ರಾಯಚೂರು: ಜಮೀನಿನಲ್ಲಿದ್ದ ಮೇವಿನ ಬಣವೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ಎರಡು ಬಣವೆಗಳು ಸಂಪೂರ್ಣ ಭಸ್ಮವಾಗಿರುವ ಘಟನೆ ರಾಯಚೂರಿನ ಲಿಂಗಸುಗೂರಿನ ಕನ್ನಾಪುರಹಟ್ಟಿಯಲ್ಲಿ ನಡೆದಿದೆ.
ಮೇಗಳಪೇಟೆಯ ಹನುಮಂತ ಎಂಬ ರೈತನ ಜಮೀನಿನಲ್ಲಿ ಜಾನುವಾರುಗಳಿಗಾಗಿ ಸಂಗ್ರಹಿಸಿಟ್ಟಿದ್ದ ಮೇವಿನ ಬಣವೆಗಳಿಗೆ ಬೆಂಕಿ ಹಚ್ಚಲಾಗಿದೆ. ಲಿಂಗಸ್ಗೂರು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಹೊತ್ತಿಗೆ ಬಣವೆಗಳು ಸುಟ್ಟುಹೋಗಿದ್ದವು.
15 ದಿನಗಳ ಹಿಂದೆ ಇದೇ ರೈತನಿಗೆ ಸೇರಿದ್ದ ಎರಡು ಟ್ರ್ಯಾಕ್ಟರ್ ಮೇವಿನ ಬಣವೆ ಸುಟ್ಟು ಅಪಾರ ನಷ್ಟ ಅನುಭವಿಸಿದ್ದರು. ಪುನಃ ಬಣವೆಗಳು ಸುಟ್ಟಿದ್ದಕ್ಕೆ ರೈತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.