ದೊಡ್ಡಬಳ್ಳಾಪುರ: ಬೈಕ್ ವಿಚಾರದಲ್ಲಿ ಉಂಟಾದ ಜಗಳವೊಂದರಲ್ಲಿ 21 ವರ್ಷದ ಯುವಕನೊರ್ವ, ಮತ್ತೊಬ್ಬ 21 ವರ್ಷದ ಯುವಕನ ತಲೆ ಕಡಿದು ಪೊಲೀಸ್ ಠಾಣೆಗೆ ಬರಲು ಯತ್ನಿಸಿರೋ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿದೆ.
ನಗರದ ಉಪೇಂದ್ರ ಕೊಲೆಯಾಗಿದ್ದು, ರೌಡಿಶೀಟರ್ ಪವನ್ ತಲೆ ಕಡಿದಿದ್ದು ಈಗ ಅರೆಸ್ಟ್ ಆಗಿದ್ದಾನೆ. ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆಯ ಶ್ರೀರಾಮದೇವಸ್ಥಾನ ಬಳಿ ಜೂನ್ 1 ರಂದು ಅಪರಿಚಿತ ವ್ಯಕ್ತಿಯ ರುಂಡ ಪತ್ತೆಯಾಗಿತ್ತು. ಪ್ರಕರಣದ ತನಿಖೆಗಿಳಿದ ದೊಡ್ಡಬಳ್ಳಾಪುರ ಪೊಲೀಸರಿಗೆ ಪತ್ತೆಯಾದ ರುಂಡ ನಗರದ ಉಪೇಂದ್ರ ನದು ಎಂಬುದು ಅವರ ತಂದೆಯ ಮೂಲಕ ಗೊತ್ತಾಗಿತ್ತು.
ಮೊದ ಮೊದಲು ರೈಲ್ವೆ ಹಳಿಗಳ ಕೂಗಳತೆ ದೂರದಲ್ಲಿ ರುಂಡ ಪತ್ತೆಯಾದ ಕಾರಣ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಅಂತಲೇ ಅಂದಾಜಿಸಿದ್ದರು. ಆದ್ರೆ ರುಂಡ ಪತ್ತೆಯಾಗಿ ಮುಂಡಕ್ಕಾಗಿ ರೈಲ್ವೇ ಹಳಿಗಳ ಅಕ್ಕ-ಪಕ್ಕ ಹುಡುಕಾಟ ನಡೆಸಿದ್ರೂ ಮುಂಡ ಪತ್ತೆಯಾಗಿರಲಿಲ್ಲ. ಇದ್ರಿಂದ ಅನುಮಾನಗೊಂಡ ಪೊಲೀಸರು ಪ್ರಕರಣದ ತನಿಖೆಯ ದಿಕ್ಕನ್ನ ಬದಲಿಸಿದ್ದರು.
ಕೊಲೆಗೆ ಕಾರಣ ಏನು?
ಬೆಂಗಳೂರಿನಿಂದ ದೊಡ್ಡಬಳ್ಳಾಪುರ ಕ್ಕೆ ಆಗಮಿಸಿದ್ದ ಸ್ನೇಹಿತ ಯೋಗಿಯ ಬೈಕ್ ನ್ನ ಪವನ್ ಪಡೆದುಕೊಂಡಿದ್ದ. ಆದ್ರೆ ಈ ಬೈಕ್ ಮೇಲೆ ಕಣ್ಣು ಹಾಕಿದ ಆಶೋಕ್ ಪವನ್ ಬಳಿಯಿದ್ದ ಬೈಕ್ ನ್ನ ಚಾಕು ತೋರಿಸಿ ಬೆದರಿಸಿ ಕಸಿದುಕೊಂಡಿದ್ದ. ಹೀಗಾಗಿ ಪವನ್- ಆಶೋಕ್ ನಡುವೆ ಜಗಳ ಶುರುವಾಗಿತ್ತು. ಮತ್ತೊಂದೆಡೆ ಮಾರನೇ ದಿನ ಬೈಕ್ ಮಾಲೀಕ ಯೋಗಿ ಹಾಗೂ ಪವನ್, ಅತನ ಸ್ನೇಹಿತರು ಸೇರಿ ಅಶೋಕ್ ನ ಮನೆ ಮುಂದಿದ್ದ ಆತನ ಸ್ವಂತ ಬೈಕ್ ನ್ನ ಸುಟ್ಟು ಹಾಕಿದ್ರು.
ಕೊನೆಗೆ ಆಶೋಕ್ ನ ಬಳಿ ಕಸಿದುಕೊಂಡ ಬೈಕ್ ಕೊಡುವಂತೆ ಪಟ್ಟು ಹಿಡಿದು ಗಲಾಟೆ ನಡೆಸಿದ್ರು. ಇದಲ್ಲದೆ ಅಶೋಕ್ ತಂಗಿ ಹಾಗೂ ಪವನ್ ನಡುವೆ ಪ್ರೇಮಾಂಕುರವಾಗಿ ಆ ವಿಚಾರದಲ್ಲಿ ಮೊದಲೇ ಅಶೋಕ್-ಪವನ್ ನಡುವೆ ದ್ವೇಷ ಏರ್ಪಟ್ಟಿತ್ತು. ಇದ್ರಿಂದ ಇಬ್ಬರ ನಡುವೆ ದ್ವೇಷ ಬೈಕ್ ಜಗಳದಿಂದ ಮತ್ತೆ ಕೆರಳಿ ಕೊನೆಗೆ ಇಬ್ಬರ ಪರಸ್ಪರ ರನ್ನ ಕೊಲೆ ಮಾಡೋಕೆ ಪ್ಲಾನ್ ಮಾಡಿದ್ರು. ಆದ್ರೆ ಇದರ ಮಧ್ಯೆ ಅಶೋಕ್ ಸ್ನೇಹಿತ ಉಪೇಂದ್ರನೇ ತನ್ನ ಮಾಹಿತಿ ಆಶೋಕ್ ನಿಗೆ ಕೊಡ್ತಿದ್ದಾನೆ ಅಂತ ಉಪೇಂದ್ರನನ್ನು ಪವನ್ ಮೊದಲು ಟಾರ್ಗೆಟ್ ಮಾಡಿದ್ದ.
ಈ ಮಧ್ಯೆ ಮಧ್ಯದಾರೀಲಿ ಸಿಕ್ಕ ಉಪೇಂದ್ರ ನನ್ನ ನಾಗರಕರೆಗೆ ಕರೆದುಕೊಂಡ ಹೋದ ಪವನ್, ಮೊದಲು ಅವನ ಬಟ್ಟೆ ಬಿಚ್ಚಿಸಿದ್ದಾನೆ. ಕೊನೆಗೆ ತಾನು ಬಟ್ಟೆ ಬಿಚ್ಚಿ ಎದುರು ನಿಲ್ತಾನೆ. ಮೊದಲೇ ಪ್ಲಾನ್ ನಂತೆ ಕೆರೆಯಲ್ಲಿ ಇಟ್ಟಿದ್ದ ಲಾಂಗ್ ಉಪೇಂದ್ರ ನಿಗೆ ಕೊಟ್ಟು ಕೊಲೆ ಮಾಡೊಕೆ ಹೇಳ್ತಾನೆ. ಅದ್ರೆ ಉಪೇಂದ್ರ ನಿರಾಕರಿಸಿದಾಗ ಕೊಡು ನಾನು ಮಾಡ್ತೀನಿ ಅಂತ ಲಾಂಗ್ ತಗೊಂಡು ಒಂದೇ ಏಟಿಗೆ ಉಪೇಂದ್ರ ನ ತಲೆ ಕತ್ತರಿಸುತ್ತಾನೆ. ತದನಂತರ ಲಾಂಗ್ ನಿಂದ ಉಪೇಂದ್ರ ನ ರುಂಡ-ಮುಂಡ ಬೇರ್ಪಡಿಸಿ, ಮುಂಡವನ್ನ ಅಲ್ಲೇ ಕೆರೆಯಲ್ಲಿ ಹೂತು ಹಾಕ್ತಾನೆ.
ರುಂಡವನ್ನ ಚೀಲದಲ್ಲಿ ಹಾಕಿಕೊಂಡು ಕೈಯಲ್ಲಿ ಹಿಡಿದು ಪೊಲೀಸ್ ಠಾಣೆ ಕಡೆಗೆ ಹೆಜ್ಜೆ ಹಾಕಿದ್ದಾನೆ. ಅಷ್ಟರಲ್ಲೇ ಮತ್ತೊಂದಡೆ ಪವನ್ ಕೊಲೆ ಮಾಡೋಕೆ ಅಂತ ಪವನ್ ನನ್ನ ಹುಡುಕಾಡ್ತಿದ್ದ ಆಶೋಕ್ ಗೆ ಪವನ್ ಸಿಕ್ಕಿಬಿದ್ದಿದ್ದ. ಸ್ಮಶಾನ ಕ್ಕೆ ಕರೆದುಕೊಂಡು ಹೋಗಿ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿ ತಲೆ ಯ ಮೇಲೆ ಕಲ್ಲು ಎತ್ತಿ ಹಾಕಿದ್ದ. ಆದ್ರೆ ಪವನ್ ನನ್ನ ಮರ್ಡರ್ ಮಾಡೋಕೆ ಕರೆದುಕೊಂಡು ಹೋಗಿರುವ ವಿಷಯ ತಿಳಿದು ಪವನ್ ತಂದೆ ಸ್ಮಶಾನದ ಬಳಿ ಹೋಗಿದ್ದಾರೆ. ಇದನ್ನ ಕಂಡ ಅಶೋಕ್ ಹಾಗೂ ಸಹಚರರು ಪರಾರಿಯಾಗಿ ಪವನ್ ಬದುಕುಳಿದಿದ್ದ. ಕೊನೆಗೆ ಹೋಗಿ ತನ್ನ ಮೇಲಿನ ಕೊಲೆ ಪ್ರಕರಣವನ್ನ ಪೊಲೀಸರಿಗೆ ತಿಳಿಸಿದ್ದ. ಆದ್ರೆ ತಾನು ಮಾಡಿದ್ದ ಉಪೇಂದ್ರನ ಕೊಲೆ ವಿಷಯ ಮುಚ್ಚಿಟ್ಟಿದ್ದ.
ಪ್ರಕರಣ ಭೇದಿಸಿದ್ದು ಹೇಗೆ?
ಏಪ್ರಿಲ್ 30 ರಂದು ಬಿಸಾಡಿದ್ದ ರುಂಡ, ಜೂನ್ 1 ರಂದು ಪತ್ತೆಯಾಗಿತ್ತು. ಮಗ ಕಾಣೆಯಾಗಿದ್ದ ಹಿನ್ನಲೆಯಲ್ಲಿ ರುಂಡ ಪತ್ತೆಯಾದ ವಿಷಯ ತಿಳಿದು ಮೃತ ಉಪೇಂದ್ರ ತಂದೆ ಪೊಲೀಸ್ ಠಾಣೆಗೆ ಬಂದು ಫೋಟೋ ಮೂಲಕ ತನ್ನ ಮಗನದ್ದೇ ರುಂಡ ಅಂತ ಗುರ್ತಿಸಿದ್ದ. ಇನ್ನೂ ತನ್ನ ಮಗನನ್ನ ಪವನ್ ಕರೆದುಕೊಂಡು ಹೋಗಿದ್ದ ಅನ್ನೋ ಮಾಹಿತಿಯನ್ನ ಪೊಲೀಸರಿಗೂ ನೀಡಿದ್ದ. ಇದೇ ಅನುಮಾನದ ಮೇಲೆ ಪವನ್ ಕರೆಸಿ ಬೆಂಡೆತ್ತಿದ್ದ ಪೊಲೀಸರಿಗೆ ಗೊತ್ತಾಗಿದ್ದು ಈ ಒಂದು ಬೈಕ್ ಮರ್ಡರ್ ನ ಕ್ರೈಂ ಕಹಾನಿ.
ಸದ್ಯ ಪವನ್, ಅಶೋಕ್ ಸೇರಿದಂತೆ ಐವರು ಸಹಚರರನ್ನ ಬಂಧಿಸಿರುವ ಪೊಲೀಸರು ಘಟನೆಗೆಲ್ಲಾ ಕಾರಣವಾದ ಬೈಕ್ ಜಪ್ತಿ ಮಾಡಿದ್ದಾರೆ. ಪ್ರಕರಣದ ತನಿಖೆ ನಡೆಸಿ ಕಾರ್ಯಾಚರಣೆ ನಡೆಸಿದ ದೊಡ್ಡಬಳ್ಳಾಪುರ ಸಿಪಿಐ ಸಿದ್ದರಾಜು ಕಾರ್ಯಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಭೀಮಾಶಂಕರ್ ಗುಳೇದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.