ತಮಿಳಿನ ಖ್ಯಾತ ನಿರ್ದೇಶಕ, ಪದ್ಮಶ್ರೀ ಭಾರತಿರಾಜ್ (Bharathiraja) ನಿಧನಕ್ಕೆ ಹೆಸರಾಂತ ನಟರು ಕಂಬನಿ ಮಿಡಿದಿದ್ದಾರೆ. ಅವರ ಅಂತಿಮ ದರ್ಶನಕ್ಕೆ ಖ್ಯಾತ ನಟರಾದ ರಜನಿಕಾಂತ್ (Rajinikanth), ಕಮಲ್ ಹಾಸನ್ (Kamal Haasan), ಮುಖ್ಯಮಂತ್ರಿ ವಿಜಯ್ ಸೇರಿದಂತೆ ಹಲವಾರು ಗಣ್ಯರು ಆಗಮಿಸಿದ್ದರು. ಭಾರತಿರಾಜ್ ಅವರ ಅಂತಿಮ ದರ್ಶನ ಪಡೆದರು.
ಅಂತಿಮ ದರ್ಶನದ ಬಳಿಕ ಮಾತನಾಡಿದ ಸಿಎಂ ವಿಜಯ್, ಅಗಲಿದ ಹೆಸರಾಂತ ನಿರ್ದೇಶಕ, ನಟ ಭಾರತಿರಾಜ್ ಅವರ ಅಂತ್ಯ ಸಂಸ್ಕಾರವನ್ನು ಸಕಲ ಗೌರವ ಗೌರವಗಳೊಂದಿಗೆ ಮಾಡುವುದಾಗಿ ತಿಳಿಸಿದರು. ರಾಷ್ಟ್ರ ಪ್ರಶಸ್ತಿ, ಪದ್ಮಶ್ರೀ ಸೇರಿದಂತೆ ಹತ್ತು ಹಲವಾರು ಗೌರವಗಳನ್ನು ಪಡೆದಿರುವ ಭಾರತಿರಾಜ್ ಅವರನ್ನು ಇದೇ ಸಂದರ್ಭದಲ್ಲಿ ವಿಜಯ್ ಸ್ಮರಿಸಿದರು. ಇದನ್ನೂ ಓದಿ: ಖ್ಯಾತ ತಮಿಳು ನಿರ್ದೇಶಕ, ನಟ ಭಾರತಿರಾಜ ವಿಧಿವಶ

ದಶಕಗಳ ಕಾಲ ತಮಿಳು ಚಿತ್ರರಂಗದಲ್ಲಿ (Tamil Industry) ಸಕ್ರಿಯರಾಗಿದ್ದ ಭಾರತಿರಾಜ್, ತಮ್ಮ ವಿಶಿಷ್ಟ ಕಥಾಹಂದರ ಹಾಗೂ ಗ್ರಾಮೀಣ ಸೊಗಡಿನ ಚಿತ್ರಗಳ ಮೂಲಕ ದಕ್ಷಿಣ ಭಾರತದ ಸಿನಿಮಾ ರಂಗಕ್ಕೆ ವಿಭಿನ್ನ ರೂಪವನ್ನು ನೀಡಿದ್ದರು. ತಮ್ಮ ಸುದೀರ್ಘ ಮತ್ತು ಅದ್ಭುತ ಸಿನಿ ಪಯಣದಲ್ಲಿ ಭಾರತಿರಾಜ ಅವರು ಕೇವಲ ನಿರ್ದೇಶನ ಮಾತ್ರವಲ್ಲದೆ, ಕಥೆಗಾರರಾಗಿ ಮತ್ತು ನಟರಾಗಿಯೂ ಗುರುತಿಸಿಕೊಂಡಿದ್ದರು.
ತಮಿಳುನಾಡಿನ (Tamilnadu) ತೇಣಿ ಜಿಲ್ಲೆಯ ಒಂದು ಸಾಮಾನ್ಯ ಗ್ರಾಮೀಣ ಕುಟುಂಬದಲ್ಲಿ ಜನಿಸಿದ ಅವರು ಚಿತ್ರರಂಗಕ್ಕೆ ಬರುವ ಮುನ್ನ ಹೆಲ್ತ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಸಿನಿಮಾ ಮೇಲಿನ ಅತಿಯಾದ ಆಸಕ್ತಿಯಿಂದಾಗಿ ನಂತರ ಚೆನ್ನೈಗೆ ವಲಸೆ ಬಂದು, ಕನ್ನಡದ ಖ್ಯಾತ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ಅವರ ಬಳಿ ಸಹ-ನಿರ್ದೇಶಕರಾಗಿ ಕೆಲಸ ಕರಗತ ಮಾಡಿಕೊಂಡಿದ್ದರು.
1977ರಲ್ಲಿ 16 ವಯತಿನಿಲೆ ಸಿನಿಮಾ ಮೂಲಕ ನಿರ್ದೇಶಕರಾಗಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕಲ್ಲುಕ್ಕುಲ್ ಈರಮ್, ಕಿಝಕ್ಕೆ ಪೋಗುಮ್ ರೈಲ್, ಸಿಗಪ್ಪು ರೋಜಕ್ಕಲ್, ನಿಝಲ್ಗಲ್ ಇವರ ಸಿನಿಮಾಗಳು. ಭಾರತಿರಾಜ ಅವರ ಸಾಧನೆಗಾಗಿ ‘ಅತ್ಯುತ್ತಮ ಚಿತ್ರ’ ಹಾಗೂ ‘ಅತ್ಯುತ್ತಮ ಚಿತ್ರಕಥೆ’ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ತಮ್ಮ ಚಿತ್ರಗಳ ಮೂಲಕ ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ದ ಈ ಮಹಾನ್ ಚೇತನದ ಅಗಲಿಕೆಗೆ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ಇದನ್ನೂ ಓದಿ: ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಮತ್ತೆ ಕಿಡಿಗೇಡಿಗಳ ಕಾಟ – ಅಶ್ಲೀಲ ನಿಂದನೆ
