ನವದೆಹಲಿ: ಅನಧಿಕೃತ ಕಟ್ಟಡಗಳನ್ನು (Unauthorised Constructions) ಕೆಡವಲು ತಾನು ರೂಪಿಸುವ ಮಾರ್ಗಸೂಚಿಗಳು ದೇಶಾದ್ಯಂತ ಮತ್ತು ಎಲ್ಲಾ ಧರ್ಮಗಳಿಗೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ.
ಒಬ್ಬ ವ್ಯಕ್ತಿ ಆರೋಪಿ ಅಥವಾ ಅಪರಾಧಿ ಎಂಬ ಕಾರಣಕ್ಕೆ ಅದು ಆಸ್ತಿಯ ಧ್ವಂಸಕ್ಕೆ ಆಧಾರವಾಗುವುದಿಲ್ಲ. ಹಾಗೆಂದು ಅತಿಕ್ರಮಣ ಮತ್ತು ಫುಟ್ಪಾತ್ಗಳನ್ನು ಅಸ್ತವ್ಯಸ್ತಗೊಳಿಸುವುದನ್ನು ಪ್ರೋತ್ಸಾಹಿಸುತ್ತಿಲ್ಲ. ಅನಧಿಕೃತ ನಿರ್ಮಾಣಕ್ಕೆ, ಒಂದು ಕಾನೂನು ಇರಬೇಕು, ಅದು ಧರ್ಮ ಅಥವಾ ನಂಬಿಕೆಗಳ ಮೇಲೆ ಅವಲಂಬಿತವಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಐಐಟಿ ಪ್ರವೇಶಾತಿಗೆ ಶುಲ್ಕವಿಲ್ಲದೇ ಪರದಾಡಿದ್ದ ದಲಿತ ಯುವಕನಿಗೆ ‘ಸುಪ್ರೀಂ’ನಲ್ಲಿ ಸಿಕ್ತು ನ್ಯಾಯ
ನಮ್ಮದು ಜಾತ್ಯತೀತ ದೇಶ, ನಾವು ಕೈಗೊಳ್ಳುವ ಕ್ರಮಗಳು ಎಲ್ಲಾ ಸಂಸ್ಥೆಗಳಿಗೂ ಎಲ್ಲಾ ಸಮುದಾಯಕ್ಕೂ ಅನ್ವಯವಾಗುತ್ತದೆ. ಅದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಅಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ದ್ವಿಸದಸ್ಯ ಪೀಠ ಹೇಳಿದೆ.
ಸಾರ್ವಜನಿಕ ಸುರಕ್ಷತೆಯು ಬಹಳ ಮುಖ್ಯವಾಗಿದೆ. ರಸ್ತೆ, ಜಲಮೂಲಗಳು ಅಥವಾ ರೈಲು ಹಳಿಗಳನ್ನು ಅತಿಕ್ರಮಿಸುವ ಯಾವುದೇ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ರಾಜ್ಯ ಸರ್ಕಾರಗಳು ಆರೋಪಿಗಳ ಆಸ್ತಿಗಳನ್ನು ನೆಲಸಮ ಮಾಡುತ್ತಿವೆ (Bulldozer action) ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಸೆಪ್ಟೆಂಬರ್ 17 ರಂದು, ನ್ಯಾಯಾಲಯವು ಮಧ್ಯಂತರ ಆದೇಶದಲ್ಲಿ 15 ದಿನಗಳವರೆಗೆ ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ನೀಡಿತ್ತು. ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ವ್ಯಕ್ತಿಗಳ ಆಸ್ತಿಗಳನ್ನು ನ್ಯಾಯಾಲಯದ ಅನುಮತಿ ಇಲ್ಲದೆ ನೆಲಸಮ ಮಾಡಬಾರದು ಎಂದು ನ್ಯಾಯಾಲಯವು ನಿರ್ದೇಶಿಸಿತ್ತು. ಈ ಆದೇಶವನ್ನು ವಿಸ್ತರಿಸಿದೆ.
ಸಾರ್ವಜನಿಕ ಬೀದಿಗಳು, ಫುಟ್ಪಾತ್ಗಳು, ರೈಲು ಮಾರ್ಗಗಳು ಅಥವಾ ಜಲಮೂಲಗಳಲ್ಲಿನ ಅನಧಿಕೃತ ನಿರ್ಮಾಣಗಳನ್ನು ತೆಗೆದುಹಾಕಲು ನಿರ್ದೇಶನ ಅನ್ವಯಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಉತ್ತರ ಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶದ ಮೂರು ರಾಜ್ಯಗಳ ಪರವಾಗಿ ಹಾಜರಾಗಿದ್ದರು. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ | ರಾಜಕೀಯದಿಂದ ದೇವರನ್ನು ದೂರವಿಡಿ: ಸುಪ್ರೀಂ ಕೋರ್ಟ್