– ವಿದೇಶದಿಂದಲೂ ಭಾರೀ ಪ್ರಮಾಣದಲ್ಲಿ ಖಾತೆಗೆ ಹಣ
– ಬ್ಯಾಂಕ್ ಖಾತೆ ಪರಿಶೀಲನೆಗೆ ಮುಂದಾದ ಪೊಲೀಸರು
ಮಂಗಳೂರು: ಹಿಂದೂ (Hindu) ಕಾರ್ಯಕರ್ತ ಸುಹಾಸ್ ಶೆಟ್ಟಿಯ (Suhas Shetty) ಹತ್ಯೆ ಪ್ರತೀಕಾರಕ್ಕೆ ನಡೆದರೂ ಈ ಹತ್ಯೆಯ ಹಿಂದೆ ಲಕ್ಷಾಂತರ ರೂ. ಹಣ ಹರಿದಾಡಿದೆ. ಕೇವಲ ಐದು ಲಕ್ಷಕ್ಕಾಗಿ ಮಾತ್ರ ಈ ಹತ್ಯೆ ನಡೆದಿಲ್ಲ ಎನ್ನುವ ಸ್ಪೋಟಕ ಮಾಹಿತಿ ತನಿಖೆ ವೇಳೆ ಪ್ರಕಟವಾಗಿದೆ.
ಹೌದು. ಫಾಝಿಲ್ ಹತ್ಯೆಯನ್ನು (Fazil Murder) ಅರಗಿಸಿಕೊಳ್ಳಲಾಗದ ಪ್ರಭಾವಿ ಮುಸ್ಲಿಮರು (Muslims) ಫಾಝಿಲ್ ಸಹೋದರನ ಕೈ ಬಲಪಡಿಸಿದ್ದಾರೆ. ಲಕ್ಷಾಂತರ ರೂಪಾಯಿ ಫಂಡಿಂಗ್ ಆಗಿರುವ ಬಗ್ಗೆ ಮಾಹಿತಿ ಸಿಕ್ಕ ಪೊಲೀಸರು ಇದೀಗ ಹಲವು ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫಾಝಿಲ್ ತಮ್ಮ ಆದಿಲ್ ಮೆಹರೂಫ್ ನೀಡಿದ ಸುಪಾರಿಯಂತೆ ಈ ಹತ್ಯೆಯನ್ನು ಹಂತಕರು ನಡೆಸಿದ್ದಾರೆ. ಆದಿಲ್ 5 ಲಕ್ಷ ರೂ. ನೀಡುವುದಾಗಿ ಸುಪಾರಿ ನೀಡಿ ಅದರಲ್ಲಿ 3 ಲಕ್ಷ ರೂ. ಮುಂಗಡ ಪಾವತಿಸಿದ್ದ. ಇನ್ನುಳಿದ 2 ಲಕ್ಷ ರೂ. ಕೆಲಸ ಮುಗಿಸಿದ ಮೇಲೆ ನೀಡುವುದಾಗಿ ಹೇಳಿದ್ದ ಎಂದು ಬಂಧನದ ಬಳಿಕ ಆರೋಪಿಗಳು ಬಾಯ್ಬಿಟ್ಟಿದ್ದರು. ಇದನ್ನೂ ಓದಿ: ಕೋಮುದ್ವೇಷ ಭಾಷಣ ಆರೋಪ – ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್ಐಆರ್
ಪ್ರತೀಕಾರಕ್ಕೆ ಪಣ
ಫಾಝಿಲ್ ಹತ್ಯೆಯನ್ನು ಅರಗಿಸಿಕೊಳ್ಳಲಾಗದ ಪ್ರಭಾವಿ ಮುಸ್ಲಿಮರು ಪ್ರತೀಕಾರಕ್ಕಾಗಿ ಪಣ ತೊಟ್ಟಿದ್ದರು. ಪ್ರತೀಕಾರ ತೀರಿಸುವ ಯಾರಿಗಾದರೂ ಎಷ್ಟೇ ಹಣ ನೀಡಬೇಕಾದರೂ ನೀಡಲು ಸಿದ್ದರಿದ್ದರು. ಹತ್ಯೆ ನಡೆಸುವವರಿಗೆ ಫಂಡಿಂಗ್ ಮಾಡಲು ಸಾಕಷ್ಟು ಜನ ಮುಂದೆ ಬಂದಿದ್ದರು. ಸುಹಾಸ್ ಹತ್ಯೆಯ ಪ್ಲಾನ್ ನಡೆಸುವ ವೇಳೆಯೇ 50 ಲಕ್ಷ ರೂ. ಹೆಚ್ಚು ಹಣ ಸಂಗ್ರಹವಾಗಿದೆ ಎಂಬ ಸ್ಫೋಟಕ ಮಾಹಿತಿ ತನಿಖೆ ವೇಳೆ ಬಹಿರಂಗಗೊಂಡಿದೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಬೆನ್ನಲ್ಲೇ ಮಂಗಳೂರಲ್ಲಿ ಮತ್ತೊಬ್ಬ ಹಿಂದೂ ಮುಖಂಡನ ಹತ್ಯೆಗೆ ಸ್ಕೆಚ್
ಎಲ್ಲಾ ಆರೋಪಿಗಳನ್ನು 14 ದಿನ ಪೊಲೀಸ್ ಕಸ್ಟಡಿಗೆ ಪಡೆದಿರುವ ತನಿಖಾಧಿಕಾರಿಗೆ ಲಕ್ಷ ಲಕ್ಷ ಫಂಡಿಂಗ್ ಆಗಿರುವ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದೆ. ಹೀಗಾಗಿ ವಿವಿಧ ಬ್ಯಾಂಕ್ ಖಾತೆಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು ವಿದೇಶದಿಂದಲೂ ಭಾರೀ ಪ್ರಮಾಣದಲ್ಲಿ ಫಂಡಿಂಗ್ ಆಗಿರುವ ವಿಚಾರ ಬೆಳಕಿಗೆ ಬಂದಿದೆ.
ಸುಹಾಸ್ ಶೆಟ್ಟಿ ಹತ್ಯೆಯ ಆರೋಪಿಗಳ ಬಂಧನದ ಬಳಿಕ ಕೇವಲ ಲಕ್ಷ ಸುಪಾರಿ ನೀಡಲಾಗಿತ್ತು ಎನ್ನುವುದು ಗೊತ್ತಾದಾಗಲೇ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಬೊಲೆರೋ ಪಿಕಪ್ ಮತ್ತು ಸ್ವಿಫ್ಟ್ ಕಾರಿನ ಮೌಲ್ಯ ಎರಡು ಸೇರಿದರೆ 10 ಲಕ್ಷರೂ. ಅಧಿಕ ಆಗುತ್ತದೆ. ಕೇವಲ 5 ಲಕ್ಷ ರೂ.ಗೆ ಈ ಹತ್ಯೆ ನಡೆದಿರುವ ಸಾಧ್ಯತೆ ಇಲ್ಲ ಎಂದು ಜನ ಅನುಮಾನ ವ್ಯಕ್ತಪಡಿಸಿದ್ದರು. ಈ ಅನುಮಾನ ನಿಜವಾಗಿದ್ದು ತನಿಖೆಯ ವೇಳೆ ಲಕ್ಷ ಲಕ್ಷ ಫಂಡಿಂಗ್ ಆಗಿರುವುದು ಬೆಳಕಿಗೆ ಬಂದಿದೆ.