ಚಾಮರಾಜನಗರ: ಕಳೆದ ಒಂದೆರಡು ತಿಂಗಳಿನಿಂದ ಎಡಬಿಡದೆ ಸುರಿಯುತ್ತಿರುವ ಬಾರಿ ಮಳೆಯಿಂದ ಬೆಂಗಳೂರು ಸೇರಿದಂತೆ ನಾಡಿನ ಹಲವೆಡೆ ಹಲವು ಅವಘಡಗಳು ಸಂಭವಿಸಿವೆ. ಆದ್ರೆ ಈ ಮಳೆ ಅರಣ್ಯ ಭಾಗಕ್ಕೆ ವರದಾನವಾಗಿದ್ದು ಇದರಿಂದ ಪ್ರಕೃತಿ ಸೌಂದರ್ಯ ಕಂಗೊಳಿಸುತ್ತಿದೆ.
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಣಾ ಪ್ರದೇಶ, ಬಂಡಿಪುರ ಹುಲಿ ಸಂರಕ್ಷಣಾ ಪ್ರದೇಶದ ಕಾಡು ಇದೀಗ ಹಚ್ಚ-ಹಸಿರಿನಿಂದ ಕಂಗೊಳಿಸುವುದರ ಜೊತೆಗೆ ಕಾಡಿನ ಮಧ್ಯ ಅಲ್ಲಿ ಝರಿಗಳು ನಿರ್ಮಾಣವಾಗಿವೆ. ಕಳೆದ ಒಂದೆರಡು ತಿಂಗಳಿನಿಂದ ಸುರಿದ ಭಾರೀ ಮಳೆ ಚಾಮರಾಜನಗರ ಜಿಲ್ಲೆ ಭಾಗದ ಅರಣ್ಯ ಪ್ರದೇಶವನ್ನು ಕಂಗೊಳಿಸುವಂತೆ ಮಾಡಿದೆ.
ಭಾರೀ ಮಳೆ ಬಿದ್ದಿರುವ ಹಿನ್ನೆಲೆಯಲ್ಲಿ ಕಾಡಿನ ಮಧ್ಯೆ ಅಲ್ಲಲ್ಲಿ ಝರಿಗಳು ಹರಿಯುತ್ತಿದ್ದು, ಕಾಡಿನ ಸೊಬಗಿಗೆ ಮತ್ತಷ್ಟು ರಂಗು ತಂದಿದೆ. ಹಸಿರಿನ ಸೊಬಗಿನ ಮಧ್ಯ ಭಾಗದಲ್ಲಿ ಮೈದುಂಬಿ ಹರಿಯುತ್ತಿರುವ ಇಂತಹ ಝರಿಗಳನ್ನು ನೋಡಲು, ನಾಡಿನ ಹಲವು ಭಾಗಗಳಿಂದ ಪ್ರೇಕ್ಷಕರು ಇಲ್ಲಿಗೆ ಆಗಮಿಸಿ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಕಳೆದ ಏಳು ತಿಂಗಳ ಹಿಂದೆ ಬಿಳಿರಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಣ ಪ್ರದೇಶ ಹಾಗೂ ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶದ ಕಾಡಿಗೆ ಬೆಂಕಿ ಬಿದ್ದು ಕಾಡು ಹೊತ್ತಿ ಉರಿದಿತ್ತು. ಇದರಿಂದ ಕಾಡಿನ ಅನೇಕ ಮರಗಿಡಗಳು ಬೆಂಕಿಗೆ ಆಹುತಿಯಾಗಿದ್ದವು. ಹೀಗಾಗಿ ಕಾಡಿನ ಸೌಂದರ್ಯ ಸಂಪೂರ್ಣವಾಗಿ ಕಳೆಗುಂದಿತ್ತು. ಇದೀಗ ಸುರಿಯುತ್ತಿರುವ ಮಳೆಯಿಂದ ಬೆಂಕಿ ಬಿದ್ದ ಪ್ರದೇಶಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ವರುಣನ ಆರ್ಭಟ ವನ್ಯ ಸಿರಿಯ ಸೊಬಗನ್ನು ಇದೀಗ ಮರುಕಳಿಸಿದ್ದು ಕಾಡಿಗೆ ಹಾಗೂ ಪ್ರೇಕ್ಷಕರಿಗೆ ಹಬ್ಬದೂಟ ಬಡಿಸುತ್ತಿದ್ದಾನೆ.