– ಭಾಷಾ ಕಾರಣಕ್ಕೆ ಹಲ್ಲೆ ಸುಳ್ಳೆಂದ ಯುವಕ
– ವಿಂಗ್ ಕಮಾಂಡರ್ ವಿರುದ್ಧವೂ ಎಫ್ಐಆರ್
ಬೆಂಗಳೂರು: ವಿಂಗ್ ಕಮಾಂಡರ್ (Wing commander) ಶಿಲಾದಿತ್ಯ ಬೋಸ್ನಿಂದ ಹಲ್ಲೆಗೊಳಗಾದ ಯುವಕ ವಿಕಾಸ್ ಕುಮಾರ್ ಸ್ಟೇಷನ್ ಬೇಲ್ ಮೇಲೆ ರಿಲೀಸ್ ಆಗಿದ್ದಾರೆ. ಇದೇ ಏ.24 ಎಂದು ಮತ್ತೆ ವಿಚಾರಣೆಗೆ ಹಾಜರಾಗಲು ನೊಟೀಸ್ ಕೊಟ್ಟು ರಿಲೀಸ್ ಮಾಡಿದ್ದಾರೆ.
ಬಳಿಕ ಮಾತಾಡಿರುವ ವಿಕಾಸ್, ವಿಂಗ್ ಕಮಾಂಡರ್ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಭಾಷಾ ಹಲ್ಲೆ ಅನ್ನೋದು ಸುಳ್ಳು. ಪ್ರಕರಣವನ್ನು ನಾನು ಇಲ್ಲಿಗೆ ಬಿಡಲ್ಲ. ನನಗೆ ನ್ಯಾಯ ಬೇಕು. ಸಿಎಂ, ಗೃಹಸಚಿವರು, ಕಮಿಷನರ್, ನನ್ನ ಪರವಾಗಿನಿಂದ ನಿಂತ ಕನ್ನಡಿಗರಿಗೆ ಧನ್ಯವಾದ ಅಂದಿದ್ದಾರೆ. ಜೊತೆಗೆ, ವಿಕಾಸ್ ಕುಮಾರ್ ಪ್ರತಿದೂರು ದಾಖಲಿಸಿದ್ದು, ಬೈಯಪ್ಪನಹಳ್ಳಿ ಪೊಲೀಸರು (Baiyyappanahalli Police) ಕಾರ್ನ ನಂಬರ್ ಆಧಾರದಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಕುತ್ತಿಗೆ ಹಿಡಿದು ಕೊಲೆಗೆ ಯತ್ನಿಸಿದ್ದ – ವಿಂಗ್ ಕಮಾಂಡರ್ ವಿರುದ್ಧ ಕೊನೆಗೂ ಎಫ್ಐಆರ್
ಭಾರತೀಯ ನ್ಯಾಯ ಸಂಹಿತೆ ಅಡಿ ಸೆಕ್ಷನ್ 109 (ಕೊಲೆ ಯತ್ನ), 115 (2) (ಮಾರಣಾಂತಿಕ ಹಲ್ಲೆ), 304 (ಬಲವಂತವಾಗಿ ವಸ್ತು ಕಸಿದುಕೊಳ್ಳುವುದು), 324 (ಅರಿವಿಗೆ ಇದ್ದರೂ ಉದ್ದೇಶ ಪೂರಕವಾಗಿ ವಸ್ತುಗಳನ್ನು ಹಾಳು ಮಾಡೋದು) ಹಾಗೂ 352 (ಶಾಂತಿಭಂಗ) ಸೆಕ್ಷನ್ಗಳ ಅಡಿ ಕೇಸ್ ದಾಖಲಿಸಿದ್ದಾರೆ. ಎಫ್ಐಆರ್ ದಾಖಲಾಗ್ತಿದ್ದಂತೆಯೇ ಬೈಯಪ್ಪನಹಳ್ಳಿ ಠಾಣೆಗೆ ಏರ್ಪೋರ್ಸ್ನ ನಾಲ್ವರು ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಹಿಂದಿಯಲ್ಲಿ ಬೈದಿದ್ದು ಅರ್ಥ ಆಗಿಲ್ಲ ಎಂದಿದ್ದಕ್ಕೆ ಗಲಾಟೆ: ಯುವಕನ ತಾಯಿ ಅಳಲು
ಘಟನೆ ಬಗ್ಗೆ ಏರ್ಫೋರ್ಸ್ ಪ್ರತಿಕ್ರಿಯಿಸಿದ್ದು, ಐಎಎಫ್ ಅಧಿಕಾರಿ ಭಾಗಿಯಾಗಿರುವುದು ದುರದೃಷ್ಟಕರ, ತನಿಖೆ ಮಾಡಲು ಸ್ಥಳೀಯ ಅಧಿಕಾರಿಗಳಿಗೆ ಸಹಾಯ ಮಾಡ್ತೇವೆ ಅಂದಿದೆ. ಬೈಯಪ್ಪನಹಳ್ಳಿ ಪೊಲೀಸರು ಕೂಡ ಸ್ಥಳ ಮಹಜರು ನಡೆಸಿ, ಇಬ್ಬರು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದರು. ಸ್ಥಳದಲ್ಲಿದ್ದ ಕಲ್ಲನ್ನು ವಶಕ್ಕೆ ಪಡೆದರು. ಇದನ್ನೂ ಓದಿ: ನೆಲಕ್ಕೆ ಬಿದ್ರೂ ಬಿಡದೆ ಡೆಲಿವರಿ ಬಾಯ್ ಮೇಲೆ ಹಲ್ಲೆ ಮಾಡಿ ವಿಂಗ್ ಕಮಾಂಡರ್ ದರ್ಪ
ವಿಕಾಸ್ ಕೊಟ್ಟ ದೂರಿನಲ್ಲೇನಿದೆ..?
ನಿನ್ನೆ (ಸೋಮವಾರ) ಬೆಳಗ್ಗೆ ಸ್ನೇಹಿತನ ಬೈಕ್ ವಾಪಸ್ ನೀಡಲು ಹೋಗ್ತಿದ್ದೆ. ಟಿನ್ಫ್ಯಾಕ್ಟರಿ ಸಿಗ್ನಲ್ ಬಳಿ ಬೈಕ್ಗೆ ಕಾರ್ ಟಚ್ ಆಯ್ತು. ಅದಕ್ಕೆ ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ಕಾರನ್ನು ಅಡ್ಡಹಾಕಿ ಪ್ರಶ್ನೆ ಮಾಡಿದೆ. ಕಾರಿಂದ ಇಳಿದು ಬಂದ ವ್ಯಕ್ತಿ ಕಾಲಿನಿಂದ ಒದ್ದು ಬೈಕ್ ಕೆಳಗೆ ಬೀಳಿಸಿದ. ಅದನ್ನು ಕೇಳಿದಾಗ ನಿರಂತರವಾಗಿ ಹಲ್ಲೆ ಮಾಡಿದ. ಸ್ವಯಂ ರಕ್ಷಣೆಗಾಗಿ ನಾನು ಒಂದು ಏಟು ಹೊಡೆದೆ. ಸ್ನೇಹಿತನಿಗೆ ಕರೆ ಮಾಡಲು ಮೊಬೈಲ್ ತೆಗೆದೆ, ಆದ್ರೆ ಅಲ್ಲಿದ್ದ ಅಪರಿಚಿತ ವ್ಯಕ್ತಿ ನನ್ನ ಕೈ ಕಚ್ಚಿ, ಫೋನ್ ಕಸಿದುಕೊಂಡು ಎಸೆದರು, ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲ್ಲುವ ಬೆದರಿಕೆ ಹಾಕಿದರು. ನನ್ನ ಕುತ್ತಿಗೆಗೆ ಹಿಂದಿನಿಂದ ಕೈ ಹಾಕಿ ಹೊಡೆದರು. ನನ್ನ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ರು, ನನ್ನ ಬೈಕ್ ಕೀ ಕಸಿದುಕೊಂಡು ದೂಡಿದರು, ನಾನು ನೆಲಕ್ಕೆ ಬಿದ್ದೆ. ಮತ್ತೆ ನನ್ನ ಮುಖದ ಮೇಲೆ ಹಲ್ಲೆ ಮಾಡಿದರು. ಆ ಅಪರಿಚಿತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಕಾಸ್ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.