ಕೋಲಾರ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ತಮ್ಮ ಟಗರು ಚಿತ್ರ ತಂಡದೊಂದಿಗೆ ಕೋಲಾರಕ್ಕೆ ಭೇಟಿ ನೀಡಿದ್ದರು.
ಟಗರು ಚಿತ್ರ 50ನೇ ದಿನದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಕೋಲಾರಕ್ಕೆ ತಂಡದೊಂದಿಗೆ ಭೇಟಿ ನೀಡಿದ ಅವರು, ಕೋಲಾರದ ಅಂತರಗಂಗೆ ರಸ್ತೆಯಲ್ಲಿರುವ ಕುವೆಂಪು ಪಾರ್ಕ್ ನಲ್ಲಿರುವ ವರನಟ ಡಾ.ರಾಜ್ ಕುಮಾರ್ ಪತ್ರಿಮೆಗೆ ಮಾಲಾರ್ಪಣೆ ಮಾಡಿ ನಂತರ ಭವಾನಿ ಚಿತ್ರಮಂದಿರಕ್ಕೆ ತೆರಳಿದ್ರು. ನೆಚ್ಚಿನ ನಟ ಬರುವ ವಿಚಾರ ತಿಳಿದ ಅಭಿಮಾನಿಗಳು ಚಿತ್ರಮಂದಿರದ ಬಳಿಯೇ ಕಿಕ್ಕಿರಿದು ತುಂಬಿದ್ದರು.
ಭವಾನಿ ಚಿತ್ರಮಂದಿರದಲ್ಲಿ ಮುಂದಿನ ವಾರ ಟಗರು ಚಿತ್ರ 50 ದಿನ ಪೂರೈಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ನಂತರ ಎಂ.ಜಿ.ರಸ್ತೆಯಲ್ಲಿ ನಿರ್ಮಿಸಿದ ವೇದಿಕೆಗೆ ಆಗಮಿಸಿ ಟಗರು ಚಿತ್ರದ ಡೈಲಾಗ್ಗಳನ್ನು ಹೇಳಿ ಅಭಿಮಾನಿಗಳನ್ನು ರಂಜಿಸಿದ್ದಾರೆ.
ಇದೇ ವೇಳೆ ಶಿವಣ್ಣ ಕೋಲಾರದಲ್ಲಿ ತೆಗೆದ ಹಲವು ಸಿನಿಮಾ ಶೂಟಿಂಗ್ ಸೇರಿದಂತೆ ಕೋಲಾರದ ನಂಟನ್ನ ಬಿಚ್ಚಿಟ್ಟರು. ಅಷ್ಟೇ ಅಲ್ಲದೇ ಚಿಕ್ಕಂದಿನಿಂದಲೂ ಚೆನೈನಿಂದ ಬೆಂಗಳೂರಿಗೆ ತೆರಳುವ ವೇಳೆ ಕೋಲಾರದ ಮೂಲಕವೇ ಹಾದು ಹೋಗಬೇಕಾಗಿದ್ದು, ಮುಂದೊಂದು ದಿನ ನಗರದಲ್ಲಿ ದೊಡ್ಡದಾದ ಮ್ಯೂಸಿಕಲ್ ನೈಟ್ ಮಾಡುವ ಭರವಸೆ ನೀಡಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು.
ಟಗರು ಚಿತ್ರದ ಡಾಲಿ ಎಂದು ಖ್ಯಾತಿ ಪಡೆದ ಧನಂಜಯ, ನಿರ್ಮಾಪಕ ಶ್ರೀಕಾಂತ್, ಅಂತರಾಷ್ಟ್ರೀಯ ಬಾಡಿ ಬಿಲ್ಡರ್ ಎ.ವಿ.ರವಿ ಮತ್ತಿತರರು ಶಿವರಾಜ್ ಕುಮಾರ್ ಗೆ ಸಾಥ್ ನೀಡಿದ್ದರು.