ಉತ್ತರ ಗೆದ್ದರೆ ಡೆಲ್ಲಿ ಗೆದ್ದಂತೆ! -ಯಾಕೆ ಉತ್ತರ ಪ್ರದೇಶಕ್ಕೆ ಇಷ್ಟೊಂದು ಮಹತ್ವ?

Public TV
7 Min Read
Why is the Uttar Pradesh state election so important in Indian politics 1

ಲೋಕಸಭಾ ಚುನಾವಣೆಗೆ (Lok Sabha Election) ದಿನಗಣನೆ ಆರಂಭವಾಗಿದ್ದು ಅದರಲ್ಲೂ ಎಲ್ಲರ ಕಣ್ಣು ಉತ್ತರ ಪ್ರದೇಶದ ಮೇಲಿದೆ. ಉತ್ತರ ಪ್ರದೇಶದ ಎಲ್ಲರ ಕಣ್ಣು ಇರಲು ಕಾರಣವಿದೆ. ಭಾರತದ (India) ಒಟ್ಟು 14 ಮಂದಿ ಪ್ರಧಾನಿಗಳ (Prime Minister) ಪೈಕಿ 9 ಮಂದಿ ಉತ್ತರ ಪ್ರದೇಶ ಮೂಲದವರೇ ಆಗಿದ್ದಾರೆ ಹೀಗಾಗಿ ಉತ್ತರ ಪ್ರದೇಶ ಯಾಕೆ ಲೋಕಸಭಾ ಚುನಾವಣೆಯಲ್ಲಿ ಮಹತ್ವ ಪಡೆಯುತ್ತದೆ? ಕಾಂಗ್ರೆಸ್‌, ಎಸ್‌ಪಿ, ಬಿಎಸ್‌ಪಿ ಅಧಿಕಾರದಲ್ಲಿದ್ದ ರಾಜ್ಯದಲ್ಲಿ ಕಮಲ ಅರಳಿದ್ದು ಹೇಗೆ? ಈ ಬಾರಿಯ ಅಖಾಡ ಹೇಗಿದೆ? ಇತ್ಯಾದಿ ವಿಷಯಗಳ ಬಗ್ಗೆ ವಿವರಣೆ ಇಲ್ಲಿ ನೀಡಲಾಗಿದೆ.

ದೇಶದ ದೊಡ್ಡ ರಾಜ್ಯ
ಉತ್ತರ ಪ್ರದೇಶ ದೇಶದಲ್ಲೇ ದೊಡ್ಡ ರಾಜ್ಯವಾಗಿದ್ದು 2011ರಲ್ಲಿ ಜನಸಂಖ್ಯೆ 19.98 ಕೋಟಿ ಇದ್ದರೆ ಈಗ ಇದು 25 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ವಿಶ್ವದ ಟಾಪ್‌ ಆರ್ಥಿಕತೆಯನ್ನು ಹೊಂದಿರುವ ದೇಶಗಳಿಗೆ ಹೋಲಿಕೆ ಮಾಡಿದರೆ ಜಪಾನ್‌ 12.57 ಕೋಟಿ, ಜರ್ಮನಿ 8.32 ಕೋಟಿ, ಯುಕೆ 6.73 ಜನಸಂಖ್ಯೆ ಇದ್ದರೆ ಈ ಮೂರು ದೇಶಗಳ ಒಟ್ಟು ಜನಸಂಖ್ಯೆ ಉತ್ತರ ಪ್ರದೇಶ ಒಂದರಲ್ಲೇ ಇದೆ. ಮತದಾರರ ಸಂಖ್ಯೆ ಎಷ್ಟಿದೆ ಅಂತ ನೋಡುವುದಾದರೆ 2024ರಲ್ಲಿ 15.02 ಕೋಟಿ ಮತದಾರರು ಉತ್ತರ ಪ್ರದೇಶದಲ್ಲಿದ್ದಾರೆ.

ದೇಶದಲ್ಲಿ ಒಟ್ಟು 543 ಲೋಕಸಭಾ ಕ್ಷೇತ್ರಗಳಿವೆ. ಈ 543ರ ಪೈಕಿ ಬರೋಬ್ಬರಿ 80 ಲೋಕಸಭಾ ಕ್ಷೇತ್ರಗಳು ಉತ್ತರಪ್ರದೇಶ ಒಂದೇ ರಾಜ್ಯದಲ್ಲಿ ಇದೆ. ಅಂದರೆ ಹತ್ತಿರ ಹತ್ತಿರ ಶೇ.15 ರಷ್ಟು ಉತ್ತರ ಪ್ರದೇಶ ಒಂದರಲ್ಲೇ ಇದೆ. ಈ ಕಾರಣಕ್ಕೆ ದೆಹಲಿ ಗದ್ದುಗೆ ಹಿಡಿಯುವ ಪಕ್ಷಗಳು ಎಲ್ಲಾ ರಾಜ್ಯಗಳ ಜೊತೆ ಉತ್ತರ ಪ್ರದೇಶಕ್ಕೆ ವಿಶೇಷ ಮಹತ್ವ ನೀಡುತ್ತವೆ.

Mulayam Singh Yadavಕಾಂಗ್ರೆಸ್‌ ಕೋಟೆ ಛಿದ್ರವಾಗಿದ್ದು ಹೇಗೆ?
ಉತ್ತರ ಪ್ರದೇಶ ಮೊದಲಿನಿಂದಲೂ ಕಾಂಗ್ರೆಸ್‌ (Congress) ಹಿಡಿತದಲ್ಲೇ ಇತ್ತು. ಆದರೆ ಯಾವಾಗ ಇಂದಿರಾ ಗಾಂಧಿ (Indira Gnadhi) 1975 ರಿಂದ 1977ರ ಅವಧಿ ಅಂದರೆ 21 ತಿಂಗಳು ತುರ್ತು ಪರಿಸ್ಥಿತಿ ಹೇರಿದರೋ ಆಂದಿನಿಂದಲೇ ದೇಶದಲ್ಲಿ ರಾಜಕೀಯ ಬದಲಾವಣೆ ಪರ್ವ ಆರಂಭವಾಯಿತು. ತುರ್ತು ಪರಿಸ್ಥಿತಿ ವಿರೋಧಿಸಿದ ನಾಯಕರು ಒಂದಾಗಿ ಒಟ್ಟಾಗಿ ಜನತಾ ಪಾರ್ಟಿ ಕಟ್ಟಿದ್ದರು. ನಿಧಾನವಾಗಿ ಇದು ಉತ್ತರ ಪ್ರದೇಶದಲ್ಲಿ ಬೇರೂರಲು ಆರಂಭವಾಯಿತು. ಪರಿಣಾಮ ಉತ್ತರ ಪ್ರದೇಶದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಕಾಂಗ್ರೆಸ್‌ 1989ರಲ್ಲಿ ಹೀನಾಯ ಪ್ರದರ್ಶನ ನೀಡಿತು. 1984 ರಲ್ಲಿ 83 ಸ್ಥಾನ ಗೆದ್ದಿದ್ದ ಕಾಂಗ್ರೆಸ್‌ 1989ರ ಚುನಾವಣೆಯಲ್ಲಿ ಕೇವಲ 15 ಸ್ಥಾನಕ್ಕೆ ಕುಸಿಯಿತು. ಜನತಾ ದಳ 54 ಸ್ಥಾನ ಗೆದ್ದರೆ, ಬಿಜೆಪಿ 8 ಸ್ಥಾನ ಪಡೆಯಿತು.

ನಂತರದ ದಿನಗಳಲ್ಲಿ ಜಾತಿ ಆಧಾರಿತ ಪಕ್ಷಗಳ ಬೆಳವಣಿಗೆ ಉತ್ತರ ಪ್ರದೇಶದಲ್ಲಿ ಜಾಸ್ತಿ ಆಯ್ತು. ಪರಿಣಾಮ ಬಹುಜನ ಸಮಾಜವಾದಿ ಪಕ್ಷ, ಸಮಾಜವಾದಿ ಪಕ್ಷಗಳು ಗಟ್ಟಿಯಾಗಿ ನೆಲೆ ನಿಂತವು. ಅಯೋಧ್ಯ ರಾಮ ಮಂದಿರ (Ram Mandir) ವಿಚಾರದಲ್ಲಿ ತನ್ನ ನಿರ್ಧಾರ, ಬಿಜೆಪಿಯ ರಥಯಾತ್ರೆ, ಅಲ್ಪಸಂಖ್ಯಾತರ ಒಲೈಕೆ, ಭ್ರಷ್ಟಾಚಾರ, ಬೇರೆ ನಾಯಕರನ್ನು ಬೆಳೆಸದೇ ಇರುವುದು, ಸರಿಯಾದ ನಾಯಕರಿಗೆ ಟಿಕೆಟ್‌ ಹಂಚದೇ ಹೈಕಮಾಂಡ್‌ಗೆ ಆಪ್ತರಾದವರಿಗೆ ಟಿಕೆಟ್‌, ಎನ್‌ಡಿಎಯ ಬಲವಾದ ಮೈತ್ರಿ ಇತ್ಯಾದಿ ಕಾರಣದಿಂದಾಗಿ ಈಗ ಕಾಂಗ್ರೆಸ್‌ ಉತ್ತರ ಪ್ರದೇಶದಲ್ಲಿ ಬೇರೆ ಪಕ್ಷದೊಂದಿಗೆ ಮೈತ್ರಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

Mayawati BSP

ಕಮಲ ಅರಳಿದ್ದು ಹೇಗೆ?
ಚುನಾವಣೆಯ ಸಮಯದಲ್ಲಿ ಜಾತಿ ನೋಡದೇ ಅಭಿವೃದ್ಧಿ ನೋಡಿ ಮತ ಹಾಕಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಚುನಾವಣಾ ಸಮಯದಲ್ಲಿ ಮತದಾರ ತನ್ನ ಜಾತಿಯ ವ್ಯಕ್ತಿಯನ್ನೇ ನೋಡಿ ಮತ ಹಾಕುವುದು ಸಾಮಾನ್ಯ. ಈ ಕಾರಣ ಎಲ್ಲಾ ಪಕ್ಷಗಳು ಆ ಕ್ಷೇತ್ರದಲ್ಲಿ ಯಾವ ಸಮುದಾಯ ಪ್ರಬಲವಾಗಿದೆ ಆ ಸಮುದಾಯ ವ್ಯಕ್ತಿಗೆ ಟಿಕೆಟ್‌ ನೀಡುತ್ತದೆ. ದಕ್ಷಿಣ ಭಾರತಕ್ಕೆ ಹೋಲಿಸಿದರೆ ಉತ್ತರ ಭಾರತದಲ್ಲಿ ಕ್ಯಾಸ್ಟ್‌ ಪಾಲಿಟಿಕ್ಸ್‌ ಜಾಸ್ತಿ. ಉತ್ತರ ಪ್ರದೇಶದಲ್ಲಿ ಇದು ಜಾತಿ ಬಹಳ ಮುಖ್ಯ ಪಾತ್ರವಹಿಸುತ್ತದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮದರಸಾಗಳ ನಿಷೇಧಕ್ಕೆ ‘ಸುಪ್ರೀಂ’ ತಡೆ

ಉತ್ತರ ಪ್ರದೇಶದಲ್ಲಿ ಜಾತಿ ಆಧಾರಿತ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷ ವೇಗವಾಗಿ ಬೆಳವಣಿಗೆ ಆಯ್ತು. ಎಸ್‌ಟಿ, ಎಸ್‌ಸಿ, ಒಬಿಸಿ ಸಮುದಾಯಗಳು ಈ ಪಕ್ಷವನ್ನು ಬೆಂಬಲಿಸಿದ ಪರಿಣಾಮ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿತು. ಕಾಂಗ್ರೆಸ್‌ಗೆ ಬೀಳುತ್ತಿದ್ದ ಮತಗಳನ್ನು ಈ ಪಕ್ಷಗಳು ಕಿತ್ತುಕೊಂಡ ಪರಿಣಾಮ ಲೋಕಸಭೆಯಲ್ಲೂ ಜಯಗಳಿಸಿತು. ಬಿಎಸ್‌ಪಿ, ಎಸ್‌ಪಿ ಅಧಿಕಾರಕ್ಕೆ ಏರುತ್ತಿದ್ದಂತೆ ಮುಲಾಯಂ ಸಿಂಗ್‌ (Mulayam Singh Yadav) ಮತ್ತು ಮಾಯಾವತಿ (Mayawati) ತನ್ನ ಕುಟುಂಬದ ಸದಸ್ಯರಿಗೆ ಪಕ್ಷದಲ್ಲಿ ಮಣೆ ಹಾಕಲು ಆರಂಭಿಸಿದರು. ಕಾಂಗ್ರೆಸ್‌ನಂತೆ ಈ ಎರಡು ಪಕ್ಷಗಳು ಕುಟುಂಬ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಪ್ರಚಾರ ಮಾಡಲು ಆರಂಭಿಸಿತು.

ram lalla narendra modi puja 8

 

ಎರಡನೇಯದಾಗಿ ಹಿಂದೂಗಳು ಅತಿ ಹೆಚ್ಚು ಭೇಟಿ ನೀಡುವ ಮೂರು ಸ್ಥಳಗಳು ಉತ್ತರ ಪ್ರದೇಶದಲ್ಲಿದೆ. ವಾರಣಾಸಿ, ಅಯೋಧ್ಯೆ, ಮಥುರಾ ಬಗ್ಗೆ ಭಕ್ತಿ ಭಾವ ಈಗಲೂ ಹಿಂದೂಗಳಲ್ಲಿ ಇದೆ. ಅಯೋಧ್ಯೆ ರಾಮ ಜನ್ಮಭೂಮಿ ವಿಚಾರವನ್ನು ಪ್ರತಿ ಚುನಾವಣೆಯಲ್ಲಿ ಬಿಜೆಪಿ ಪ್ರಸ್ತಾಪಿಸುತ್ತಾ ಬರುತ್ತಿತ್ತು. ಈ ಕಾರಣದಿಂದಾಗಿ ಹಲವು ಮತದಾರರು ಬಿಜೆಪಿಯತ್ತ ತಿರುಗಿದರು.

ರಾಮಮಂದಿರ ವಿಚಾರ ಬಿಜೆಪಿಗೆ (BJP) ಹೆಚ್ಚು ಲಾಭ ತಂದುಕೊಟ್ಟಿತ್ತು.1996ರ ಚುನಾವಣೆಯಲ್ಲಿ ಬಿಜೆಪಿ ಬರೋಬ್ಬರಿ 52 ಸ್ಥಾನವನ್ನು ಗೆದ್ದುಕೊಂಡಿತ್ತು. ಆದರೆ 1999ರ ಚುನಾವಣೆಯಲ್ಲಿ ಬಿಜೆಪಿ 29 ಸ್ಥಾನ ಪಡೆದರೆ 2004 ಮತ್ತು 2009ರಲ್ಲಿ ಬಿಜೆಪಿ ಕೇವಲ 10 ಸ್ಥಾನ ಮಾತ್ರ ಗೆದ್ದುಕೊಂಡಿತ್ತು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ – ಬಿಜೆಪಿ ಕಾರ್ಯಕರ್ತನನ್ನು ಸಾಕ್ಷಿಯನ್ನಾಗಿ ಪರಿಗಣಿಸಿದ ಎನ್‌ಐಎ

2014 lok sabha election uttar pradesh

2014ರಲ್ಲಿ ಏನಾಯ್ತು?
ಬಿಜೆಪಿ ಚುನಾವಣೆಗೆ ಮೊದಲೇ ಗುಜರಾತ್‌ ಚುನಾವಣೆಯಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ (Narendra Modi) ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿ ಅಖಾಡಕ್ಕೆ ಇಳಿದಿತ್ತು. ಲೋಕಸಭೆಯಲ್ಲಿ ಅಧಿಕಾರ ಸಿಗಬೇಕಾದರೆ ಉತ್ತರ ಪ್ರದೇಶ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದ ಬಿಜೆಪಿ ಉತ್ತರ ಪ್ರದೇಶಕ್ಕೆ ಚುನಾವಣಾ ತಂತ್ರಗಾರಿಕೆಗೆ ಅಮಿತ್‌ ಶಾ ಅವರನ್ನು ನಿಯೋಜಿಸಿತ್ತು. ಸಾಮಾಜಿಕ ಜಾಲತಾಣಗಳನ್ನು ಮತದಾರರನ್ನು ಪ್ರಭಾವಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌, ಎಸ್‌ಪಿ, ಬಿಎಸ್‌ಪಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರಕ್ಕೆ ಇಳಿಯಲಿಲ್ಲ. ಆದರೆ ಬಿಜೆಪಿ ಫೇಸ್‌ಬುಕ್‌, ಟ್ವಿಟ್ಟರ್‌, ಯೂಟ್ಯೂಬ್‌ ನಂತಹ ಸಾಮಾಜಿಕ ಜಾಲತಾಣವನ್ನು ಯಶಸ್ವಿಯಾಗಿ ಬಳಸಿತ್ತು. ಹಿರಿಯ ಮತದಾರರ ಮೇಲೆ ಇವುಗಳು ಪ್ರಭಾವ ಬೀರದೇ ಇದ್ದರೂ ಯುವ ಮತದಾರರು ಬಿಜೆಪಿಯತ್ತ ವಾಲಿದರು. ಟಿಕೆಟ್‌ ಹಂಚಿಕೆಯಲ್ಲಿ ಲೋಪವಾಗದಂತೆ ಎಲ್ಲಾ ದೊಡ್ಡ ಸಮುದಾಯಗಳಿಗೆ ಟಿಕೆಟ್‌ ನೀಡಿತ್ತು. ಕೊನೆಯಲ್ಲಿ ಮೋದಿ ಅವರ ಅಬ್ಬರ ಪ್ರಚಾರದ ಪರಿಣಾಮ 2014ರ ಚುನಾವಣೆಯಲ್ಲಿ 80 ಸ್ಥಾನಗಳ ಪೈಕಿ ಬಿಜೆಪಿ ಬರೋಬ್ಬರಿ 71 ಸ್ಥಾನ ಪಡೆಯಿತು. ಅಷ್ಟೇ ಅಲ್ಲದೇ ದೇಶದಲ್ಲಿ ಒಟ್ಟು 282 ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿ ಅಧಿಕಾರಕ್ಕೆ ಏರಿತು.

2019 lok sabha election utttar pradesh

2024ರಲ್ಲಿ ಏನಾಗಬಹುದು?
2024ರಲ್ಲಿ ಏನಾಗಬಹುದು ಎಂಬುದನ್ನು ತಿಳಿದುಕೊಳ್ಳುವ ಮೊದಲು ಅಲ್ಲಿನ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ತಿಳಿದುಕೊಳ್ಳುವುದು ಉತ್ತಮ. ಉತ್ತರ ಪ್ರದೇಶದಲ್ಲಿ 403 ವಿಧಾನಸಭಾ ಕ್ಷೇತ್ರಗಳಿದೆ. 2002ರಲ್ಲಿ ಎಸ್‌ಪಿ ಅಧಿಕಾರಕ್ಕೆ ಏರಿದರೆ 2007ರಲ್ಲಿ ಬಿಎಸ್‌ಪಿ ಅಧಿಕಾರಕ್ಕೆ ಏರಿತ್ತು. 2012 ಎಸ್‌ಪಿ ಅಧಿಕಾರಕ್ಕೆ ಏರಿದರೆ 2017 ಬಿಜೆಪಿ ಬರೋಬ್ಬರಿ 312 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ನಂತರ ಯೋಗಿ ಅದಿತ್ಯನಾಥ್‌ ಮುಖ್ಯಮಂತ್ರಿಯಾದರು. 2022ರ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಬಹುದು ಅಂತ ಕೆಲ ಸಮೀಕ್ಷೆಗಳು ಹೇಳಿತ್ತು. ಯಾಕೆಂದರೆ ಒಂದು ಬಾರಿ ಅಧಿಕಾರಕ್ಕೆ ಏರಿದ ಪಕ್ಷಕ್ಕೆ ಮತದಾರ ಅಲ್ಲಿ ಮತ ಹಾಕುತ್ತಿರಲಲ್ಲ. ಆದರೆ 2022ರಲ್ಲಿ ಬಿಜೆಪಿ 255 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಮತ್ತೆ ಅಧಿಕಾರಕ್ಕೆ ಏರಿತು.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ 80 ಸ್ಥಾನಗಳನ್ನು ಗೆಲ್ಲಬೇಕೆಂದು ಪಣ ತೊಟ್ಟಿದೆ. ಅಷ್ಟೇ ಎಲ್ಲದೇ ತನ್ನ ಎನ್‌ಡಿಎ ಮೈತ್ರಿಕೂಟವನ್ನು ಬಲಪಡಿಸಿದೆ. ಬಿಜೆಪಿ ನಿಶಾದ್‌ ಪಾರ್ಟಿ, ಜಯಂತ್‌ ಚೌಧರಿ ಅವರ ರಾಷ್ಟ್ರೀಯ ಲೋಕದಳ, ಅನುಪ್ರಿಯಾ ಪಾಟೀಲ್‌ ಅವರ ಅಪ್ನಾ ದಳ, ಓಂ ಪ್ರಕಾಶ್‌ ರಾಜ್‌ಭರ್‌ ಅವರ ಸುಹೆಲ್‌ದೇವ್‌ ಭಾರತೀಯ ಸಮಾಜ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ. ಬಿಜೆಪಿ ಒಟ್ಟು 74 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

NARENDRA MODI

ಕಾಂಗ್ರೆಸ್‌ ಮತ್ತು ಎಸ್‌ಪಿ ಮೈತ್ರಿ ಮಾಡಿಕೊಂಡಿದೆ. ಈ ಮಧ್ಯೆ ಟಿಎಂಸಿ ಸಹ ಉತ್ತರ ಪ್ರದೇಶದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಟಿಎಂಸಿಗೆ ಎಸ್‌ಪಿ ಬೆಂಬಲ ನೀಡಿದೆ.

ಇಷ್ಟೇ ಅಲ್ಲದೇ ಮಾಯಾವತಿ ನೇತೃತ್ವದ ಬಿಎಸ್‌ಪಿ 80 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಚಂದ್ರಶೇಖರ್ ಅಜಾದ್‌ ನೇತೃತ್ವದ ಅಜಾದ್‌ ಸಮಾಜ್‌ ಪಾರ್ಟಿ 8 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಯಲಿದೆ. ಒವೈಸಿ ನೇತೃತೃತ್ವದ ಎಐಎಂಎಂ 20 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದೆ. ಹೀಗಾಗಿ ಈ ಬಾರಿ ಉತ್ತರ ಪ್ರದೇಶ ಚುನಾವಣೆ ಬಹಳ ರೋಚಕವಾಗಿದೆ.‌ ಈ ಪಕ್ಷಗಳು ಯಾರ ಮತವನ್ನು ಎಷ್ಟು ಬುಟ್ಟಿಗೆ ಹಾಕುವುದರ ಮೇಲೆ ಎನ್‌ಡಿಎ ಮತ್ತು ಐಎನ್‌ಡಿಐಎ ಪಕ್ಷಗಳ ಭವಿಷ್ಯ ಅಡಗಿದೆ.

ರಾಮ ಮಂದಿರ ನಿರ್ಮಾಣ, ಯೋಗಿ ಆಡಳಿತ, ಕೇಂದ್ರ ಸರ್ಕಾರ ಮತ್ತು ರಾಜ್ಯದ ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟುಕೊಂಡು ಎನ್‌ಡಿಎ ಚುನಾವಣಾ ಮತ ಬೇಟೆ ನಡೆಸುತ್ತಿದೆ. ಐಎನ್‌ಡಿಐಎ ಒಕ್ಕೂಟ ಭ್ರಷ್ಟಾಚಾರ, ಬೆಲೆ ಏರಿಕೆ, ರೈತರ ಸಮಸ್ಯೆ ಇತ್ಯಾದಿ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಪ್ರಚಾರ ನಡೆಸುತ್ತಿದೆ. ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಒಕ್ಕೂಟಕ್ಕೆ 70ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಭವಿಷ್ಯ ನುಡಿದಿವೆ.

2014ರಲ್ಲಿ 71 ಸ್ಥಾನ ಬಿಜೆಪಿ ಗೆದ್ದಿದ್ದರೆ 2019ರಲ್ಲಿ ಬಿಜೆಪಿ 62 ಸ್ಥಾನವನ್ನು ಗೆದ್ದಿತ್ತು. ಈ ಕಾರಣಕ್ಕೆ ಈ ಬಾರಿ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಎನ್‌ಡಿಎ ಬಲವಾದ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿ ಫಲ ನೀಡುತ್ತಾ? ರಾಮ ಮಂದಿರ ನಿರ್ಮಾಣ ಬಿಜೆಪಿಯ ಕೈ ಹಿಡಿಯುತ್ತಾ? ಐಎನ್‌ಡಿಐಎ ಒಕ್ಕೂಟ ಮೋದಿ ಅಲೆಯನ್ನು ಧ್ವಂಸ ಮಾಡುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಜೂನ್‌ 4 ರಂದು ಉತ್ತರ ಸಿಗಲಿದೆ.

Share This Article