-ಚೇತನ್ ಫೈರ್ ಸಂಸ್ಥೆ ವಿರುದ್ಧ ಅಂಬಿ ಕಿಡಿ
ಬೆಂಗಳೂರು: ನಟಿ ಶೃತಿ ಹರಿಹರನ್ ಮತ್ತು ನಟ ಅರ್ಜುನ್ ಸರ್ಜಾ ವಿವಾದದ ಸಂಧಾನ ಸಭೆ ವಿಫಲವಾಗಿದ್ದು, ಇಬ್ಬರು ಕ್ಷಮೆ ಕೇಳಲು ಹಿಂದೇಟು ಹಾಕಿದ್ದಾರೆ. ಇಬ್ಬರು ಫಿಲ್ಮ್ ಚೇಂಬರ್ ಸಮಯಾವಕಾಶ ನೀಡಿದ್ದು, ತಮ್ಮ ನಿರ್ಧಾರವನ್ನು ಆದಷ್ಟು ಬೇಗ ತಿಳಿಸಬೇಕೆಂದು ಚಲನಚಿತ್ರ ಮಂಡಳಿ ತಿಳಿಸಿದೆ.
ಸಂಧಾನ ಸಭೆಯ ಬಳಿಕ ಮಾತನಾಡಿದ ರೆಬೆಲ್ ಸ್ಟಾರ್ ಅಂಬರೀಶ್, ಚಿತ್ರರಂಗದಲ್ಲಿ ಮೀಟೂ ಆಂತಾ ಬಂದಿದೆ. ಮೀಟೂ ಕ್ಲಾಸ್ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತೇನೆ. ಸಂಧಾನ ಮಾಡೋದು ನನ್ನ ಆಸೆ. ಅಂಬಿ ನಿಂಗ್ ವಯಸ್ಸಾಯ್ತು ಅಂತಾ ನನ್ನನ್ನು ಕರೆಸ್ತಾರೆ. ಕಿರಿಯ ನಟರಿಗೆ ನನ್ನ ಅನುಭವದ ನಾಲ್ಕು ಮಾತುಗಳನ್ನು ಹೇಳುತ್ತೇನೆ. ಸಭೆಯಲ್ಲಿ ಎಲ್ಲ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು ಅಂದ್ರು.
ಇಬ್ಬರಿಗೂ ಒಂದೊಂದು ಆಯ್ಕೆ ನೀಡಿದ್ದೇವೆ. ಕೋರ್ಟ್, ಕಾನೂನು ವಿಚಾರದಲ್ಲಿ ನಾವು ತಲೆ ಹಾಕೋದಕ್ಕೆ ಆಗಲ್ಲ. ನಿಮ್ಮ ತೀರ್ಮಾನವನ್ನು ನಮಗೆ ತಿಳಿಸಿ ಹೇಳಿ ಅಂತಾ ಕಳುಹಿಸಿದ್ದೇವೆ. ಮೀಡಿಯಾದಲ್ಲಿ ನಾಲ್ಕೈದು ದಿನಗಳಿಂದ ಇದೇ ಬರುತ್ತಿರೋದನ್ನು ನೋಡಿದ್ದೇನೆ. ಎರಡೂ ಕುಟುಂಬದ ಸದಸ್ಯರು ಮಾನಸಿಕವಾಗಿ ನೊಂದಿದ್ದಾರೆ. ನಾನು ಸುಪ್ರೀಂ ಅಲ್ಲ, ಇಬ್ಬರಿಗೂ ಸಮಯ ನೀಡಿದ್ದೇವೆ. ಪ್ರಕರಣ ನ್ಯಾಯಾಲಯಕ್ಕೆ ಹೋಗಿದ್ದರಿಂದ ಸ್ವಲ್ಪ ಎಚ್ಚರಿಕೆಯಿಂದ ನಿಭಾಯಿಸಬೇಕಿದೆ. ಮೀಟೂ, ಶಿ ಟೂ ಅಂತಾ ಏನೇನೋ ಹೇಳ್ತಾರೆ, ಅದರ ಬಗ್ಗೆ ನನಗೆ ಗೊತ್ತಿಲ್ಲ ಅಂತಾ ತಿಳಿಸಿದ್ರು.
ಶೃತಿ ಮತ್ತು ಅರ್ಜುನ್ ಸರ್ಜಾ ಇಬ್ಬರು ಯಾವುದೇ ದಾಖಲಾತಿಗಳನ್ನು ನೀಡಿಲ್ಲ. ಈ ಪ್ರಕರಣದಿಂದ ಚಿತ್ರರಂಗಕ್ಕೆ ಯಾವುದೇ ತೊಂದರೆ ಆಗಲ್ಲ. ಚಿಕ್ಕದರಲ್ಲಿಯೇ ಮುಗಿದ್ರೆ ನಮಗೂ ಖುಷಿ. ಚಿತ್ರಂಗದವರಿಗೆ ಯಾವುದೇ ಜಾತಿ ಇಲ್ಲ. ಈ ಪ್ರಕರಣದಲ್ಲಿ ಯಾವುದೇ ಎಡ-ಬಲ ಅಂತಾ ಇಲ್ಲ. ಎಲ್ಲವನ್ನು ರಾಜಕೀಯ ಮಾಡೋದಕ್ಕೆ ಹೋಗಲಾಗುತ್ತಿದೆ. ನನ್ನ ಸಿನಿಮಾ ಜೀವನದಲ್ಲಿ ಇಂತಹ ಪ್ರಕರಣವನ್ನೇ ನೋಡಿಲ್ಲ. ನಿಮ್ಮ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಆಪ್ತರ ಜೊತೆ ಮಾತನಾಡಿ ಯೋಚಿಸಿ ಹೇಳಿ ಅಂತಾ ಕಳುಹಿಸಿದ್ದೇವೆ ಅಂದರು.
ಚೇತನ್ ಫೈರ್ ಎಂಬ ಸಂಸ್ಥೆ ಬಗ್ಗೆ ಅನುಮಾನವಿದೆ. ಇಂದು ಪ್ರಿಯಾಂಕಾ ಉಪೇಂದ್ರ ಫೈರ್ ಸಂಸ್ಥೆಯಿಂದ ಹೊರಬಂದಿರೋದು ನೋಡಿದ್ರೆ, ಆ ಸಂಘಟನೆಯೇ ಸುಳ್ಳು ಎಂಬುವುದು ಸಾಬೀತಾಗಿದೆ. ಈ ಪ್ರಕರಣದ ಹಿಂದೆ ಇಬ್ಬರು ಸ್ಟಾರ್ ಗಳು ಇದ್ದಾರೆ ಎಂಬುವುದು ನಿರಾಧಾರ. ನಾನು ಇಲ್ಲಿ ಯಾರ ಪರವಾಗಿಯೂ, ವಿರೋಧವಾಗಿಯೂ ಇಲ್ಲ. ಮಹಿಳಾ ಸಂಘಟನೆ ಮಾಡಿ ಯಾರು ಬೇಡ ಅನ್ನೋದು ಇಲ್ಲ. ನಿರ್ದೇಶಕ ಎಂಬ ವ್ಯಕ್ತಿ ಕ್ರಿಯೇಟಿವ್ ಮ್ಯಾನ್. ರೊಮ್ಯಾಂಟಿಕ್ ದೃಶ್ಯಗಳು ಹೇಗೆ ಬರಬೇಕು ಎಂಬುವುದನ್ನು ಆತನಿಗೆ ಗೊತ್ತಿರುತ್ತದೆ. ಈ ವೇಳೆ ನಟಿ ಬೇರೆ ಕಡೆ ನೋಡಿದ್ರೆ ದೃಶ್ಯಗಳು ಸರಿಯಾಗಿ ಬರಲ್ಲ.
ಇದು ಕೂಡಲೇ ಬಗೆಹರಿಯುವಂತಹ ಪ್ರಕರಣ ಅಲ್ಲ. ಇಬ್ಬರ ಮನಸ್ಸಿಗೂ ನೋವಾಗಿದೆ. ಸಂಧಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪ ಸಮಯವಕಾಶ ನೀಡಬೇಕಿದೆ. ಪ್ರಕರಣದ ಒಂದು ಹೆಜ್ಜೆ ಈಗಾಗಲೇ ನ್ಯಾಯಾಲಯದಲ್ಲಿದೆ. ಹಾಗಾಗಿ ತುಂಬಾ ಎಚ್ಚರಿಕೆಯಿಂದ ಎಲ್ಲವನ್ನು ನೋಡಬೇಕಿದೆ. ನಾನು ಹೇಳಿದ್ದು ಒಂದೇ ಮಾತು. ಶೇಖ್ ಹ್ಯಾಂಡ್ ಮಾಡಿ, ಒಬ್ಬರಿಗೊಬ್ಬರು ಮಾತನಾಡಿಸಬೇಡಿ. ಬೇರೆ ಬೇರೆಯಾಗಿ ಹೋಗಿ, ನಿಮ್ಮಿಬ್ಬರ ಮಧ್ಯೆ ನಾನು ಮಾತನಾಡುತ್ತೇನೆ ಎಂದು ಹೇಳಿದ್ದೇನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv