ಬೆಂಗಳೂರು: ಉದ್ಯಮಿ ಸಿಜೆ ರಾಯ್ (CJ Roy) ಆತ್ಮಹತ್ಯೆ ಮಾದರಿಯಲ್ಲೇ ನಿವೃತ್ತ ಬಿಬಿಎಂಪಿ ಅಧಿಕಾರಿ(BBMP Officer) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪರಮೇಶ್ವರಯ್ಯ (63) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕೋರಮಂಗಲದ (Koramangala) ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕೇಂದ್ರ ತನಿಖಾ ಸಂಸ್ಥೆಯ (CBI) ಭಯದಿಂದಲೇ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ.
2021ರಲ್ಲಿ ಬಿಬಿಎಂಪಿ ಗುತ್ತಿಗೆದಾರ ಅನಿಲ್ ಕುಮಾರ್ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಈ ವೇಳೆ ಅನಿಲ್ ಮನೆಯಲ್ಲಿದ್ದ ಸೂಟ್ಕೇಸ್ನಲ್ಲಿ ಮೂರು ಬ್ಯಾಂಕ್ ಲಾಕರ್ ಕೀಗಳು, 1.35 ಲಕ್ಷ ರೂ. ನಗದು, 275.98 ಗ್ರಾಂ ಚಿನ್ನಾಭರಣಗಳು ಪತ್ತೆಯಾಗಿದ್ದವು. ಅಲ್ಲದೆ ಅನೇಕ ಜಮೀನು ಮತ್ತು ಸೈಟ್ಗಳ ದಾಖಲಾತಿಗಳು ಸಹ ದೊರಕಿದ್ದವು. ಈ ಎಲ್ಲ ಆಸ್ತಿಗಳು ನಿವೃತ್ತ ಅಧಿಕಾರಿ ಪರಮೇಶ್ವರಯ್ಯ ಅವರಿಗೆ ಸೇರಿದ್ದು ಎಂದು ಅನಿಲ್ ಕುಮಾರ್ ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದರು. ಇದನ್ನೂ ಓದಿ: ರೆಸಾರ್ಟ್ನ ಈಜುಕೊಳದಲ್ಲಿ ಮುಳುಗಿ ಮಹಿಳೆ ದಾರುಣ ಸಾವು
ಅನಿಲ್ ಕುಮಾರ್ ಅವರ ಹೇಳಿಕೆಯ ಬೆನ್ನಲ್ಲೇ, 2021ರ ಡಿಸೆಂಬರ್ 4ರಂದು ಐಟಿ ಅಧಿಕಾರಿಗಳು ಪರಮೇಶ್ವರಯ್ಯ ಅವರ ನಿವಾಸದ ಮೇಲೆ ದಾಳಿ ನಡೆಸಿದರು. ಈ ಸಂದರ್ಭದಲ್ಲಿ, ಅನಿಲ್ ಮನೆಯಲ್ಲಿ ಪತ್ತೆಯಾಗಿದ್ದ ಸೂಟ್ಕೇಸ್ ತನ್ನದೇ ಎಂದು ಪರಮೇಶ್ವರಯ್ಯ ಒಪ್ಪಿಕೊಂಡಿದ್ದರು. ಡಿಸೆಂಬರ್ 6, 2021ರಂದು ಬ್ಯಾಂಕ್ ಲಾಕರ್ಗಳನ್ನು ಪರಿಶೀಲಿಸಿದಾಗ, ಒಟ್ಟು 86.35 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿತ್ತು. ಈ ಲಾಕರ್ ಜಿ. ಕಿಶೋರ್ ನಾಯ್ಡು ಎಂಬುವರ ಹೆಸರಿನಲ್ಲಿ ಇತ್ತು, ಆದರೆ ಅದರ ಕೀ ಪರಮೇಶ್ವರಯ್ಯ ಅವರ ಪತ್ನಿ ಮಹಾಲಕ್ಷ್ಮಿ ಹೆಸರಿನಲ್ಲಿತ್ತು. ಪತ್ತೆಯಾದ ಹಣದ ಮೂಲದ ಬಗ್ಗೆ ಪರಮೇಶ್ವರಯ್ಯ ಸೂಕ್ತ ವಿವರ ನೀಡಲು ವಿಫಲರಾಗಿದ್ದರು.
ತನಿಖೆ ನಡೆಸಿದಾಗ, ಪರಮೇಶ್ವರಯ್ಯ ಅವರ ಆಸ್ತಿ ಮೌಲ್ಯದಲ್ಲಿ ಗಣನೀಯ ಏರಿಕೆ ಕಂಡುಬಂದಿತ್ತು. 2012ರಲ್ಲಿ 29.64 ಲಕ್ಷ ರೂಪಾಯಿ ಇದ್ದ ಅವರ ಆಸ್ತಿ, 2021ರ ವೇಳೆಗೆ ಬರೋಬ್ಬರಿ 5.85 ಕೋಟಿ ರೂ.ಗೆ ಏರಿಕೆಯಾಗಿತ್ತು. ಬೆಂಗಳೂರು, ತುಮಕೂರಿನಲ್ಲಿ ನಿವೇಶನಗಳು, ಕೋರಮಂಗಲದಲ್ಲಿ ಸೈಟ್, ಮನೆ ಮತ್ತು ಅಪಾರ್ಟ್ಮೆಂಟ್ಗಳನ್ನು ಹೊಂದಿದ್ದು ಸಹ ಪತ್ತೆಯಾಗಿತ್ತು. ತನಿಖೆ ವೇಳೆ ಪರಮೇಶ್ವರಯ್ಯ ಭ್ರಷ್ಟಾಚಾರ ನಡೆಸಿರುವುದು ದೃಢಪಟ್ಟಿತ್ತು. ಇದರ ಹಿನ್ನೆಲೆಯಲ್ಲಿ, ಸಿಬಿಐನ ಎಸಿಬಿ ವಿಭಾಗದಲ್ಲಿ ಜನವರಿ 30, 2026ರಂದು ಅವರ ವಿರುದ್ಧ ಎಫ್ಐಆರ್ ದಾಖಲಿಸಿತ್ತು.
ಕೇಂದ್ರ ತನಿಖಾ ಸಂಸ್ಥೆಗಳ ತನಿಖೆಯ ಒತ್ತಡ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಪರಮೇಶ್ವರಯ್ಯ ತೀವ್ರ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

