ಬೆಂಗಳೂರು: ಕೇಂದ್ರ ಸಚಿವರ ಹಾಗೂ ಬಿಜೆಪಿ ಮುಖಂಡ ಅನಂತಕುಮಾರ್ ರವರ ಅಕಾಲಿಕ ನಿಧನದ ಸುದ್ದಿ ಆಘಾತವನ್ನುಂಟುಮಾಡಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಂಬನಿ ಮಿಡಿದಿದ್ದಾರೆ.
ಅನಂತಕುಮಾರ್ ರವರ ಅಕಾಲಿಕ ಸಾವಿನ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನಾನು ಪ್ರಧಾನಿಮಂತ್ರಿಯಾಗಿದ್ದಾಗ ಅವರು ಮೊದಲನೇ ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಯಾವಾಗಲೂ ಚತುರತೆಯಿಂದ ಕೆಲಸ ಮಾಡುತ್ತಿದ್ದರು. ಅವರು ಎಂದಿಗೂ ಹೆಚ್ಚಿಗೆ ಮಾತನಾಡುತ್ತಿರಲಿಲ್ಲ. ಅವರು ಇಷ್ಟು ಚಿಕ್ಕ ವಯಸ್ಸಿನಲ್ಲೇ ಹೋಗುತ್ತಾರೆಂದು ನಿರೀಕ್ಷಿಸಿರಲಿಲ್ಲ. ಅವರ ಸಾವಿನಿಂದಾಗಿ ಆಘಾತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅವರು ವಿದೇಶದಿಂದ ಬಂದ ನಂತರ, ಮಗ ರೇವಣ್ಣ ಶಂಕರ ಆಸ್ಪತ್ರೆಗೆ ಹೋಗಿ ನೋಡಿಕೊಂಡು ಬಂದಿದ್ದರು. ನಾನು ಅವರನ್ನು ನೋಡಬೇಕೆಂದು ಅಂದುಕೊಂಡಿದ್ದೆ, ಆದರೆ ಆಸ್ಪತ್ರೆಯ ಸಿಬ್ಬಂದಿ ಯಾರನ್ನು ನೋಡಲು ಬಿಡುತ್ತಿಲ್ಲವೆಂದು ರೇವಣ್ಣ ಹೇಳಿದ್ದರು. ಅಲ್ಲದೇ ಅವರಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಮಾತ್ರ ನನಗೆ ಗೊತ್ತಿತ್ತು.
ಕಾವೇರಿ ವಿವಾದ ಏರ್ಪಟ್ಟು ಅಟಾರ್ನಿ ಜನರಲ್ 4 ತಿಂಗಳಲ್ಲಿ ಕಾವೇರಿ ನಿಗಮ ಮಂಡಳಿಯನ್ನು ಪ್ರಾರಂಭಿಸುತ್ತೇವೆಂದು ಹೇಳಿದಾಗ, ನಾನು ಸಂಸತ್ತಿನ ಮುಂದಿರುವ ಗಾಂಧಿ ಪ್ರತಿಮೆಯ ಬಳಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದೆ. ಆಗ ಸಂಸದೀಯ ಸಚಿವರಾಗಿದ್ದ ಅವರು ಮೋದಿಯವರ ಮೇಲೆ ಪ್ರಭಾವ ಬೀರಿ, ಅದೇ ಅಟಾರ್ನಿ ಜನರಲ್ ಮೂಲಕ ಆದೇಶ ಹಿಂಪಡೆಯುವಂತೆ ಮಾಡಿದ್ದರು. ಅಲ್ಲದೇ ನಾನು ಉಪವಾಸ ನಡೆಸುತ್ತಿದ್ದ ಸ್ಥಳಕ್ಕೆ ಬಂದು, ನಿಮ್ಮ ಆರೋಗ್ಯ ಹಾಳಾಗುತ್ತದೆ. ದಯಮಾಡಿ ಉಪವಾಸ ನಿಲ್ಲಿಸಿ ಎಂದು ಹೇಳಿ ಉಪವಾಸ ಹೋರಾಟವನ್ನು ನಿಲ್ಲಿಸಿದ್ದರು. ಅವರ ಬಗ್ಗೆ ಹೇಳಬೇಕೆಂದರೆ ಬಹಳ ವಿಷಯಗಳು ಇವೆ ಎಂದರು.
ಹತ್ತು ಹಲವಾರು ಇಲಾಖೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಇದೂವರೆಗೂ ಯಾವೊಬ್ಬ ಇತರೆ ಪಕ್ಷದ ಮುಖಂಡರೊಂದಿಗೆ ಅವರು ವೈರತ್ವ ಬೆಳೆಸಿಕೊಂಡಿದ್ದವರಲ್ಲ. ಎಲ್ಲರೂ ಅವರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು.
ಅವರ ಸಾವಿನಿಂದಾಗಿ ಲಕ್ಷಾಂತರ ಅಭಿಮಾನಿಗಳು ಹಾಗೂ ಅವರ ಕುಟುಂಬದವರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ದೇವರ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಕೊಡಲಿ. ಕಾರಣಾಂತರಗಳಿಂದ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆಂದು ಹೇಳಿದರು.
ಕೇಂದ್ರ ಸಚಿವರಾದ ಅನಂತ್ ಕುಮಾರ್ ಅವರು ನಮ್ಮನ್ನು ಅಗಲಿದ್ದಾರೆ ಎನ್ನುವ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ದುಃಖವಾಗಿದೆ. ದೆಹಲಿಯಲ್ಲಿ ಕರ್ನಾಟಕದ ಧ್ವನಿಯಂತಿದ್ದ ಅನಂತ್ ಕುಮಾರ್ ಅವರು ಒಬ್ಬ ಪಳಗಿದ ಮುತ್ಸದ್ದಿ ರಾಜಕಾರಣಿಯಾಗಿದ್ದರು. ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ.
— H D Devegowda (@H_D_Devegowda) November 12, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews