ಹೈದರಾಬಾದ್: ಕಾನೂನು ಬಾಹಿರವಾಗಿ ನಿವೃತ್ತ ಸರ್ಕಾರಿ ಉದ್ಯೋಗಿಯೊಬ್ಬರನ್ನು ಬಂಧಿಸಿದ್ದ ಐಎಎಸ್ ಅಧಿಕಾರಿಗೆ ಹೈದರಾಬಾದ್ ಹೈಕೋರ್ಟ್ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಶುಕ್ರವಾರ ಪ್ರಕರಣದ ಸಂಬಂಧ ನ್ಯಾಯಾಧೀಶ ಪಿ.ನವೀನ್ ರಾವ್ ನೇತೃತ್ವದ ಪೀಠವು ವಿಚಾರಣೆ ನಡೆಸಿತ್ತು. ಈ ವೇಳೆ ಆರೋಪ ಸಾಬೀತಾದ ಬೆನ್ನಲ್ಲೆ ಕೋರ್ಟ್ ಐಎಎಸ್ ಅಧಿಕಾರಿ ಕೆ.ಶಿವಕುಮಾರ್ ನಾಯ್ಡು ಅವರಿಗೆ 1 ತಿಂಗಳು ಜೈಲು ಶಿಕ್ಷೆ ಜೊತೆಗೆ 2 ಸಾವಿರ ರೂ. ದಂಡ ವಿಧಿಸಿದೆ. ಕಾನೂನು ಬಾಹಿರವಾಗಿ ಬಂಧನಕ್ಕೊಳಗಾಗಿದ್ದ ನಿವೃತ್ತ ಸರ್ಕಾರಿ ಉದ್ಯೋಗಿಗೆ ತೆಲಂಗಾಣ ಸರ್ಕಾರವು 50 ಸಾವಿರ ರೂ. ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿದೆ.
ಏನಿದು ಪ್ರಕರಣ?
ನಿವೃತ್ತ ಸರ್ಕಾರಿ ಉದ್ಯೋಗಿ ಎ.ಬುಚ್ಚಯ್ಯ ಎಂಬವರು ಮೆಹಬೂಬ್ ನಗರದ ಕಲ್ಯಾಣ ಮಂಟಪ ನಿರ್ಮಾಣ ಮಾಡುತ್ತಿದ್ದರು. ಈ ವೇಳೆ ಕೆಲವು ಸ್ಥಳೀಯರು ಅಕ್ರಮವಾಗಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಜಂಟಿ ಆಯುಕ್ತ ಕೆ.ಶಿವಕುಮಾರ್ ನಾಯ್ಡು ಅವರಿಗೆ ದೂರು ನೀಡಿದ್ದರು.
2017 ಜುಲೈ 1ರಂದು ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿಯನ್ನು ಶಿವಕುಮಾರ್ ತಡೆಹಿಡಿದಿದ್ದರು. ಅಲ್ಲದೆ ತಮಗಿರುವ ಅಧಿಕಾರವನ್ನು ಬಳಸಿಕೊಂಡು ಬುಚ್ಚಯ್ಯ ಅವರನ್ನು ಬಂಧಿಸಿ, ಎರಡು ತಿಂಗಳು 29 ದಿನ ಜೈಲಿನಲ್ಲಿ ಇರಿಸಿದ್ದರು.
ಜಾಮೀನು ಪಡೆದು ಜೈಲಿನಿಂದ ಹೊರಬಂದ ಬುಚ್ಚಯ್ಯ ಐಎಎಸ್ ಅಧಿಕಾರಿ ಶಿವಕುಮಾರ್ ವಿರುದ್ಧ ದೂರು ದಾಖಲಿಸಿದ್ದರು. ಬಳಿಕ ನ್ಯಾಯಾಧೀಶ ನವೀನ್ ಕುಮಾರ್ ಪ್ರಕರಣ ಅಧ್ಯಯನ ಮಾಡಿ ಶಿವಕುಮಾರ್ ಅವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv