– ಬಾಡಿ ಕ್ಯಾಮ್ ಧರಿಸಿ ಕೃತ್ಯ ರೆಕಾರ್ಡ್
– ಓಡಿ ಹೋಗುತ್ತಿದ್ದವರ ಮೇಲೆ ಗುಂಡೇಟು
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಪ್ರಾಥಮಿಕ ತನಿಖೆಯಲ್ಲಿ ಉಗ್ರರು ಬಹಳ ಪ್ಲ್ಯಾನ್ ಮಾಡಿ ಈ ಕೃತ್ಯವನ್ನು ಎಸಗಿರುವ ವಿಚಾರ ಬೆಳಕಿಗೆ ಬಂದಿದೆ.
ಪಾಕಿಸ್ತಾನಿ ಮತ್ತು ಸ್ಥಳೀಯ ಕಾಶ್ಮೀರಿ ಭಯೋತ್ಪಾದಕರು ಸೇರಿ ಈ ಕೃತ್ಯ ಎಸಗಿದ್ದಾರೆ. 6-8 ಮಂದಿ ಉಗ್ರರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ದಾಳಿ ನಡೆಸುವ ಮೊದಲು ಸಂಪೂರ್ಣ ಈ ಜಾಗದ ಬಗ್ಗೆ ತಿಳಿದಿದ್ದರು. ಭಾರೀ ಪ್ರಮಾಣದಲ್ಲಿ ಸಾವು ನೋವು ಸಂಘಟಿಸಲು ಉಗ್ರರು ಪ್ಲ್ಯಾನ್ ಮಾಡಿದ್ದರು.
ಬೈಸರನ್ ಟಾರ್ಗೆಟ್ ಯಾಕೆ?
ಪಹಲ್ಗಾಮ್ನಿಂದ ಸರಿಸುಮಾರು 6.5 ಕಿಲೋಮೀಟರ್ ದೂರದಲ್ಲಿ ಬೈಸರನ್ ಇದೆ. ಈ ಜಾಗಕ್ಕೆ ವಾಹನ ಸಂಚಾರ ಇಲ್ಲ. ಕಾಲ್ನಡಿಗೆ ಅಥವಾ ಕುದುರೆ ಸವಾರಿಯ ಮೂಲಕ ಮಾತ್ರ ಈ ಜಾಗಕ್ಕೆ ಹೋಗಲು ಸಾಧ್ಯವಾಗುತ್ತದೆ.
ದಟ್ಟವಾದ ಕಾಡುಗಳಿಂದ ಆವೃತವಾದ ಸುಂದರವಾದ ಹುಲ್ಲುಗಾವಲು ಬೈಸರನ್ನಲ್ಲಿ ಸಾಧಾರಣವಾಗಿ 1,000 ರಿಂದ 1,500 ಪ್ರವಾಸಿಗರು ಇರುತ್ತಾರೆ. ಆದರೆ ಮಂಗಳವಾರ ಮಧ್ಯಾಹ್ನ ಈ ಸಂಖ್ಯೆ ಸ್ವಲ್ಪ ಕಡಿಮೆ ಇದ್ದ ಕಾರಣ ಸಾವಿನ ಸಂಖ್ಯೆ ಕಡಿಮೆಯಾಗಿದೆ.
ವಾಹನ ಸಂಚರಿಸಲು ರಸ್ತೆ ಇಲ್ಲದ ಕಾರಣ ಕೂಡಲೇ ಸ್ಥಳಕ್ಕೆ ರಕ್ಷಣಾ ಪಡೆಗಳು ಆಗಮಿಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೇ ಗಂಭೀರವಾಗಿ ಗಾಯಗೊಂಡವರನ್ನು ಈ ಸ್ಥಳದಿಂದ ಅಂಬುಲೆನ್ಸ್ನಲ್ಲಿ ಸಾಗಿಸಲು ಸಾಧ್ಯವಿಲ್ಲದ ಕಾರಣ ಸಾವು ನೋವು ಹೆಚ್ಚಾಗಬಹುದು ಎಂಬುದನ್ನು ಮೊದಲೇ ತಿಳಿದುಕೊಂಡಿದ್ದ ಉಗ್ರರು ನಿಖರವಾಗಿ ಯೋಜಿಸಿ ಕೃತ್ಯ ನಡೆಸಿದ್ದಾರೆ.
ದಾಳಿಗೆ ಮುನ್ನ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಅಡಗುತಾಣಗಳನ್ನು ನಿರ್ಮಿಸಿದ್ದರು. ಭಯೋತ್ಪಾದಕರು ಬಾಡಿ ಕ್ಯಾಮೆರಾಗಳನ್ನು ಧರಿಸಿದ್ದರು. ವಿಶೇಷವಾಗಿ ಹೆಲ್ಮೆಟ್ ಅಳವಡಿಸಿದ ಕ್ಯಾಮೆರಾಗಳನ್ನು ಧರಿಸಿ ಕೃತ್ಯವನ್ನು ಸಂಪೂರ್ಣವಾಗಿ ಚಿತ್ರೀಕರಿಸಿದ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ.
ಮೂಲಗಳ ಪ್ರಕಾರ ಮೂವರು ಭಯೋತ್ಪಾದಕರು ಪ್ರವಾಸಿಗರನ್ನು ಒಟ್ಟುಗೂಡಿಸಿ ಪುರುಷ ಮತ್ತು ಮಹಿಳಾ ಗುಂಪುಗಳಾಗಿ ವಿಂಗಡಿಸಿದ್ದಾರೆ. ನಂತರ ಅವರ ಧರ್ಮ, ಹೆಸರನ್ನು ಕೇಳಿದ್ದಾರೆ. ಈ ವೇಳೆ ಹಿಂದೂ ಹೆಸರು ಹೇಳಿದವರ ಮೇಲೆ ಶೂಟ್ ಮಾಡಿ ಹತ್ಯೆ ಮಾಡಿದ್ದಾರೆ.
ಸೇನಾ ಸಮವಸ್ತ್ರದಲ್ಲಿ ಬಂದ ಉಗ್ರರನ್ನು ನೋಡಿ ಪ್ರವಾಸಿಗರು ಇವರು ಸೈನಿಕರು ಎಂದೇ ಭಾವಿಸಿದ್ದರು. ಸುಮಾರು 20 ನಿಮಿಷ ಸ್ಥಳದಲ್ಲಿ ಇದ್ದ ಉಗ್ರರು ಸಾಲು ನಿಲ್ಲಿಸಿ ಹತ್ಯೆ ಮಾಡಿದ್ದರು. ಈ ವೇಳೆ ಕೆಲವರು ಓಡಿ ಹೋಗಲು ಯತ್ನಿಸಿದಾಗ ಅವರ ಮೇಲೂ ಶೂಟ್ ಮಾಡಿದ್ದಾರೆ.
ದಾಳಿಯಿಂದ ಪಾರಾಗಲು ಪ್ರವಾಸಿಗರು ಡೇರೆಗಳಲ್ಲಿ ಅಡಗಿ ಕುಳಿತಿದ್ದರು. ಈ ಡೇರೆಗೆ ಬಂದ ಉಗ್ರರು ಪುರಷರನ್ನು ಕರೆದು ನಿನ್ನ ಧರ್ಮ ಯಾವುದು? ಕಲಿಮಾ ಹೇಳು ಎಂದು ಹೇಳಿದ್ದರು. ಕಲಿಮಾ ಹೇಳದ್ದಕ್ಕೆ ಅಲ್ಲೇ ಪ್ರವಾಸಿಯ ತಲೆಗೆ ಗುಂಡಿಕ್ಕಿದ್ದಾರೆ.