ಮೈಸೂರು: ನಾನು ಮತ್ತೆ ಲೋಕಸಭೆ ಚುನಾವಣೆಗೆ ನಿಲ್ಲೋದಿಲ್ಲ. ನಾನು ಶಾಸಕನಾಗಿಯೇ ಮುಂದುವರಿಯುತ್ತೇನೆ. ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡೋ ಇಂಗಿತ ಇಲ್ಲ ಅಂತ ಬಿಜೆಪಿ ಶಾಸಕ ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.
ನಗರದ ಕೆ.ಆರ್.ಮೋಹಲ್ಲದಲ್ಲಿರುವ ಅರ್ಜುನ್ ಗುರೂಜಿ ನಿವಾಸಕ್ಕೆ ಶಾಸಕ ಶ್ರೀರಾಮುಲು ಭೇಟಿ ನೀಡಿ ಗೌಪ್ಯ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಅವರು, ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸ್ತೇನೆ ಅನ್ನೋದು ಸತ್ಯಕ್ಕೆ ದೂರವಾದದ್ದು ಅಂತ ಅವರು ಹೇಳಿದ್ರು.
ಇದೇ ವೇಳೆ ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ತಾರತಮ್ಯ ಮಾಡಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಕೇವಲ ಮೂರ್ನಾಲ್ಕು ಜಿಲ್ಲೆಗೆ ಸೀಮಿತಗೊಳಿಸಿ ಬಜೆಟ್ ಮಂಡಿಸಿದ್ದಾರೆ. ಅವರ ಬಜೆಟ್ ಅನ್ನು ಯಾರು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಉತ್ತರ ಕರ್ನಾಟಕ ಜನರು ಪ್ರತ್ಯೇಕ ರಾಜ್ಯ ಕೇಳುತ್ತಿದ್ದಾರೆ. ಬಜೆಟ್ನಲ್ಲಿ ಆ ಭಾಗವನ್ನ ಕಡೆಗಣಿಸಿದ್ದು, ಅದಕ್ಕೆ ಪುಷ್ಠಿ ನೀಡಿದಂತಾಗಿದೆ. ಆದ್ರೆ ಯಾವುದೇ ಕಾರಣಕ್ಕೂ ಇದಕ್ಕೆ ನನ್ನ ಸಹಮತ ಇಲ್ಲ. ಈ ಬಗ್ಗೆ ವಿಧಾನಸಭೆಯಲ್ಲಿ ಮಾತಾಡುತ್ತೇನೆ ಅಂದ್ರು.
ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಬಜೆಟ್ನಲ್ಲಿ ಆ ಭಾಗಕ್ಕೆ ಯಾವುದೇ ರೀತಿ ಪ್ಯಾಕೇಜ್ ನೀಡಿಲ್ಲ. ಇದು ಕುಮಾರಸ್ವಾಮಿಯವರ ಆಡಳಿತ ತೋರುತ್ತದೆ. ಕುಮಾರಸ್ವಾಮಿ ಕೇವಲ 2 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದಾರೆ. ಈ ಹಿಂದೆ ಇದ್ದ ಸರ್ಕಾರ 4 ಸಾವಿರ ಕೋಟಿ ಸಾಲಮನ್ನಾ ಬಾಕಿ ಉಳಿಸಿಕೊಂಡಿದೆ. ಈ ವರ್ಷದ ಬಜೆಟ್ನಲ್ಲಿ ಎಚ್ಡಿಕೆ 6 ಸಾವಿರ ಕೋಟಿ ಮನ್ನಾ ಮಾಡಿದ್ದಾರೆ. ಅಂದ್ರೆ ಇವರು ನಿಜವಾಗಿಯೂ ಮನ್ನಾ ಮಾಡಿದ ಸಾಲ ಕೇವಲ 2 ಸಾವಿರ ಕೋಟಿ. ಇವರು ಕೊಟ್ಟ ಪ್ರಣಾಳಿಕೆ ಏನೂ ಇವರು ಮಾಡಿದ ಸಾಲಮನ್ನವೆಷ್ಟು ಎಂದು ಕುಮಾರಸ್ವಾಮಿಯವರನ್ನ ಪ್ರಶ್ನಿಸಿದ್ರು.
ರೇವಣ್ಣ, ಕುಮಾರಸ್ವಾಮಿ ವಚನ ಭ್ರಷ್ಟರೆಂದು ರಾಜ್ಯದ ಜನರಿಗೆ ಗೊತ್ತಿದೆ. ಮೊದಲು ಯಡಿಯೂರಪ್ಪನವರಿಗೆ ಅಧಿಕಾರ ಕೊಡದೆ ವಚನ ಭ್ರಷ್ಟರಾದ್ರು. ಇದೀಗ ರೈತರಿಗೆ ಸಾಲಮನ್ನಾ ಮಾಡದೆ ವಚನ ಭ್ರಷ್ಟರಾಗಿದ್ದಾರೆ. ಅದಕ್ಕೆ ರಾಜ್ಯದ ಜನ ಇವರನ್ನು ನಂಬದೆ ಕಾಂಗ್ರೆಸ್-ಜೆಡಿಎಸ್ಗೆ ಬಹುಮತ ಕೊಟ್ಟಿಲ್ಲ. ಇವರಿಬ್ಬರಿಗೂ ಪ್ರಧಾನಿ ಮೋದಿ ಲೋಕಸಭೆ ಚುನಾವಣೆಯಲ್ಲೇ ಏಟು ಕೊಡ್ತಾರೆ. ಮತ್ತೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಅಂತ ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ರು.