ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಯಮಸಂಧಿ ಎಂಬ ಗ್ರಾಮದ ಯುವಕ ಸುಪ್ರೀತ್ ಕುಮಾರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಸುಪ್ರೀತ್ ಕುಮಾರ್ ಪರಿಸರದ ಮೇಲೆ ಅಪಾರ ಕಾಳಜಿ ಹೊಂದಿದ್ದು 50 ಸಾವಿರಕ್ಕೂ ಹೆಚ್ಚಿನ ಗಿಡಗಳನ್ನ ನೆಟ್ಟು ಸಂರಕ್ಷಣೆ ಮಾಡ್ತಿದ್ದಾರೆ.
ತಮ್ಮ ಜಾಗದಲ್ಲಿಯೇ ಗಿಡಗಳ ನರ್ಸರಿ ಮಾಡಿದ್ದಾರೆ. ಸಾವಯವ ಪದ್ಧತಿಯ ನರ್ಸರಿಯಲ್ಲಿನ ಗಿಡಗಳನ್ನ ತಮ್ಮ ವಾಹನದಲ್ಲೇ ಶಾಲೆಗಳಿಗೆ ಸುತ್ತಿ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡ್ತಿದ್ದಾರೆ. ಸ್ವಗ್ರಾಮ ಯಮಸಂಧಿಯಿಂದ ಬೇಲೂರುವರೆಗಿನ 25 ಕಿಲೋಮೀಟರ್ ದೂರದವರೆಗೆ ಗಿಡ ಬೆಳೆಸುವ ಗುರಿಯನ್ನು ಹೊಂದಿದ್ದಾರೆ.
ಪರಿಸರ ಜಾಗೃತಿ ಮಾತ್ರವಲ್ಲದೆ ಗ್ರಾಮದಲ್ಲಿ ಮುಚ್ಚುವ ಸ್ಥಿತಿಗೆ ಬಂದ ಶಾಲೆಯನ್ನು ಉಳಿಸಿಕೊಳ್ಳುವುದಕ್ಕೆ ಸಾಕಷ್ಟು ಶ್ರಮವಹಿಸಿದ್ದು, ಇಬ್ಬರು ಶಿಕ್ಷಕಿಯರ ಕೊರತೆ ಇದ್ದರೂ ಸಹ ಖಾಸಗಿಯಾಗಿ ಶಿಕ್ಷಕರನ್ನ ನೇಮಿಸಿಕೊಂಡು ತಾವೇ ಸಂಬಳ ನೀಡ್ತಿದ್ದಾರೆ. ಶಾಲಾ ಮಕ್ಕಳ ಸಂಖ್ಯೆ 7 ರಿಂದ ಈಗ 40 ಆಗಿದೆ. ಸುತ್ತಲ ಗ್ರಾಮಗಳಲ್ಲಿರುವ ಶಾಲಾ ಮಕ್ಕಳನ್ನು ಕರೆತರಲು ವಾಹನ ವ್ಯವಸ್ಥೆ ಕಲ್ಪಿಸಿದ್ದಾರೆ. ಜೊತೆಗೆ ಶಾಲೆಯಲ್ಲಿ ಕ್ರೀಡಾ ಶಿಕ್ಷಕರಿಲ್ಲದ್ದರೂ ತಾವೇ ಕ್ರೀಡೆ, ವ್ಯಾಯಾಮ, ಯೋಗವನ್ನು ಹೇಳಿಕೊಡ್ತಿದ್ದಾರೆ. ರೈತರಿಗೆ ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸ್ತಿದ್ದಾರೆ.