ಚಿಕ್ಕಬಳ್ಳಾಪುರ: ಹೊಸ ವರ್ಷ ಆಚರಿಸಲು ನಂದಿ ಬೆಟ್ಟ ಅಥವಾ ಆವಲಬೆಟ್ಟಕ್ಕೆ ಹೋಗೋ ಪ್ಲ್ಯಾನ್ ಮಾಡಿಕೊಂಡಿದ್ರಾ? ಹಾಗಿದ್ರೆ ನಿಮಗಿದು ಕಹಿ ಸುದ್ದಿ. ಪಂಚಗಿರಿಗಳ ನಾಡು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣಗಳಾದ ನಂದಿಬೆಟ್ಟ ಹಾಗೂ ಆವಲಬೆಟ್ಟದಲ್ಲಿ ಹೊಸ ವರ್ಷಾಚರಣೆಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ಪ್ರವಾಸಿ ತಾಣವಾದ ನಂದಿಗಿರಿಧಾಮ ಹಾಗೂ ಸೆಲ್ಫಿ ಸ್ಪಾಟ್ ಅಂತಲೇ ಫೇಮಸ್ ಆಗಿರುವ ಆವಲಬೆಟ್ಟದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದೆ. ಡಿಸೆಂಬರ್ 31ರ ಸಂಜೆ 4 ಗಂಟೆಯಿಂದ ಜನವರಿ 1ರ ಬೆಳಗ್ಗೆ 8 ಗಂಟೆಯವರೆಗೂ ನಂದಿಬೆಟ್ಟ ಹಾಗೂ ಆವಲಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಚೆಕ್ ಪೋಸ್ಟ್ ನಿಂದ ವಾಹನ ಹಾಗೂ ಪ್ರವಾಸಿಗರು ಹೋಗೋದನ್ನ ನಿಷೇಧಿಸಲಾಗಿದೆ. ಜನವರಿ 1ರ ಬೆಳಗ್ಗೆ 8 ಗಂಟೆಯ ನಂತರ ಎಂದಿನಂತೆ ಪ್ರವಾಸಿಗರಿಗೆ ಪ್ರವೇಶ ಇರುತ್ತದೆ.
ಸಾರ್ವಜನಿಕರ ಹಿತದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದ್ದು ಪ್ರವಾಸಿಗರು ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಕಾರ್ತಿಕ್ ರೆಡ್ಡಿ ಮನವಿ ಮಾಡಿದ್ದಾರೆ.