ರಾಮಮಂದಿರ ಉದ್ಘಾಟನೆ; ಮುಸ್ಲಿಮರ ಮೇಲಿನ ದ್ವೇಷ ಕೊನೆಗೊಳ್ಳುವ ವಿಶ್ವಾಸವಿದೆ: ಫಾರೂಕ್‌ ಅಬ್ದುಲ್ಲಾ

Public TV
1 Min Read
FAROOQ ABDULLAH

ಜಮ್ಮು-ಕಾಶ್ಮೀರ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಉದ್ಘಾಟನಾ ಸಮಾರಂಭವು ದೇಶದಲ್ಲಿ ಮುಸ್ಲಿಮರ ವಿರುದ್ಧದ ದ್ವೇಷವನ್ನು ಕೊನೆಗೊಳಿಸಲು ದಾರಿ ಮಾಡಿಕೊಡಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (NC) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ (Farooq Abdullah) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಾನು ಯಾವಾಗಲೂ ಮುಕ್ತ ಮನಸ್ಸಿನಿಂದ ಶ್ರೀರಾಮನನ್ನು (Shri Ram) ಸ್ತುತಿಸುತ್ತೇನೆ ಎಂದು ಒತ್ತಿ ಹೇಳಿದರು. ಅಯೋಧ್ಯೆಯ ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೆ ಯಾರು ಹೋಗುತ್ತಾರೋ, ಯಾರು ಹೋಗುವುದಿಲ್ಲವೋ ಎಂಬುದು ಅವರವರಿಗೆ ಬಿಟ್ಟ ವಿಚಾರವಾಗಿದೆ. ಆದರೆ ರಾಮಮಂದಿರಲ್ಲಿ ದೇವಸ್ಥಾನದ ಬಾಗಿಲು ತೆರೆಯುವುದರೊಂದಿಗೆ ಜನರ ಹೃದಯದ ಬಾಗಿಲುಗಳೂ ತೆರೆದು ಮುಸ್ಲಿಮರ ಮೇಲಿನ ದ್ವೇಷ ಕೊನೆಗೊಳ್ಳಲಿ ಎಂದು ಆಶಿಸುತ್ತೇನೆ. ಇದು ನನ್ನ ಪ್ರಾರ್ಥನೆ ಕೂಡ ಆಗಿದೆ ಎಂದರು.

ರಾಮನು (Ram) ನನ್ನಂತೆಯೇ ನಿಮ್ಮವನು ಕೂಡ. ನಾನು ಪಾಕಿಸ್ತಾನಿ ವಿದ್ವಾಂಸರ ಕುರಾನ್‌ನ ಅನುವಾದವನ್ನು ಓದಿದ್ದೇನೆ. ಎಲ್ಲರೂ ಸಹೋದರತ್ವ ಮತ್ತು ಪ್ರೀತಿಯಿಂದ ಮುಂದುವರಿಯಬೇಕೆಂದು ರಾಮ ಬಯಸುತ್ತಾರೆ. ಭಾರತವನ್ನು ರಾಮ ‘ರಾಜ್ಯ’ ಮಾಡಲು ಬಯಸಿದ್ದಾರೆ ಎಂದು ಹೇಳುತ್ತಾರೆ. ಇದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಮಮಂದಿರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ: ಫಾರೂಕ್‌ ಅಬ್ದುಲ್ಲಾ

ayodhya ram mandir

ನಾನು ಹಲವಾರು ವರ್ಷಗಳಿಂದ ವಿವಿಧ ದೇವಾಲಯಗಳಲ್ಲಿ ಮನಃಪೂರ್ವಕವಾಗಿ ರಾಮನ ‘ಭಜನೆ’ಗಳನ್ನು ಹಾಡಿದ್ದೇನೆ. ಯಾರ ಟೀಕೆಗಳಿಗೂ ನಾನು ಹೆದರುವುದಿಲ್ಲ. ಏಕೆಂದರೆ ನಾವು ಭಾರತ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಉಳಿಸಬೇಕಾದರೆ ಅದನ್ನು ಮಾಡಬೇಕು. ಮುಂದೆ ಸಾಗಲು ನಾವು ಕೈ ಜೋಡಿಸಬೇಕಾಗಿದೆ ಎಂದು ತಿಳಿಸಿದರು.

ಚುನಾವಣೆ (Election) ಸಮೀಪಿಸುತ್ತಿದ್ದು, ಕೆಲವರು ರಾಮ ಮಂದಿರದ ಹೆಸರಿನಲ್ಲಿ ಜೈ ಶ್ರೀ ರಾಮ್ (Jai Shri Ram) ಎಂದು ಘೋಷಣೆ ಕೂಗಿ ಮತ ಕೇಳುತ್ತಿದ್ದಾರೆ ಎಂದು ಇದೇ ವೇಳೆ ಅಬ್ದುಲ್ಲಾ ಅವರು ಹೆಸರೇಳದೆ ಬಿಜೆಪಿಗೆ (BJP) ಪರೋಕ್ಷವಾಗಿ ಟಾಂಗ್‌ ಕೊಟ್ಟರು. ಧರ್ಮ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಮತ್ತು ದ್ವೇಷವನ್ನು ಹರಡುವ ಜನರು ಅವರು ಎಂದು ವಾಗ್ದಾಳಿ ನಡೆಸಿದರು.

Share This Article