ಕಾಡುಪ್ರಾಣಿಗಳಿಂದ ಬೆಳೆ ಉಳಿಸಿಕೊಳ್ಳಲು ಸೀರೆ ಮೊರೆ ಹೋದ ರೈತರು!

Public TV
1 Min Read
BDR 1

ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಹಳ್ಳಿಗಳಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ರೈತರು ಬೆಳೆ ಉಳಿಸಿಕೊಳ್ಳಲು ಹೊಸ ಐಡಿಯಾ ಹುಡುಕಿದ್ದಾರೆ.

ಹಂದಿ, ಜಿಂಕೆ, ಮಂಗ, ನವಿಲುಗಳಿಂದ ಬೆಳೆ ರಕ್ಷಿಸಿಕೊಳ್ಳಲು ಸೀರೆ ಮೊರೆ ಹೋಗಿದ್ದಾರೆ. ತಮ್ಮ ಹೊಲದ ಸುತ್ತ ಸೀರೆಗಳನ್ನು ಕಟ್ಟಿ ಬೆಳೆ ಕಾಪಾಡಿಕೊಳ್ಳುತ್ತಿದ್ದಾರೆ. ಸೀರೆಗಳನ್ನ ಕಂಡು ಪ್ರಾಣಿಗಳು ಹೊಲಗಳತ್ತ ಸುಳಿಯುತ್ತಿಲ್ಲವಂತೆ. ಮಹಾರಾಷ್ಟ್ರದಲ್ಲಿ ಅಗ್ಗದ ಬೆಲೆಗೆ ಸಿಗೋ ಸೀರೆಗಳನ್ನು ರೈತರು ಇಲ್ಲಿ ಬಳಸಿಕೊಳ್ತಿದ್ದಾರೆ.

ರಾಜ್ಯದಲ್ಲಿ ತೆಗೆದುಕೊಂಡರೆ ಒಂದು ಸೀರೆಗೆ 200 ರಿಂದ 300 ರೂಪಾಯಿ ನೀಡಬೇಕು. ಹೀಗಾಗಿ ಪಕ್ಕದ ಮಹಾರಾಷ್ಟ್ರದಿಂದ ಕಡಿಮೆ ಬೆಲೆಗೆ ಸೀರೆ ತಂದು ತಮ್ಮ ಬೆಳೆ ಉಳಿಕೊಳ್ಳುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸೀರೆಗೆ ಉತ್ತಮ ಬೇಡಿಕೆ ಇದೆ.

vlcsnap 2018 07 26 08h29m32s90

ಬ್ಯಾಂಕ್‍ನಲ್ಲಿ ಸಾಲ ಮಾಡಿ ಬೆಳೆ ಬೆಳೆದ ರೈತ ಇಂದು ಕಾಡು ಪ್ರಾಣಿಗಳ ಹಾವಳಿಗೆ ಸುಸ್ತಾಗಿ ಹೋಗಿದ್ದು, ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಸಾವಿರಗಟ್ಟಲೆ ಹಣ ಖರ್ಚು ಮಾಡಿ ಕಂಗಾಲಾಗುತ್ತಿದ್ದಾರೆ. ಇನ್ನು ಈ ಕ್ಷೇತ್ರದ ಶಾಸಕರಾದ ಈಶ್ವರ್ ಖಂಡ್ರೆ ರೈತರು ಸಂಕಷ್ಟದಲ್ಲಿದ್ರೂ, ಕ್ಯಾರೆ ಎನ್ನದೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮೇಲೆ ಬ್ಯುಸಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ತಂತಿ ಬೇಲಿ ಹಾಕಿದರೆ ಮನುಷ್ಯ ಮತ್ತು ಪ್ರಾಣಿಗಳ ಜೀವಕ್ಕೂ ಅಪಾಯವಿದ್ದು, ರೈತರು ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳಲು ಸೀರೆಗಳ ಮೊರೆ ಹೋಗಿರುವುದು ಖುಷಿಯ ಸಂಗತಿಯಾಗಿದೆ.

ಅನ್ನದಾತ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಈ ದಿನಗಳಲ್ಲಿ ತನ್ನ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ಸಾವಿರಗಟ್ಟಲೆ ಹಣ ಖರ್ಚು ಮಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇಷ್ಟೆಲ್ಲ ಕಾಡು ಪ್ರಾಣಿಗಳು ರೈತರಿಗೆ ತೊಂದರೆ ನೀಡುತ್ತಿದ್ರೂ, ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ನಿದ್ದೆಗೆ ಜಾರಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ.

vlcsnap 2018 07 26 08h29m08s102

Share This Article
Leave a Comment

Leave a Reply

Your email address will not be published. Required fields are marked *