ನವದೆಹಲಿ: ರಾಷ್ಟ್ರಪಿತ ಮಹತ್ಮಾ ಗಾಂಧೀಜಿಯವರ ಹತ್ಯೆಯನ್ನು ಮರು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಅಮಿಕಸ್ ಕ್ಯೂರಿ ಅವರನ್ನು ನೇಮಿಸಿದೆ.
ನ್ಯಾ. ಎಸ್ಎ ಬೊಬ್ಡೆ ಮತ್ತು ಎಲ್ ನಾಗೇಶ್ವರ್ ರಾವ್ ಅವರ ನೇತೃತ್ವದ ದ್ವಿಸದಸ್ಯ ಪೀಠ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮರೇಂದರ್ ಶರ್ಮಾ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.
ಅರ್ಜಿ ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರ ಪರ ವಕೀಲರಿಂದ 15 ನಿಮಿಷಗಳ ವಿವರಣೆಯನ್ನು ಪಡೆದ ಕೋರ್ಟ್, ಬಹು ದಿನಗಳ ಹಿಂದೆಯೇ ತನಿಖೆ ನಡೆಸಿ ತೀರ್ಪು ನೀಡಿರುವ ಪ್ರಕರಣದಲ್ಲಿ ಕಾನೂನು ಈಗ ಏನು ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಅರ್ಜಿಯ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಿದೆ.
ಮುಂಬೈ ಮೂಲದ ಡಾ. ಪಂಕಜ್ ಫಾಡ್ನಿಸ್ ಅವರು ಕೋರ್ಟ್ಗೆ ಗಾಂಧೀಜಿಯವರ ಹತ್ಯೆಯ ಮರು ತನಿಖೆಯನ್ನು ಮಾಡುವಂತೆ ಅರ್ಜಿಯನ್ನು ಸಲ್ಲಿದ್ದರು. ಪಂಕಜ್ ಪ್ರಸ್ತುತ ಅಭಿನವ್ ಭಾರತರತ್ನ ಸಂಸ್ಥೆಯ ಸದಸ್ಯರಾಗಿದ್ದು, ಸಂಶೋಧಕರಾಗಿದ್ದಾರೆ. ಗಾಂಧೀಜಿಯವರ ಹತ್ಯೆ ವೇಳೆ ನಡೆದ ಹಲವು ಘಟನೆಗಳ ಕುರಿತು ಶೋಧಕ ಪ್ರಶ್ನೆಗಳನ್ನು ನ್ಯಾಯಾಲಯದ ಮುಂದೆ ವ್ಯಕ್ತಪಡಿಸಿದರು.
1948 ಜನವರಿ 30 ರಂದು ಹಿಂದೂ ರಾಷ್ಟ್ರೀಯವಾದಿ ನಾಥೂರಾಮ್ ವಿನಾಯಕ್ ಗೋಡ್ಸೆ ಗಾಂಧೀಜಿಯವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ.