುದರ ಬಗ್ಗೆ ಪಕ್ಷದ ಕಾರ್ಯಕರ್ತನಾಗಿ ನನಗೆ ಅರಿವಿದೆ. ರಾಜಕೀಯದಲ್ಲಿ ಹೆಸರು ಮಾಡಲು ವಿರೋಧ ಪಕ್ಷದವರು ಯಾವುದೇ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ.

ಇತ್ತೀಚೆಗೆ ನಡೆದ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಶ್ರೀ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ನನ್ನ ಅಭಿಪ್ರಾಯವು ಸರ್ಕಾರದ ಭಾವನೆಗಳನ್ನು ಪ್ರತಿಧ್ವನಿಸುತ್ತಿದೆ. ಈ ಸನ್ನಿವೇಶದಲ್ಲಿ ಎಲ್ಲರೂ ವಿಶೇಷವಾಗಿ ನನ್ನ ಸ್ನೇಹಿತರು ಹಾಗೂ ಮಾಧ್ಯಮದವರನ್ನು ಎಚ್ಚರಿಕೆಯಿಂದ ವರ್ತಿಸಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಹೇಳಿದ್ದು ಏನು?
ಮಂಗಳವಾರ ನಿಖಿಲ್ ಕುಮಾರಸ್ವಾಮಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡುತ್ತಾ, ನಮಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದಿದೆ. ರೈತರು ಯಾರೂ ಈ ರೀತಿ ಗೂಂಡಾ ವರ್ತನೆ ಮಾಡುವುದಿಲ್ಲವೆಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಸುರೇಶ್ ಕುಮಾರ್ ಖಂಡಿಸಿದ್ದು, ಗುಪ್ತಚರ ಇಲಾಖೆಯ ವರದಿ ಸಿಗಲು ನಿಖಿಲ್ ಯಾರು ಎಂದು ಖಾರವಾಗಿ ಪ್ರಶ್ನಿಸಿದ್ದರು.

ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ವಿಡಿಯೋ ಸಹಿತ, ರಾಜ್ಯ ಗುಪ್ತಚರ ಇಲಾಖೆ ಅಷ್ಟೊಂದು ಸಸ್ತಾ ಆಗಿದೇಯ? ಗುಪ್ತಚರ ಇಲಾಖೆ ವರದಿಯನ್ನು ಪಡೆಯಲು ನಿಖಿಲ್ ಕುಮಾರಸ್ವಾಮಿ ಯಾವ ಅಧಿಕಾರದಲ್ಲಿದ್ದಾರೆ? ನಿಖಿಲ್ ಸಿಎಂ ಪುತ್ರ ಎನ್ನುವ ಕಾರಣಕ್ಕೆ ಗುಪ್ತಚರ ಇಲಾಖೆ ಮಹಾದವಕಾಶ ನೀಡಿತೆ? ಈ ಕೂಡಲೇ ಸಿಎಂ ಕುಮಾರಸ್ವಾಮಿಯವರು ಇದಕ್ಕೆ ಸ್ಪಷ್ಟನೆ ನೀಡಬೇಕೆಂದು ಬರೆದುಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *