ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಕುತಂತ್ರದಿಂದ ಬಂದ್ ಮಾಡಿಸಿ ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಡಾಲರ್ಸ್ ಕಾಲೋನಿಯ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಭಾರತ್ ಬಂದ್ ದುರುದ್ದೇಶದಿಂದ ಕೂಡಿದೆ. ತೈಲ ಬೆಲೆ ಏಕೆ ಹೆಚ್ಚಳ ಆಗಿದೆ ಅನ್ನುವುದು ಜಗತ್ತಿಗೆ ಗೊತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಿರುವ ಕರ್ನಾಟಕದಲ್ಲಿ ಬಂದ್ ಗೆ ವಿಶೇಷವಾಗಿ ಬೆಂಬಲ ನೀಡಿವೆ. ಈ ಸರ್ಕಾರವು ಕುತಂತ್ರ ಹಾಗೂ ಷಡ್ಯಂತ್ರ ರೂಪಿಸಿ ರಾಜ್ಯವನ್ನು ಸಂಪೂರ್ಣ ಬಂದ್ ಮಾಡಿದ್ದಾರೆ. ಅಲ್ಲದೇ ಶಾಲಾ-ಕಾಲೇಜುಗಳನ್ನು ಸಹ ಮುಚ್ಚಿಸಿದ್ದಾರೆ. ಇವರುಗಳು ಜನರ ದಿಕ್ಕನ್ನು ತಪ್ಪಿಸಲು ಬಂದ್ ಮಾಡಿಸುತ್ತಿದ್ದಾರೆ. ಬಂದ್ ಮಾಡುವುದಕ್ಕೆ ನಮ್ಮ ಅಭ್ಯವಂತರವೇನಿಲ್ಲ. ಆದರೆ ಬಂದ್ನ್ನು ಶಾಂತಿಯುತವಾಗಿ ಮಾಡಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ನಡೆಸಬೇಕು ಎಂದು ಹೇಳಿದರು.
ಈ ವೇಳೇ ಡಿ.ಕೆ.ಸುರೇಶ್ ಹೇಳಿಕೆಗೆ ಏಕವಚನದಲ್ಲೇ ಪ್ರತಿಕ್ರಿಯಿಸಿದ ಅವರು, ಯಾವನ್ ರೀ ಆ ಸುರೇಶ್, ನಾನ್ಯಾಕೆ ಅವನಿಗೆ ಉತ್ತರ ಕೊಡಬೇಕು. ಅವನೇ ಇಷ್ಟೆಲ್ಲ ಮಾಡಿರೋದು. ಅವನೇ ಸೃಷ್ಟಿ ಮಾಡಿರುವ ಪತ್ರ ಅದು. ಒಂದು ವೇಳೆ ಅದು 2017ರ ಜನವರಿಯಲ್ಲಿ ಬರೆದ ಪತ್ರವಾಗಿದ್ದರೆ, ಇಷ್ಟು ದಿನ ಏನು ಮಾಡ್ತಾ ಇದ್ದರು. ಈವಾಗ ಆ ಪತ್ರವನ್ನು ಇಟ್ಟುಕೊಂಡು ಮಾತನಾಡುತ್ತಿದ್ದಾರಾ ಎಂದು ಪ್ರಶ್ನಿಸಿದರು. ಇದು ದುರುದ್ದೇಶದಿಂದ ನೀಡಿದ ಹೇಳಿಕೆಗೆಯಾಗಿದೆ. ಹೀಗಾಗಿ ಅವರ ಹೇಳಿಕೆಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಇದು ಸಹ ನಕಲಿ ಪತ್ರ. ಈ ಹಿಂದೆಯೂ ಕೂಡ ಅವರು ಡ್ಯೂಪ್ಲಿಕೇಟ್ ಮಾಡಿ ಬಿಡುಗಡೆ ಮಾಡಿದ್ದರು. ಇಂತಹ ಬುದ್ಧಿ ಸುರೇಶ್ ಕುಮಾರ್ ರೂಢಿಯಾಗಿದೆ. ಸುಳ್ಳು ಆರೋಪಗಳನ್ನು ಮಾಡಿ ಜನರ ದಿಕ್ಕನ್ನು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ನನಗೂ ಡಿಕೆಶಿಗೆ ಏನು ಸಂಬಂಧ? ಹಾಗಾಗಿ ಅದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲವೆಂದು ತಿರುಗೇಟು ನೀಡಿದರು.
ತೈಲ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ಭಾರತ ಬಂದ್ ವಿಚಾರ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಡಾಲರ್ಸ್ ಕಾಲೋನಿ ನಿವಾಸಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದ್ದು, ದಿನನಿತ್ಯದ ಭದ್ರತೆಗಿಂತ ಸೋಮವಾರ 10ಕ್ಕೂ ಹೆಚ್ಚು ಪೊಲೀಸರು ನಿಯೋಜನೆಗೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv