ಬೆಂಗಳೂರು: ಜಾತಿಗಣತಿ ಗೊಂದಲ ಸಂಬಂಧ ಶನಿವಾರ ನಡೆದ ಒಕ್ಕಲಿಗ ಸಮುದಾಯದ ಸಭೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಮುಖಾಮುಖಿಯಾಗಿದ್ದಾರೆ.
ಆದಿಚುಂಚಗಿರಿ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಡಿಕೆಶಿ ಮತ್ತು ಹೆಚ್ಡಿಕೆ ಇಬ್ಬರೂ ಮುಖಾಮುಖಿಯಾದರು. ಈ ವೇಳೆ ಕುರ್ಚಿಯಲ್ಲಿ ಕುಳಿತಿದ್ದ ಡಿಕೆಶಿಗೆ ಕೈಮುಗಿದು ಹೆಚ್ಡಿಕೆ ನಮಸ್ಕರಿಸಿದರು. ಡಿಸಿಎಂ ಕೂಡ ಪ್ರತಿಯಾಗಿ ನಮಸ್ಕರಿಸಿದರು. ಬಳಿಕ ಸ್ವಾಮೀಜಿ ಪಕ್ಕದಲ್ಲಿ ಹೆಚ್ಡಿಕೆ ಕೂರುವುದಕ್ಕೆ ಜಾಗ ಮಾಡಿಕೊಟ್ಟರು. ಇಬ್ಬರೂ ನಾಯಕರು ಸ್ವಾಮೀಜಿ ಮುಂದೆ ಮಾತನಾಡಿದರು.
ಜಾತಿಗಣತಿ ಸಂಬಂಧ ಒಕ್ಕಲಿಗರ ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. 60 ದಿನ ಜಾತಿಗಣತಿ ಮುಂದೂಡಿ, 15 ದಿನ ಕಾಲಮಿತಿಯನ್ನು ಹೆಚ್ಚು ಮಾಡಿ ಅಂತಾ ಸರ್ಕಾರಕ್ಕೆ ಒತ್ತಾಯಿಸಿ ನಿರ್ಣಯ ಮಾಡಲಾಗಿದೆ.
ಗಣತಿ ವೇಳೆ ತಮ್ಮ ಸಮುದಾಯದವರು ಒಕ್ಕಲಿಗ ಎಂದೇ ಬರೆಸುವಂತೆ ಸಭೆಯಲ್ಲಿ ಸಲಹೆ ನೀಡಲಾಗಿದೆ. ಕುಂಚಟಿಗ ಒಕ್ಕಲಿಗ ಪ್ರತ್ಯೇಕ ಗುರುತಿಸಿಕೊಳ್ಳದಂತೆ ತೀರ್ಮಾನಿಸಲಾಗಿದೆ. ಯಾರೇ ಆಗಲಿ ಒಕ್ಕಲಿಗ ಸಮುದಾಯದಲ್ಲಿ ಒಗ್ಗಟ್ಟು ಇರಲಿ ಎಂದು ತಿಳಿಸಲಾಗಿದೆ. ಸರ್ವೆ ಮುಂದೂಡಿದರೆ ಒಳ್ಳೆಯದು ಎಂದು ಸಭೆ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.