ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ 766E ನಲ್ಲಿನ ಬೆಣ್ಣೆಹೊಳೆ ಭಾಗದಲ್ಲಿ ಮಳೆಯಿಂದ ಕೊಚ್ಚಿಹೋಗಿದ್ದ ತಾತ್ಕಾಲಿಕ ಸೇತುವೆಯಿಂದಾಗಿ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಇದೀಗ ಹೆದ್ದಾರಿಯಲ್ಲಿ ಸ್ಥಗಿತಗೊಂಡ ಸಂಚಾರ ಪುನರ್ ಆರಂಭವಾಗಿದ್ದು, ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಕಳೆದ ವಾರದಿಂದ ಮಳೆಯ ಅಬ್ಬರಕ್ಕೆ, ಬೆಣ್ಣೆ ಹೊಳೆ ತುಂಬಿ ಹರಿದಿದ್ದರಿಂದ ಕುಮಟಾ-ಶಿರಸಿ ಹೆದ್ದಾರಿ ಸಂಚಾರಕ್ಕಾಗಿ ನಿರ್ಮಿಸಲಾಗಿದ್ದ ಬೆಣ್ಣೆ ಹೊಳೆಯ ಪರ್ಯಾಯ ರಸ್ತೆ ಕೊಚ್ಚಿ ಹೋಗಿತ್ತು. ಇದರಿಂದ ಕುಮಟಾ- ಶಿರಸಿ ಹೆದ್ದಾರಿ ಸಂಚಾರ ಸ್ಥಗಿತಗೊಂಡು ಜನರಿಗೆ ತೊಂದರೆಯಾಗಿತ್ತು. ಈಗಾಗಲೇ ಈ ಹೆದ್ದಾರಿಯಲ್ಲಿ ಅಗಲೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಭಾರೀ ವಾಹನಗಳ ಸಂಚಾರ ನಿಷೇಧಿಸಿ, ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು.
ಆದರೆ, ಕಳೆದ ಒಂದು ವಾರದಿಂದ ಸುರಿದ ಮಳೆಯ ಆರ್ಭಟಕ್ಕೆ ಹೆದ್ದಾರಿ ಸಂಪೂರ್ಣ ಬಂದ್ ಆಗಿತ್ತು. ಈಗ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಬೆಣ್ಣೆ ಹೊಳೆಯ ಪರ್ಯಾಯ ರಸ್ತೆಯ ಎರಡು ಬದಿಯಲ್ಲಿ ಮಣ್ಣು ತುಂಬಿ ಲಘು ವಾಹನಗಳು ಮಾತ್ರ ಸಂಚರಿಸಲು ವ್ಯವಸ್ಥೆ ಮಾಡಿಕೊಡಲಾಗಿದೆ. ಇದರಿಂದ ಒಂದು ವಾರದಿಂದ ಸಂಚಾರ ಸ್ಥಗಿತಗೊಂಡು ತೊಂದರೆ ಅನುಭವಿಸುತ್ತಿದ್ದ ಜನರಿಗೆ ಅನುಕೂಲವಾಗಿದೆ.
ಕೆಲವೇ ದಿನದಲ್ಲಿ ಅಪೂರ್ಣಗೊಂಡಿರುವ ಸೇತುವೆ ಸಹ ಪೂರ್ಣಗೊಳ್ಳಲಿದ್ದು, ಈ ಸಂದರ್ಭದಲ್ಲಿ ದೇವಿಮನೆ ಘಟ್ಟ ಭಾಗದಲ್ಲಿ ಎಂದಿನಂತೆ ಬಸ್ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಸದ್ಯ ಈ ಭಾಗದಲ್ಲಿ ಬಸ್ ಸಂಚಾರವೂ ಬಂದ್ ಆಗಿದ್ದು, ಶಾಲೆ ಸಹ ಪ್ರಾರಂಭವಾಗಿದ್ದರಿಂದ ಕುಮಟಾ ಭಾಗಕ್ಕೆ ಹೋಗುತಿದ್ದ ವಿದ್ಯಾರ್ಥಿಗಳಿಗೆ ಇದೀಗ ಅನುಕೂಲ ಆಗಲಿದೆ.