ಬೆಂಗಳೂರು: ವಾಣಿ ವಿಲಾಸ ವೈದ್ಯರ ನಿರ್ಲಕ್ಷ್ಯಕ್ಕೆ ಮೂರು ದಿನದ ಮಗು ಬಲಿಯಾಗಿರುವ ಆರೋಪ ಕೇಳಿಬಂದಿದೆ.
ಮೂರು ದಿನದ ಹಿಂದೆ ಹೆರಿಗೆಗೆಂದು 35 ವರ್ಷದ ಅನಿತಾ ಎಂಬಾಕೆ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಮಗು ಮೂರು ದಿನದಿಂದ ಆರೋಗ್ಯವಾಗಿದೆ ಎಂದು ಹೇಳಿದ್ದರು. ಆದರೆ ಇದ್ದಕ್ಕಿದ್ದಂತೆ ಭಾನುವಾರ ಸಂಜೆ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.
ವೈದ್ಯರ ನಿರ್ಲಕ್ಷ್ಯವೇ ಮಗು ಮೃತಪಡಲು ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ವೈದ್ಯರ ಜೊತೆ ಪೋಷಕರು ವಾಗ್ವಾದ ನಡೆಸಿದ್ದು, ಕೆಲಕಾಲ ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ಕೂಡ ನಿರ್ಮಾಣವಾಗಿತ್ತು.
ಪೋಷಕರು ಮಧ್ಯಾಹ್ನ 2.45 ಕ್ಕೆ ಮಗು ಹಾಲು ಕುಡಿಯುತ್ತಿಲ್ಲ, ಮೂತ್ರ ಮಾಡ್ತಿಲ್ಲ ಎಂದು ವೈದ್ಯರಿಗೆ ತಿಳಿಸಿದ್ದಾರೆ. ಆದರೆ ವೈದ್ಯರು ಇದಕ್ಕೆ ಸ್ಪಂದಿಸದೆ, ಆಗ ಏನು ಸಮಸ್ಯೆ ಇಲ್ಲ ಎಂದು ಹೇಳಿ ಕಳಿಸಿದ್ದಾರೆ. ಸಂಜೆ ಸುಮಾರು 7 ಗಂಟೆ ಹೊತ್ತಿಗೆ ಮಗು ಮೃತಪಟ್ಟಿದೆ. ಆದರೆ ಇದುವರೆಗೂ ಮಗು ಸತ್ತರೂ ಇನ್ನೂ ರಿಪೋರ್ಟ್ ನೀಡದೆ ವೈದ್ಯರು ಸತಾಯಿಸುತ್ತಿದ್ದಾರೆ, ಕೇವಲ ಮೌಖಿಕ ಕಾರಣ ನೀಡುತ್ತಿದ್ದಾರೆ ಎಂದು ವೈದ್ಯರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋಷಕರು ಮಾಡಿದ ಆರೋಪವನ್ನು ವೈದ್ಯರು ತಳ್ಳಿಹಾಕಿದ್ದು, ಮಗು ಮೃತಪಡಲು ನಮ್ಮಿಂದ ಯಾವುದೇ ತಪ್ಪಾಗಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.