ಶಿವಮೊಗ್ಗ: ರಿಪ್ಪನ್ಪೇಟೆಯ (Ripponpet) ಬರುವೆ ಗ್ರಾಮದ ಬಳಿ ಅರಣ್ಯ ಸಂಚಾರಿದಳದ ಸಿಬ್ಬಂದಿ ದಾಳಿ ನಡೆಸಿ 21 ಕೆಜಿ ಜಿಂಕೆ ಮಾಂಸ ವಶಕ್ಕೆ ಪಡೆದಿದ್ದಾರೆ.
ದುಷ್ಕರ್ಮಿಗಳು ಜಿಂಕೆಯನ್ನು ಬೇಟೆಯಾಡಿ ಎರ್ಟಿಗಾ ಕಾರಿನ ಮೂಲಕ ಮಾಂಸ ಸಾಗಿಸುತ್ತಿದ್ದರು. ಈ ಬಗ್ಗೆ ಮಡಿಕೇರಿಯ ಅರಣ್ಯ ಸಂಚಾರಿದಳದ ಪೊಲೀಸ್ ಅಧೀಕ್ಷಕ ಪವನ್ ನೆಜ್ಜೂರ್ ಅವರ ಮಾರ್ಗದರ್ಶನದಲ್ಲಿ ಸಾಗರದ ಅರಣ್ಯ ಸಂಚಾರಿದಳ ಪಿಎಸ್ಐ ಕೆ. ವಿನಾಯಕ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು. ಈ ವೇಳೆ ಕಾರು ಹಾಗೂ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ವಿದ್ಯುತ್ ಹಾಯಿಸಿ ಎರಡು ಜಿಂಕೆಗಳ ಬೇಟೆ – ಮೂವರು ಆರೋಪಿಗಳು ಅರೆಸ್ಟ್
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನ್ವಯ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಾದ ಬರುವೆ ಗ್ರಾಮದ ಗುರುರಾಜ ಬಿನ್ ನರಸಿಂಹ ನಾಯ್ಕ್ ಹಾಗೂ ಕರಡಿಗ ಗ್ರಾಮದ ಗಣೇಶ್ ಬಿನ್ ಗೋಪಾಲ್ ತಲೆಮರೆಸಿಕೊಂಡಿದ್ದು ಅವರ ಪತ್ತೆಗೆ ಅಧಿಕಾರಿಗಳು ಬಲೆಬೀಸಿದ್ದಾರೆ.
ದಾಳಿಯಲ್ಲಿ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳಾದ ಬಿ.ಸಿ.ಗಣೇಶ, ಆಂಜನೇಯ ಪಾಟೀಲ್, ಚಂದ್ರಕಾಂತ್, ಸುರೇಶ್, ಪ್ರಮೋದಿನಿ, ಹೆಚ್.ಬಿ. ದೊಡ್ಮನಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಹನೂರು ಶೂಟೌಟ್ ಕೇಸ್| ಮಾನವ ಹಕ್ಕುಗಳ ಆಯೋಗದ ಮುಂದೆ ಮೂರು ಕುಟುಂಬಗಳ ಹೇಳಿಕೆ ದಾಖಲು
