ರಾಮನಗರ: ದೆಹಲಿಯಲ್ಲಿ ಕೆಲಸ ಇಲ್ಲದಿರುವುದಕ್ಕೆ ಕುಮಾರಣ್ಣ (HD Kumaraswamy) ಮಾವು ಬೆಳೆಗೆ ಬೆಂಬಲ ಬೆಲೆ ಕೊಡಿಸಿದ್ದಾರೆ. ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದ್ದಾರೆ.
ಕುಮಾರಸ್ವಾಮಿಗೆ ದೆಹಲಿಯಲ್ಲಿ ಕೆಲಸ ಇಲ್ಲ, ಅದಕ್ಕೆ ಬೆಂಗಳೂರಿಗೆ ಬಂದು ಮಾತನಾಡುತ್ತಾರೆ ಎಂಬ ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಹೇಳಿಕೆಗೆ ರಾಮನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಮಾವು ಬೆಳೆಗಾರರ ಪರಿಸ್ಥಿತಿ ಏನಾಗಿದೆ? ರಾಜ್ಯ ಸರ್ಕಾರ ಏನ್ಮಾಡ್ತಿದೆ? ಕುಮಾರಣ್ಣ ಕೇಂದ್ರ ಸಚಿವರಾಗಿದ್ದಕ್ಕೆ ಮಾವು ಬೆಲೆಗೆ ಬೆಂಬಲ ಬೆಲೆ ಕೊಡಿಸಿದ್ದು. ಆದರೆ ಡಿಕೆ ಸುರೇಶ್, ಡಿಕೆ ಶಿವಕುಮಾರ್ ಬೆಂಬಲ ಬೆಲೆ ಕೊಡಿಸಿದ್ರಾ? ಇವರಿಗೆ ನಾವು ಉತ್ತರ ಕೊಡಬೇಕಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಿಮಾಚಲ ಪ್ರದೇಶ | ಕುಲುವಿನಲ್ಲಿ ಮೇಘಸ್ಫೋಟದಿಂದ ಭಾರೀ ಪ್ರವಾಹ – ಉಕ್ಕಿ ಹರಿದ ಪಾರ್ವತಿ ನದಿ
ರಾಮನಗರದಲ್ಲಿ ಜೆಡಿಎಸ್ನಿಂದ ಯಾವುದೇ ಅಭಿವೃದ್ಧಿ ಆಗಿಲ್ಲ ಎಂಬ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ಕುರಿತು ಮಾತನಾಡಿ, ಕಾಂಗ್ರೆಸ್ ಕೇವಲ ಮಾತಿನಲ್ಲೇ ಕಾಲಹರಣ ಮಾಡುತ್ತಿದೆ. ಜಿಲ್ಲೆಯ ಹೆಸರು ಬದಲಾವಣೆ ಮಾಡಿ ಏನು ಮಾಡಿದ್ದಾರೆ. ನವ ರಾಮನಗರ ಅಂತೀರಿ, ಏನು ಮಾಡಿದ್ದೀರಿ. ನಿಮ್ಮ ಸಾಧನೆಗಳನ್ನ ಮಾತಿನಿಂದಲ್ಲ ಕೆಲಸದಿಂದ ತೋರಿಸಿ. ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಒಂದು ಚರಂಡಿ, ರಸ್ತೆ, ಶಾಲಾ ಕಟ್ಟಡ ರೆಡಿ ಮಾಡಲು ಸರ್ಕಾರದ ಬಳಿ ಹಣ ಇಲ್ಲ. ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯ ಆಗಿದೆ. ಅಭಿವೃದ್ಧಿಗೆ ಒಂದು ರೂ. ಹಣ ನೀಡುತ್ತಿಲ್ಲ. ಪರ್ಸೆಂಟೇಜ್ ಕೊಟ್ಟರೆ ಮಾತ್ರ ವಸತಿ ಕೊಡುತ್ತಿದ್ದಾರಂತೆ. ಇತಿಹಾಸದಲ್ಲಿ ಇಂತಹ ಭ್ರಷ್ಟ ಸರ್ಕಾರವನ್ನು ರಾಜ್ಯ ನೋಡಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಎಲ್ಲಾ ಇಲಾಖೆಗಳು ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡ ಬಳಸಿ: ಸರ್ಕಾರ ಆದೇಶ