ಮಂಗಳೂರು: ಆಕಸ್ಮಿಕ ಬೆಂಕಿಯಿಂದ ಸಂಪೂರ್ಣವಾಗಿ ಹಾನಿಗೊಳಗಾದ ಸುಳ್ಯದ ಅರಂತೋಡು ಘನ ತ್ಯಾಜ್ಯ ನಿರ್ವಹಣಾ ಘಟಕದ ಮರುಸ್ಥಾಪನೆಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು (Kishor Kumar Puttur) ತಮ್ಮ ಶಾಸಕರ ಅಭಿವೃದ್ಧಿ ನಿಧಿಯ ಅನುದಾನದಿಂದ 5 ಲಕ್ಷ ಹಣವನ್ನು ಮಂಜೂರು ಮಾಡಿದ್ದಾರೆ.
ಈ ಕುರಿತು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯನ್ನು ಭೇಟಿ ಮಾಡಿದ ಶಾಸಕರು, ಘಟಕದ ಪುನರ್ ನಿರ್ಮಾಣಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ತಕ್ಷಣ ಕೈಗೊಳ್ಳಲು ಸೂಚನೆ ನೀಡಿದರು. ಸಂಸದ ಬ್ರಿಜೇಶ್ ಚೌಟ ಹಾಗೂ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಈ ಸಂಬಂಧ ಬರೆದ ಮನವಿ ಪತ್ರವನ್ನೂ ಶಾಸಕರ ಮೂಲಕ ಅಧಿಕಾರಿಗಳಿಗೆ ನೀಡಲಾಯಿತು.
ಶಾಸಕರು ಮಾತನಾಡಿ, ಕೇಂದ್ರದ ಸ್ವಚ್ಛ ಭಾರತ್ ಅಭಿಯಾನ ಅಡಿಯಲ್ಲಿ ಹೆಚ್ಚಿನ ಧನಸಹಾಯವನ್ನು ತರಲು ಪ್ರಯತ್ನ ನಡೆಯುತ್ತಿದೆ ಎಂದರು. ಮುಂದೆ ಒಂದು ತಿಂಗಳೊಳಗೆ ಶಂಕುಸ್ಥಾಪನೆ ನಡೆಯಲಿದ್ದು, ಮೂರು ತಿಂಗಳೊಳಗೆ ಈ ಹೊಸ ಘಟಕ ಕಾರ್ಯಾರಂಭ ಮಾಡುವ ಗುರಿಯೊಂದಿಗೆ ಎಲ್ಲ ಸಿದ್ಧತೆಗಳು ಸಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆ ಮುಂದಿನ 20 ವರ್ಷಗಳ ಅಭಿವೃದ್ಧಿಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸುಸಜ್ಜಿತ ಸೌಲಭ್ಯಗಳೊಂದಿಗೆ ರೂಪುರೇಷೆ ಸಿದ್ಧವಾಗಿದೆ. ಸ್ಥಳೀಯ ಜನತೆ ಹಾಗೂ ಸುತ್ತಮುತ್ತಲ ಗ್ರಾಮಗಳ ತ್ಯಾಜ್ಯ ನಿರ್ವಹಣೆಗೆ ಈ ಘಟಕ ಬಹುಮುಖ್ಯವಾಗಲಿದೆ. ಶುದ್ಧತೆ, ಪರಿಸರ ಸಂರಕ್ಷಣೆ ಹಾಗೂ ಗ್ರಾಮೀಣ ಆರೋಗ್ಯಕ್ಕೆ ಇದು ತುಂಬಾ ನೆರವಾಗಲಿದೆ.
ಶಾಸಕರ ಜೊತೆ ಸಂಸದ ಬ್ರಿಜೇಶ್ ಚೌಟ ಮತ್ತು ಶಾಸಕಿ ಭಾಗೀರಥಿ ಮುರುಳ್ಯ ತಮ್ಮ-ತಮ್ಮ ವಿಕಾಸ ನಿಧಿಯಿಂದ ಹಣಕಾಸು ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ. ಅವರ ಈ ಸಕಾರಾತ್ಮಕ ಬೆಂಬಲದಿಂದಾಗಿ ಕಾಮಗಾರಿಗೆ ಹೊಸ ಚೈತನ್ಯ ಸಿಕ್ಕಿದೆ.
ಕಿಶೋರ್ ಕುಮಾರ್ ಅವರು ಮಾತನಾಡಿ, ಪ್ರಧಾನ ತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಅಭಿಯಾನದ ಕನಸು ನಮ್ಮೆಲ್ಲರಿಗೂ ದಿಕ್ಕು ತೋರಿಸುತ್ತಿದೆ. ಗ್ರಾಮೀಣ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ನಾಗರಿಕ ಜವಾಬ್ದಾರಿಯ ಅರಿವು ಹೆಚ್ಚಿಸುವ ನಿಟ್ಟಿನಲ್ಲಿ ಈ ಘಟಕ ಒಂದು ಪ್ರಮುಖ ಹಂತವಾಗಿದೆ. ನಾನು, ನಮ್ಮ ಸಂಸದ ಬ್ರಿಜೇಶ್ ಚೌಟ ಮತ್ತು ಶಾಸಕಿ ನಮ್ಮ ಸಹೋದರಿ ಭಾಗೀರಥಿ ಮುರುಳ್ಯರೊಂದಿಗೆ ಸೇರಿ ಈ ಘಟಕದ ಮರುಸ್ಥಾಪನೆಗೆ ಶ್ರಮಿಸುತ್ತಿದ್ದೇವೆ. ಇದು ಸುಳ್ಯ ಹಾಗೂ ಸುತ್ತಮುತ್ತಲ ಜನತೆಗೆ ಹೊಸ ಆಶಾಕಿರಣ ತರುತ್ತದೆ ಎಂದು ತಿಳಿಸಿದರು.
ನರೇಂದ್ರ ಮೋದಿಯವರ ದೂರದೃಷ್ಟಿಗೆ ಅನುಗುಣವಾಗಿ, ಈ ಘಟಕದ ಮೂಲಕ ನಾವು ಸ್ವಚ್ಛತಾ ಕ್ರಾಂತಿಗೆ ನಾಂದಿಯನ್ನಿಡುತ್ತಿದ್ದೇವೆ. ಅವರ ಕನಸು ನಮ್ಮ ಆದರ್ಶ, ನಮ್ಮ ದಿಕ್ಕು. ಈ ಕಾರ್ಯದಲ್ಲಿ ನನ್ನಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವೆ. ಈ ಘಟಕ ಭವಿಷ್ಯದ ಪೀಳಿಗೆಗೂ ಲಾಭವಾಗುವಂತೆ ರೂಪುಗೊಳ್ಳಬೇಕು ಎಂಬುದು ನನ್ನ ಆಶಯ ಎಂದು ಹೇಳಿದರು.
ಈ ಘಟಕದ ಮರುಸ್ಥಾಪನೆಗೆ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪಂಚಾಯತ್ ಅಧ್ಯಕ್ಷ ಕೇಶವ ಆಡ್ತಳೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್, ವ್ಯವಸಾಯ ಸೇವಾಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಪಂಚಾಯತ್ ಉಪಾಧ್ಯಕ್ಷರಾದ ಭವಾನಿ ತೊಡಿಕಾನ, ಮಾಜಿ ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ತೊಡಿಕಾನ, ಪಂಚಾಯತ್ ಸದಸ್ಯ ಶಿವಾನಂದ್ ಕುಕ್ಕಮೂಲೆ ಮತ್ತು ಪಂಚಾಯತ್ನ ಎಲ್ಲಾ ಸದಸ್ಯರ ಮನವಿಗೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಸ್ಪಂದಿಸಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ.