ಮುಂಬೈ: ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿಯ ನಡುವೆ ವೈಮನಸ್ಸು ಉಂಟಾಗುತ್ತಿರುವುದು ಸಹಜವಾಗಿಬಿಟ್ಟಿದೆ. ಸಣ್ಣ ಸಣ್ಣ ಕಾರಣಕ್ಕೆ ಭಿನ್ನಾಭಿಪ್ರಾಯ ಮೂಡುತ್ತಿದ್ದು, ಕೊಲೆಯಲ್ಲಿ ಅಂತ್ಯವಾಗುತ್ತಿದೆ. ಇದಕ್ಕೆ ಪುಣೆಯಲ್ಲಿ ನಡೆದಿರುವ ಘಟನೆ ತಾಜಾ ಉದಾಹರಣೆಯಾಗಿದೆ.
ಹೌದು. 36 ವರ್ಷದ ವ್ಯಕ್ತಿಯೊಬ್ಬ ತನ್ನ ಹುಟ್ಟುಹಬ್ಬಕ್ಕೆ ದುಬೈಗೆ (Dubai Trip) ಕರೆದುಕೊಂಡು ಹೋಗಲಿಲ್ಲ ಅಂತಾ, ಹೆಂಡತಿ ತನ್ನ ಗಂಡನನ್ನ ಹೊಡೆದು ಸಾಯಿಸಿದ್ದಾಳೆ. ಗಂಡನ ಮುಖಕ್ಕೆ ಗುದ್ದಿ ಸಾಯಿಸಿದ್ದಾಳೆ. ಪುಣೆಯ ವನವಡಿ ಪ್ರದೇಶದಲ್ಲಿರುವ ಅಪಾರ್ಟ್ಮೆಂಡ್ನಲ್ಲಿ ಈ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ನಿಖಿಲ್ ಘನ್ನಾ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಉದ್ಯಮಿಯಾಗಿದ್ದ ಈತ 6 ವರ್ಷಗಳ ಹಿಂದೆ ರೇಣುಕಾ ಎಂಬ ಮಹಿಳೆಯೊಂದಿಗೆ ಪ್ರೇಮ ವಿವಾಹವಾಗಿದ್ದರು.
ಪ್ರಾಥಮಿಕ ತನಿಖೆ ಪ್ರಕಾರ, ಶುಕ್ರವಾರ ಮಧ್ಯಾಹ್ನದ ವೇಳೆಗೆ ಘಟನೆ ನಡೆದಿದೆ. ರೇಣುಕಾ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು (Birthday Celebration) ಪತಿ ನಿಖಿಲ್ ದುಬೈಗೆ ಕರೆದುಕೊಂಡು ಹೋಗದ ಕಾರಣ ಇಬ್ಬರ ನಡುವೆ ಜಗಳವಾಗಿತ್ತು. ಅಲ್ಲದೇ ತನ್ನ ಹುಟ್ಟುಹಬ್ಬ ಮತ್ತು ವಾರ್ಷಿಕೋತ್ಸವಕ್ಕೂ ದುಬಾರಿ ಉಡುಗೊರೆ ನೀಡಲಿಲ್ಲ. ತಮ್ಮ ಸಂಬಂಧಿಕರ ಹುಟ್ಟುಹಬ್ಬಕ್ಕೆ ರೇಣುಕಾ ಹೋಗಬೇಕು ಅಂದಾಗಲೂ ನಿಖಿಲ್ ಆಕೆಯನ್ನು ತಡೆದಿದ್ದರು. ಇದರಿಂದ ರೇಣುಕಾ ಅಸಮಾಧಾನಗೊಂಡಿದ್ದಳು.
ಶುಕ್ರವಾರ ದುಬೈಗೆ ಕರೆದುಕೊಂಡು ಹೋಗದಿರುವ ಬಗ್ಗೆ ಇಬ್ಬರ ನಡುವೆ ಜಗಳವಾಗಿದೆ. ಆಗ ಕೋಪದಲ್ಲಿ ರೇಣುಕಾ ನಿಖಿಲ್ನ ಮುಖಕ್ಕೆ ಗುದ್ದಿದ್ದಾಳೆ. ಗುದ್ದಿದ ರಭಸಕ್ಕೆ ನಿಖಿಲ್ನ ಮೂಗು ಮತ್ತು ಕೆಲವು ಹಲ್ಲುಗಳು ಮುರಿದಿವೆ. ತೀವ್ರ ರಕ್ತಸ್ರಾವದಿಂದ ನಿಖಿಲ್ ಪ್ರಜ್ಞೆ ಕಳೆದುಕೊಂಡು, ಕೆಲ ಸಮಯದ ನಂತರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಅರ್ಜಿದಾರರಿಗೆ ಗುಡ್ನ್ಯೂಸ್ – ಚುನಾವಣೆಗೂ ಮುನ್ನ ಸಲ್ಲಿಸಿದ ಅರ್ಜಿಗಳ ವಿಲೇವಾರಿ
ಸದ್ಯ ಪೊಲೀಸರು ರೇಣುಕಾ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಹೆಚ್ಚಿನ ತನಿಖೆಗಾಗಿ ಆಕೆಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: Kambala: ಇಂದಿನಿಂದ 2 ದಿನ ಬೆಂಗ್ಳೂರಿನಲ್ಲಿ ಕಂಬಳದ ರಂಗು – ಸಾರ್ವಜನಿಕರಿಗೆ ಪ್ರವೇಶ ಉಚಿತ