ನೆಟ್ ಪರೀಕ್ಷೆ ಪೇಪರ್ ಸೋರಿಕೆ ಕೇಸ್ – ತನಿಖೆಗೆ ತೆರಳಿದ್ದ ಸಿಬಿಐ ಅಧಿಕಾರಿಗಳ ಮೇಲೆ ಹಲ್ಲೆ

Public TV
1 Min Read
CBI Team Probing Alleged UGC NET Paper Leak Attacked In Bihar Village

ಪಾಟ್ನಾ: ಯುಜಿಸಿ ನೆಟ್ ಪೇಪರ್ ಸೋರಿಕೆ ಪ್ರಕರಣದ (UGC-NET Paper Leak Case) ತನಿಖೆಗೆ ತೆರಳಿದ್ದ ಕೇಂದ್ರೀಯ ತನಿಖಾ ದಳದ ಅಧಿಕಾರಿಗಳ (CBI) ಮೇಲೆ ಬಿಹಾರದ (Bihar) ನಾವಡಾದ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ.

ಗ್ರಾಮಸ್ಥರು ನಕಲಿ ಅಧಿಕಾರಿಗಳು ಎಂದು ಭಾವಿಸಿ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಸುಮಾರು 200 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಅವರಲ್ಲಿ ಎಂಟು ಮಂದಿಯನ್ನು ಮಾತ್ರ ಹೆಸರಿಸಲಾಗಿದೆ. ಹಲ್ಲೆಯನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಲಾಗಿದ್ದು, ವಿಡಿಯೋಗಳ ಆಧಾರದ ಮೇಲೆ ಭಾಗಿಯಾಗಿರುವ ವ್ಯಕ್ತಿಗಳನ್ನು ಗುರುತಿಸಲಾಗುತ್ತಿದೆ. ಹಲ್ಲೆಯಲ್ಲಿ ಭಾಗಿಯಾದ ನಾಲ್ವರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: NEET-UG ಮರು ಪರೀಕ್ಷೆ – 1,563 ಪೈಕಿ 750 ಗೈರು, 63 ವಿದ್ಯಾರ್ಥಿಗಳು ಡಿಬಾರ್‌

ನಾಲ್ವರು ಅಧಿಕಾರಿಗಳು ಮತ್ತು ಒಬ್ಬ ಮಹಿಳಾ ಪೇದೆ ಸೆಲ್‍ಫೋನ್ ಟ್ರ್ಯಾಕ್ ಮಾಡಿ ಆರೋಪಿಗಳ ಪತ್ತೆಗೆ ತೆರಳಿದ್ದರು. ಈ ವೇಳೆ ಅಧಿಕಾರಿಗಳು ನಕಲಿ ಎಂದು ಗ್ರಾಮಸ್ಥರು ಥಳಿಸಿದ್ದಾರೆ. ಅಲ್ಲದೇ ವಾಹನಗಳನ್ನೂ ಧ್ವಂಸಗೊಳಿಸಿದ್ದಾರೆ. ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳೀಯ ಪೊಲೀಸರು ಆಗಮಿಸಿ ಅಧಿಕಾರಿಗಳನ್ನು ರಕ್ಷಿಸಿದ್ದಾರೆ.

ಗ್ರಾಮದಲ್ಲಿ ಎರಡು ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಫೋನ್‌ನಲ್ಲಿರುವ ಮಾಹಿತಿಯ ತನಿಖೆಯ ನಂತರ, ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೆಟ್ ಪರೀಕ್ಷೆ ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಅರೆಸ್ಟ್ ಆಗಿರುವ ಸಮಷ್ಟಿಪುರದ ವಿದ್ಯಾರ್ಥಿ ಅನುರಾಗ್ ಯಾದವ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ. ಇದೇ ಹೊತ್ತಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಕಿಂಗ್‍ಪಿನ್ ಪಾಟ್ನಾದ ಅಮಿತ್ ಆನಂದ್ ಕೂಡ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ. ಇದು ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಬಿಹಾರ ಸರ್ಕಾರ ಎಸ್‍ಐಟಿ ರಚನೆ ಮಾಡಿತ್ತು. ಈ ಸಂಬಂಧ 14 ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: NEET ಪರೀಕ್ಷಾ ಅಕ್ರಮ ಕೇಸ್:‌ ʻಸಾಲ್ವರ್‌ ಗ್ಯಾಂಗ್‌ʼ ಕೆಲಸ ಏನಾಗಿತ್ತು? ಮಾಸ್ಟರ್‌ ಮೈಂಡ್‌ ಮಾಫಿಯಾಗೆ ಸಿಲುಕಿದ್ದು ಹೇಗೆ?

Share This Article