ಬೆಂಗಳೂರು: ಎಐಎಡಿಎಂಕೆ ನಾಯಕಿ ವಿ.ಕೆ ಶಶಿಕಲಾಗೆ 5 ದಿನಗಳ ಪೆರೋಲ್ ಸಿಕ್ಕಿದ್ದು ಶುಕ್ರವಾರ ತಮಿಳುನಾಡಿಗೆ ಪ್ರಯಾಣ ಬೆಳೆಸಲಿದ್ದಾರೆ.
ಈಗಾಗಲೇ ಆಪ್ತ ಟಿಟಿವಿ ದಿನಕರನ್ ಪರಪ್ಪನ ಅಗ್ರಾಹರಕ್ಕೆ ಭೇಟಿ ನೀಡಿದ್ದು, ಶಶಿಕಲಾ ಬಿಡುಗಡೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೊಲೀಸ್ ಅಧಿಕಾರಿಗಳು ನಡೆಸುತ್ತಿದ್ದಾರೆ.
ಪತಿ ನಟರಾಜನ್ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ 15 ದಿನಗಳ ತುರ್ತು ಪೆರೋಲ್ ರಜೆ ನೀಡಬೇಕು ಎಂದು ಶಶಿಕಲಾ ಮನವಿ ಸಲ್ಲಿಸಿದ್ದರು. ಎರಡು ದಿನಗಳ ಹಿಂದೆ ಚೆನ್ನೈ ಆಸ್ಪತ್ರೆಯಲ್ಲಿ ನಟರಾಜನ್ ಅವರಿಗೆ ಯಕೃತ್ ಕಸಿ ಮಾಡಲಾಗಿತ್ತು.
ಜೈಲಾಧಿಕಾರಿಗಳು 15 ದಿನಗಳ ಪೆರೋಲ್ ರಜೆ ನೀಡದೇ ಐದು ದಿನಗಳ ರಜೆಯನ್ನು ಮಂಜೂರು ಮಾಡಿದ್ದಾರೆ. ಇದೇ ವೇಳೆ ಯಾವುದೇ ರಾಜಕೀಯ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಷರತ್ತು ವಿಧಿಸಿಸಲಾಗಿದ್ದು, ಒಂದು ವೇಳೆ ಭಾಗವಹಿಸಿದ್ದು ಬೆಳಕಿಗೆ ಬಂದರೆ ಮುಂದೆ ಪೆರೋಲ್ ನೀಡಲು ಸಾಧ್ಯವಿಲ್ಲ ಎಂದು ಜೈಲಾಧಿಕಾರಿಗಳು ಶಶಿಕಲಾಗೆ ಸೂಚನೆ ನೀಡಿದ್ದಾರೆ.