ತಮಿಳಿನತ್ತ ‘ಬೆಂಗಳೂರು ಡೇಸ್’ ನಿರ್ದೇಶಕಿ- ಸಾಥ್ ನೀಡಿದ ‘ಕೆಆರ್‌ಜಿ’ ಸಂಸ್ಥೆ

Public TV
2 Min Read
anjali menon 2

ಚಿರಪರಿಚಿತ ಚಿತ್ರ ನಿರ್ಮಾಣ, ವಿತರಣಾ ಸಂಸ್ಥೆಯಾದ ಕೆಆರ್‌ಜಿ ಸ್ಟುಡಿಯೋಸ್ ಇದೀಗ ಖ್ಯಾತ ಮಲಯಾಳಂ ನಿರ್ದೇಶಕಿ ಅಂಜಲಿ ಮೆನನ್ (Anjali Menon) ಅವರೊಂದಿಗೆ ಹೊಸ ತಮಿಳು ಚಿತ್ರಕ್ಕಾಗಿ ಕೈ ಜೋಡಿಸಿದೆ. ಬೆಂಗಳೂರು ಡೇಸ್, ಉಸ್ತಾದ್ ಹೊಟೇಲ್, ಮಂಜಡಿಕುರು, ಕೂಡೆ, ವಂಡರ್ ವುಮನ್ ಅಂತಹ ಹೆಸರಾಂತ ಚಿತ್ರಗಳನ್ನು ಕೊಡುಗೆಯಾಗಿ ನೀಡಿರುವ ನಿರ್ದೇಶಕಿ ಅಂಜಲಿ ಮೆನನ್ ಇದೀಗ ತಮಿಳು ಚಿತ್ರವನ್ನು ನಿರ್ದೇಶಿಸಲು ರೆಡಿಯಾಗಿದ್ದಾರೆ.

anjali menon

ಕೆಆರ್‌ಜಿ ಸಂಸ್ಥೆ (KRG Studios) ಈ ಸಹಯೋಗದ ಮೂಲಕ ಕನ್ನಡ ಚಿತ್ರರಂಗಕ್ಕೂ ಹಾಗೂ ಇನ್ನಿತರ ಚಿತ್ರರಂಗಕ್ಕೂ ಇರುವ ಅಂತರವನ್ನು ಕಡಿಮೆ ಮಾಡಿ, ಸಮಗ್ರ ನಿರ್ಮಾಣದ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸುತ್ತಿದೆ ಎಂದರೆ ತಪ್ಪಾಗಲಾರದು. ಕೆಆರ್‌ಜಿ ಸಂಸ್ಥೆ ತನ್ನ ಸಿನಿಮಾ ವಿತರಣೆಯನ್ನು 2017ರಲ್ಲಿ ಆರಂಭಿಸಿ, ಇಲ್ಲಿಯವರೆಗೂ ಸರಿಸುಮಾರು 100 ಚಿತ್ರಗಳನ್ನು ವಿತರಿಸಿದೆ. 2020ರಲ್ಲಿ, `ರತ್ನನ್ ಪ್ರಪಂಚ’ ಚಿತ್ರದ ಮೂಲಕ ಚಿತ್ರ ನಿರ್ಮಾಣವನ್ನು ಆರಂಭಿಸಿತು. ರೋಹಿತ್ ಪದಕಿಯವರ ನಿರ್ದೇಶನದಲ್ಲಿ, ಡಾಲಿ ಧನಂಜಯ್ ಅಭಿನಯದಲ್ಲಿ ಮೂಡಿಬಂದ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆಗೊಂಡು ಎಲ್ಲರ ಮನೆ ಮಾತಾಗಿತ್ತು. ಮಾರ್ಚ್ 2023ರಲ್ಲಿ ತೆರೆಕಂಡ ‘ಗುರುದೇವ್ ಹೊಯ್ಸಳ’ ಬಹಳ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಯನ್ನು ಗಳಿಸಿತ್ತು.

anjali menon 1

ಕೆಆರ್‌ಜಿ ಸಂಸ್ಥೆ ಈ ಸಹಯೋಗ ವಿಭಿನ್ನ ಕಥಾ ವಸ್ತುವನ್ನು ಒಳಗೊಂಡಿರುವ ಚಿತ್ರಗಳನ್ನು ಸಿನಿ ಪ್ರೇಮಿಗಳಿಗೆ ಉಣಬಡಿಸುವ ಮುಖ್ಯ ಉದ್ದೇಶವನ್ನು ಹೊಂದಿದೆ. ಅಷ್ಟೇ ಅಲ್ಲದೆ, ದಕ್ಷಿಣ ಭಾರತದ 4 ಭಾಷೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದೆ. ಇದನ್ನೂ ಓದಿ:ಹೃದಯ ಸ್ತಂಭನದಿಂದ ಕಿರುತೆರೆ ನಟ ರಿತುರಾಜ್ ಸಿಂಗ್ ನಿಧನ

anjali

ಈ ಕುರಿತು ನಿರ್ದೇಶಕಿ ಅಂಜಲಿ ಮೆನನ್ (Anjali Menon) ಮಾತನಾಡಿ, ಸಿನಿಮಾಗಳು ಭಾಷೆಯ ಬೇಲಿ ದಾಟಿ ಎಲ್ಲರನ್ನು ತಲುಪುತ್ತಿರುವ ಈ ಕಾಲದಲ್ಲಿ ಕೆಆರ್‌ಜಿ ಸ್ಟುಡಿಯೋಸ್ ಅಂತಹ ಸಂಸ್ಥೆಯೊಡನೆ ನಾನು ಕೈ ಜೋಡಿಸಿರುವುದು ಸಮಂಜಸವೇ ಎನಿಸುತ್ತಿದೆ. ನಮ್ಮ ಈ ಸಹಯೋಗದಲ್ಲಿ ಉನ್ನತ ಮಟ್ಟದ ಚಿತ್ರ ನಿರ್ಮಾಣ ಹಾಗೂ ನಿರ್ದೇಶನವನ್ನು ಎದುರು ನೋಡುತ್ತಿದ್ದೇನೆ ಎಂದರು.

karthik gowda

ಕೆಆರ್‌ಜಿ ಸಂಸ್ಥೆಯ ರೂವಾರಿ ಕಾರ್ತಿಕ್ ಗೌಡ (Karthik Gowda) ಮಾತನಾಡಿ, ಅಂಜಲಿ ಮೆನನ್ ಮತ್ತು ನಮ್ಮ ಸಹಯೋಗ ಕೆ ಆರ್‌ಜಿ ಸ್ಟುಡಿಯೋಸ್‌ನಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಸಿನಿಮಾಗೆ ಇರುವ ಶಕ್ತಿಯನ್ನು ನಾವು ನಂಬುತ್ತೇವೆ. ಅದು ತೆರೆಯ ಮೇಲೆ ಯಾವ ರೀತಿಯ ಜಾದುವನ್ನಾದರು ಸೃಷ್ಟಿಸಬಲ್ಲದು. ಈ ನಿಟ್ಟಿನಲ್ಲಿ ನಮ್ಮ ಸಹಯೋಗ ಬಹಳ ಅರ್ಥಪೂರ್ಣವಾಗಲಿದೆ ಎಂದು ನಂಬಿದ್ದೇನೆ. ಈ ಕುರಿತು ನಮ್ಮ ಪಯಣ ಶುರು ಆಗಲು ಕಾರಣ ನನ್ನ ಸ್ನೇಹಿತ ವಿಜಯ್ ಸುಬ್ರಹ್ಮಣ್ಯಂ. ಚಿತ್ರದ ಕಥಾವಸ್ತುವಿಗೆ, ಅದರ ನಿರೂಪಣೆಗೆ ಇರುವ ಶಕ್ತಿಯನ್ನು ಕುರಿತು ಹಾಗೂ ಉನ್ನತ ಮಟ್ಟದ ನಿರ್ಮಾಣವು ಪ್ರೇಕ್ಷಕರ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂದೆಲ್ಲಾ ನಾವು ಚರ್ಚಿಸಿದ್ದೇವೆ ಎಂದು ಮಾತನಾಡಿದ್ದಾರೆ.

ನಮ್ಮಲ್ಲಿರುವ ಸಾಮರ್ಥ್ಯವನ್ನು ಆತ ಗಮನಿಸಿ,ನಮಗೆ ಮಾರ್ಗದರ್ಶಕನಾಗಿ ಹಾಗೂ ನಮ್ಮೊಡನೆ ಸಹ-ನಿರ್ಮಾಪಕನಾಗಿ ಕೈ ಜೋಡಿಸಿದಕ್ಕಾಗಿ ನಾನು ಆಭಾರಿಯಾಗಿರುತ್ತೇನೆ. ತುಲ್ಸಿಯಾ ಸಂಸ್ಥೆಯ ಸ್ಥಾಪಕರಾದ ಚೈತನ್ಯ ಹೆಗಡೆ ಅಂತಹ ಸಮಾನ ಮನಸ್ಕರ ಸಹಕಾರದಿಂದ ಅತ್ಯುನ್ನತ ಗುಣಮಟ್ಟದ ಚಿತ್ರಗಳನ್ನು ನೀಡುವ ಭರವಸೆ ನಮ್ಮ ಸಂಸ್ಥೆ ನೀಡಲಿದೆ. ಮಲಯಾಳಂ ನಿರ್ದೇಶಕಿ ಅಂಜಲಿ ಮೆನನ್ ಅವರೊಂದಿಗೆ ಕೈ ಜೋಡಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದು ಕಾರ್ತಿಕ್ ಗೌಡ ತಿಳಿಸಿದ್ದಾರೆ.

Share This Article