ಬೆಂಗಳೂರು: ಮುಡಾ ಕೇಸ್ನಲ್ಲಿ (MUDA Scam) ಅಕ್ರಮ ಆಗಿರುವುದು ನಿಜ ಎಂದು ಲೋಕಾಯುಕ್ತಕ್ಕೆ ಇಡಿ ಪತ್ರ ಬರೆದಿರುವುದು ದುರುದ್ದೇಶದಿಂದ ಕೂಡಿದೆ ಎಂದು ಸಚಿವ ಡಾ.ಎಂ.ಸಿ ಸುಧಾಕರ್ (MC Sudhakar) ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಇಡಿ ಯಾರು? ದೇಶದಲ್ಲಿ ಎಲ್ಲಾ ಕಡೆ ಹೀಗೆ ಇಡಿ ತನಿಖೆ ಮಾಡ್ತಿದೆಯಾ? ತನಿಖೆ ಪ್ರಾರಂಭ ಮಾಡಿ ಯರ್ಯಾರು ಬಿಜೆಪಿಗೆ ಸೇರುತ್ತಾರೊ? ಅವರ ಮೇಲಿನ ತನಿಖೆ ಪ್ರಗತಿ ಯಾವ ರೀತಿ ಆಗುತ್ತಿದೆ? ಇಡಿ ವರ್ತನೆ ದುರುದ್ದೇಶದಿಂದ ಕೂಡಿದೆ. ಇಡಿ ಅವರು ಮುಡಾ ಕೇಸ್ನಲ್ಲಿ ಬಂದಿರುವುದೇ ದುರುದ್ದೇಶ ಎಂದು ಕಿರಿಕಾರಿದ್ದಾರೆ.ಇದನ್ನೂ ಓದಿ: ಸಿಎಂ ಹೇಳಿದ್ದೇ ಫೈನಲ್, ಯಾವುದೇ ತಕರಾರು ಇಲ್ಲ: ಡಿಕೆಶಿ
ಬಿಜೆಪಿಯವರಿಗೆ (BJP) ಮುಡಾದಲ್ಲಿ ಹಿಂದೆ ಏನಾಗಿತ್ತು ಎಂದು ಗೊತ್ತಿರಲಿಲ್ಲವಾ? ಬಿಜೆಪಿ, ಜೆಡಿಎಸ್ ಶಾಸಕರು ಇದರಲ್ಲಿ ಭಾಗಿಯಾಗಿರಲಿಲ್ವಾ? ಮುಡಾ ಕೇಸ್ ಇಂದಿನದಾ? ಸಿದ್ದರಾಮಯ್ಯರ ಪ್ರಕರಣಕ್ಕೆ ಜೋಡಣೆ ಮಾಡಲು ಇಡಿ ಬಂದಿದೆ. ಇಡಿ ಅವರಿಗೆ ಲೋಕಾಯುಕ್ತದವರು ವರದಿ ಕೊಡಿ ಎಂದು ಕೇಳಿದ್ದರಾ? ಲೋಕಾಯುಕ್ತ ತನಿಖೆ ಮಾಡಿ ಎಂದು ಕೋರ್ಟ್ ಹೇಳಿದೆ. ಲೋಕಾಯುಕ್ತವೇ ಒಂದು ತನಿಖಾ ಸಂಸ್ಥೆ. ಲೋಕಾಯುಕ್ತದವರು ಅವರ ತನಿಖೆ ನಿಷ್ಪಕ್ಷಪಾತವಾಗಿ ಮಾಡಿ, ವರದಿ ಕೊಡಬೇಕು. ನಮ್ಮ ಸರ್ಕಾರದ ಮೇಲೆ ಪ್ರತ್ಯೇಕವಾಗಿ ಇಡಿಯವರು ತನಿಖೆ ಮಾಡಿ ಗೂಬೆ ಕೂರಿಸಲು ಕೇಂದ್ರ ಸರ್ಕಾರ, ಬಿಜೆಪಿ-ಜೆಡಿಎಸ್ ಅವರೆಲ್ಲ ಸೇರಿ ಇದನ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಡಿ ಅವರು ಪ್ರತ್ಯೇಕವಾಗಿ ತನಿಖೆ ಮಾಡಲಿ ನಾವೇನು ಬೇಡ ಎನ್ನುವುದಿಲ್ಲ. ಇಡಿ ಅವರು ನ್ಯಾಯಾಲಯದ ಮುಂದೆ ಸಾಕ್ಷಿ ಕೊಡಲಿ. 3 ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಹಿನ್ನೆಲೆ ವಿಪಕ್ಷದವರು ಹತಾಶೆಯಾಗಿದ್ದಾರೆ. ಜನರ ಗಮನ ಬೇರೆಡೆಗೆ ಸೆಳೆಯಲು ಇಡಿ ಅವರು ಪತ್ರ ಬರೆದಿದ್ದಾರೆ. ಇಡಿ ಯಾಕೆ ಲೋಕಾಯುಕ್ತಗೆ ಪತ್ರ ಬರೆಯಬೇಕು. ಲೋಕಾಯುಕ್ತದವರು ಅವರ ಕೆಲಸ ಅವರು ಮಾಡುತ್ತಾರೆ. ಇಡಿ ಅವರು ನಿಮ್ಮ ಕೆಲಸ ನೀವು ಮಾಡಿ ಎಂದಿದ್ದಾರೆ.
ಇಡಿ ಅವರು ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಅವರನ್ನು ಬಿಟ್ಟು ಬಿಡಿ. ದೇವೇಗೌಡ ಕುಟುಂಬದವರು 48 ಸೈಟ್ ತೆಗೆದುಕೊಂಡಿರುವುದನ್ನ ಬಿಟ್ಟು ಬಿಡಿ. ನಿಮಗೆ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಂಡು ಅದರ ಬಗ್ಗೆ ಮಾತ್ರ ನೀವು ಮಾತಾಡಿ. ದೇಶದ ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇದೆ. ರಾಜಕೀಯ ದುರುದ್ದೇಶದಿಂದ ಇಡಿ ಹೀಗೆ ಮಾಡುತ್ತಿದೆ. ಇದನ್ನು ನಾವು ಒಪ್ಪುವುದಿಲ್ಲ. ನಮ್ಮ ಲೀಗಲ್ ಟೀಂ ಇದನ್ನು ನೋಡುತ್ತದೆ. ಜನರ ಗಮನ ಬೇರೆಡೆಗೆ ಸೆಳೆಯಲು ಹೀಗೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಅವರು ವಕ್ಫ್ ವಿಚಾರ ತಂದರು ಅದರಲ್ಲಿ ಯಶಸ್ವಿಯಾಗಲಿಲ್ಲ. ಅವರಲ್ಲಿಯೇ ಕಿತ್ತಾಟ ಶುರುವಾಗಿದೆ. ಅವರಲ್ಲಿಯೇ ಮನೆಯೊಂದು ಮೂರು ಬಾಗಿಲು ಆಗಿದೆ. ಅವರ ಗಾಯಕ್ಕೆ ಔಷಧಿ ಹಾಕಿಕೊಳ್ಳಲು ಆಗುತ್ತಿಲ್ಲ. ಬಿಜೆಪಿ ಒಡಕಿನ ಚರ್ಚೆ ಆಗುವುದನ್ನು ದಾರಿ ತಪ್ಪಿಸಲು ಇಡಿ ಹೀಗೆ ಮಾಡಿದೆ. ಲೋಕಾಯುಕ್ತ ಮೇಲೆ ಇಡಿ ಯಾಕೆ ಪ್ರಭಾವ ಬೀರುತ್ತದೆ? ಲೋಕಾಯುಕ್ತ ಸ್ವತಂತ್ರ ಸಂಸ್ಥೆ ನೀವು ಯಾಕೆ ಪ್ರಭಾವ ಬೀರುತ್ತೀರಾ? ಇಡಿ ಅವರು ನಿಮ್ಮ ಕೆಲಸ ನೀವು ಮಾಡಿ. ಲೋಕಾಯುಕ್ತ ವರದಿ ಕೇಳಿಲ್ಲ ನೀವು ಯಾಕೆ ವರದಿ ಕೊಟ್ಟಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಪವರ್ ಶೇರಿಂಗ್: ಡಿಕೆಶಿ, ನಮ್ಮ ನಡುವೆ ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸ್ಪಷ್ಟನೆ