ಬೆಂಗಳೂರು/ಬೆಳಗಾವಿ: ಸರ್ಕಾರಿ ಜಮೀನಿನ ಅಕ್ರಮ ಪರಭಾರೆಗೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಅಂತ ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಭರವಸೆ ನೀಡಿದ್ದಾರೆ.
ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ನಾರಾಯಣಸ್ವಾಮಿ (Narayanaswamy) ಪ್ರಶ್ನೆ ಕೇಳಿದರು. ಬೆಂಗಳೂರು, ಬೆಂಗಳೂರು ಗ್ರಾಮಾಂತರದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಆಗಿದೆ. ಇದಕ್ಕೆ ಸರ್ಕಾರಿ ಅಧಿಕಾರಗಳೇ ಕೈ ಜೋಡಿಸಿದ್ದಾರೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಂತ ಒತ್ತಾಯ ಮಾಡಿದ್ರು.
ಇದಕ್ಕೆ ಉತ್ತರ ನೀಡಿದ ಸಚಿವರು, ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ 51,555 ಎಕರೆ ಸರ್ಕಾರಿ ಜಮೀನು ಗೋಮಾಳ ಅತಿಕ್ರಮವಾಗಿದೆ. ಈ ಸಂಬಂಧ 23307 ಪ್ರಕರಣ ದಾಖಲಾಗಿದೆ. 51,555 ಎಕರೆ ಪೈಕಿ 12434 ಪ್ರಕರಣಗಳಲ್ಲಿ ಸುಮಾರು 28,264 ಎಕರೆ ಒತ್ತುವರಿ ತೆರವು ಆಗಿದೆ. ರಾಜ್ಯಾದ್ಯಂತ 63,32,484 ಸರ್ಕಾರಿ ಎಕರೆ ಜಾಗ ಇದೆ. ಇದರಲ್ಲಿ 14,72,493 ಎಕರೆ ಜಮೀನು ಒತ್ತುವರಿ ಆಗಿದೆ ಎಂದರು. ವಿವಿಧ ನ್ಯಾಯಾಲಯಗಳಲ್ಲಿರುವ ಪ್ರಕರಣಗಳು, ಅಕ್ರಮ, ಸಕ್ರಮ ಯೋಜನೆ, ಸಾರ್ವಜನಿಕ ಬಳಕೆಗೆ 10,82,752 ಎಕರೆ ಜಮೀನು ಇದೆ. ಉಳಿದಂತೆ 3,89,741 ಎಕರೆ ಒತ್ತುವರಿ ತರವು ಮಾಡಬೇಕಿದೆ. ಈ ಪೈಕಿ 2,73,778 ಎಕರೆ ಒತ್ತುವರಿ ತೆರವು ಮಾಡಲಾಗಿದೆ ಎಂದರು. ಇದನ್ನೂ ಓದಿ: ಲೋಕಸಭೆಯಲ್ಲಿ ಸ್ಮೋಕ್ ಬಾಂಬ್ – ಪ್ರತಾಪ್ ಸಿಂಹ ಕಚೇರಿಯಿಂದಲೇ ಪಾಸ್ ವಿತರಣೆ
ಸರ್ಕಾರಿ ಭೂ ಒತ್ತುವರಿ ಎಂಬುದು ಬೆಂಗಳೂರು ಮಾತ್ರವಲ್ಲ ರಾಜ್ಯಾದ್ಯಂತ ಇದೀಗ ದೊಡ್ಡ ಸಮಸ್ಯೆಯಾಗಿದೆ. ಸರ್ಕಾರಿ ಅಧಿಕಾರಿಗಳೇ ಭೂ ಮಾಫಿಯಾ ಜೊತೆಗೆ ಕೈಜೋಡಿಸಿ ಸರ್ಕಾರಿ ಜಮೀನುಗಳನ್ನು ಖಾಸಗಿಯವರಿಗೆ ಅಕ್ರಮವಾಗಿ ಪರಭಾರೆ ಮಾಡುತ್ತಿರುವುದು ದುರಾದೃಷ್ಟಕರ. ಈ ವಿಚಾರವನ್ನು ಸರ್ಕಾರ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು,ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದೆ ಎಂದರು.
ಸರ್ಕಾರಿ ಭೂಮಿ ಅಕ್ರಮ ಪರಭಾರೆ ಪ್ರಕರಣದಲ್ಲಿ ಬೆಂಗಳೂರಿನ ಉಪವಿಭಾಗಾಧಿಕಾರಿ ವಿರುದ್ಧ ಎರಡು ಎಫ್ ಐಆರ್ ದಾಖಲು ಮಾಡಲಾಗಿದೆ. ಆನೇಕಲ್ ತಹಶೀಲ್ದಾರ್ ಕೆಆರ್ ಪುರ ತಹಶೀಲ್ದಾರ್ ಹಾಗೂ ಯಲಹಂಕ ತಹಶೀಲ್ದಾರ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಈ ಎಲ್ಲಾ ಪ್ರಕರಣದಲ್ಲೂ ಎಫ್ಐಆರ್ ಜೊತೆಗೆ ಕ್ರಿಮಿನಲ್ ಪ್ರಕರಣವನ್ನೂ ದಾಖಲಿಸಿ ವಿಚಾರಣೆ ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ ಅಕ್ರಮದಲ್ಲಿ ಶಾಮೀಲಾದ ಎಲ್ಲಾ ಅಧಿಕಾರಿಗಳ ವಿಚಾರದಲ್ಲೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಸರ್ಕಾರಿ ಜಮೀನಿನ ರಕ್ಷಣೆಗಾಗಿ ಸರ್ಕಾರ ಮುಂದಾಗಿದೆ. ಸರ್ಕಾರಿ ದಾಖಲೆಗಳಲ್ಲಿರುವ ಎಲ್ಲಾ ಸರ್ಕಾರಿ ಜಮೀನಿನ ವಿವರಗಳನ್ನೂ ಈಗಾಗಲೇ ಬೀಟ್ ಆ್ಯಪ್ಗೆ ಅಪ್ಲೋಡ್ ಮಾಡಲಾಗಿದೆ. ಅಲ್ಲದೆ ಮೊಬೈಲ್ ಆ್ಯಪ್ ಮೂಲಕ ಖಾಲಿ ಜಾಗಗಳ ಜಿ.ಪಿ.ಎಸ್ ಲೋಕೇಶನ್ ಮಾರ್ಕ್ ಮಾಡಿ, ಬೌಂಡರಿ ಫಿಕ್ಸ್ ಮಾಡಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಖಾಲಿ ಜಾಗಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲು ಬೀಟ್ ಸಿಸ್ಟಂ ಜಾರಿ ಮಾಡಲಾಗಿದೆ. ಒತ್ತುವರಿಯಾಗಿರುವುದು ಕಂಡುಬಂದರೆ ಕೂಡಲೇ ಸಂಬಂಧ ಪಟ್ಟ ತಹಶೀಲ್ದಾರ್ ತೆರವುಗೊಳಿಸಬೇಕು. ಬೀಟ್ ಸಿಸ್ಟಂ ಮೊಬೈಲ್ ಲೋಕೇಶನ್ ಆಧಾರದ ಮೇಲೆ ಕಾರ್ಯ ನಿರ್ವಹಿಸುವುದರಿಂದ ಅಧಿಕಾರಿಗಳು ಕಡ್ಡಾಯ ಸ್ಥಳಕ್ಕೆ ತೆರಳಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ವೇಳೆ ಯಲಹಂಕ ಸೇರಿ ಹಲವು ತಾಲೂಕು ತಹಶೀಲ್ದಾರರು ಕೋಟಿ ಕೋಟಿ ಹಣ ಕೊಟ್ಟು ಪೋಸ್ಟಿಂಗ್ ಹಾಕಿಸಿಕೊಳ್ತಾರೆ. ಹೀಗಾಗಿ ಪ್ರಮುಖ ತಾಲೂಕಿನ ತಹಶೀಲ್ದಾರರ ನೇಮಕಕ್ಕೆ ಕೌನ್ಸಿಲಿಂಗ್ ನಡೆಸಬೇಕು ಅಂತ ನಾರಾಯಣಸ್ವಾಮಿ ಒತ್ತಾಯ ಮಾಡಿದ್ರು. ಇದಕ್ಕೆ ಸಚಿವರು ನಿರಾಕರಿಸಿದರು.